ಸಾರಾಂಶ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಯಕ್ಷಗಾನ ಮಂಡಳಿಯ ಎಲ್ಲಾ ಆರು ಮೇಳಗಳ 2023-24ರ ಸಾಲಿನ ತಿರುಗಾಟ ಗುರುವಾರ ರಾತ್ರಿ ಕಟೀಲಿನಲ್ಲಿ ವಿಧ್ಯುಕ್ತವಾಗಿ ಆರಂಭವಾಯಿತು. ಈ ಪ್ರಯುಕ್ತ ಸಂಜೆ ದೇವರ ಎದುರು ಮೇಳದ ದೇವರು, ಆಭರಣ, ಆಯುಧ, ಇತ್ಯಾದಿಗಳನ್ನು ಇಟ್ಟು ಪೂಜೆ ನಡೆದು, ಯಕ್ಷಗಾನ ತಾಳಮದ್ದಳೆ ನಡೆಯಿತು.ಬಳಿಕ ದೇವಸ್ಥಾನದಲ್ಲಿ ಆಸ್ರಣ್ಣರು ಕಲಾವಿದರಿಗೆ ಗೆಜ್ಜೆ ಹಸ್ತಾಂತರ ಮಾಡಿದರು. ಕಲಾವಿದರು ಗೆಜ್ಜೆ ಕಟ್ಟಿದರು. ರಾತ್ರಿ ಚೌಕಿ ಪೂಜೆ ಬಳಿಕ ಆರು ರಂಗಸ್ಥಳಗಳಲ್ಲಿ ಏಕಕಾಲಕ್ಕೆ ಪೂರ್ವರಂಗ ಪ್ರದರ್ಶನ ನಡೆಯಿತು. ಬಳಿಕ ಇಡೀ ರಾತ್ರಿ ‘ಪಾಂಡವಾಶ್ವಮೇಧ’ ಬಯಲಾಟ ಪ್ರದರ್ಶನ ನಡೆಯಿತು.ದೇವಳದ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಮೇಳಗಳ ಸಂಚಾಲಕ ಕೆ.ದೇವಿಪ್ರಸಾದ್ ಶೆಟ್ಟಿ, ಆಸ್ರಣ್ಣ ಬಂಧುಗಳು ಹಾಜರಿದ್ದರು.