ನಕ್ಸಲ್ ಹಾಗೂ ಎಎನ್‌ಎಫ್ ನಡುವಿನ ಮುಖಾಮುಖಿ - ಪ್ಲಾನ್‌ ಮಾಡಿರಲಿಲ್ಲ, ಫೇಕ್‌ ಅಲ್ಲ: ಡಿಜಿಪಿ

| Published : Nov 21 2024, 01:02 AM IST / Updated: Nov 21 2024, 04:49 AM IST

ನಕ್ಸಲ್ ಹಾಗೂ ಎಎನ್‌ಎಫ್ ನಡುವಿನ ಮುಖಾಮುಖಿ - ಪ್ಲಾನ್‌ ಮಾಡಿರಲಿಲ್ಲ, ಫೇಕ್‌ ಅಲ್ಲ: ಡಿಜಿಪಿ
Share this Article
  • FB
  • TW
  • Linkdin
  • Email

ಸಾರಾಂಶ

ನಕ್ಸಲ್ ಹಾಗೂ ಎಎನ್‌ಎಫ್ (ನಕ್ಸಲ್‌ ನಿಗ್ರಹದಳ) ನಡುವಿನ ಮುಖಾಮುಖಿಯಲ್ಲಿ ಮೋಸ್ಟ್‌ ವಾಂಟೆಡ್‌ ನಕ್ಸಲ್ ವಿಕ್ರಂ ಗೌಡನ ಎನ್‌ಕೌಂಟರ್ ನಡೆದಿದೆ. ಎನ್‌ಕೌಂಟರ್‌ ಫೇಕ್‌ ಅಲ್ಲ, ಈ ಬಗ್ಗೆ ಪ್ಲ್ಯಾನ್‌ ಕೂಡ ಮಾಡಿರಲಿಲ್ಲ ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ತಿಳಿಸಿದರು.

 ಉಡುಪಿ : ನಕ್ಸಲ್ ಹಾಗೂ ಎಎನ್‌ಎಫ್ (ನಕ್ಸಲ್‌ ನಿಗ್ರಹದಳ) ನಡುವಿನ ಮುಖಾಮುಖಿಯಲ್ಲಿ ಮೋಸ್ಟ್‌ ವಾಂಟೆಡ್‌ ನಕ್ಸಲ್ ವಿಕ್ರಂ ಗೌಡನ ಎನ್‌ಕೌಂಟರ್ ನಡೆದಿದೆ. ಎನ್‌ಕೌಂಟರ್‌ ಫೇಕ್‌ ಅಲ್ಲ, ಈ ಬಗ್ಗೆ ಪ್ಲ್ಯಾನ್‌ ಕೂಡ ಮಾಡಿರಲಿಲ್ಲ ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ತಿಳಿಸಿದರು.

ಉಡುಪಿ ಜಿಲ್ಲೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸೋಮವಾರ ಸಂಜೆ ಸುಮಾರು 6 ಗಂಟೆ ಹೊತ್ತಿನಲ್ಲಿ ಹೆಬ್ರಿ ತಾಲೂಕಿನ ನಾಡ್ಪಾಲಿನ ಪೀತಾಬೈಲು ಎಂಬಲ್ಲಿನ ಮನೆ ಬಳಿ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ, ಆತನ ಬಳಿ ಮೆಷಿನ್ ಗನ್, ಪಿಸ್ತೂಲ್‌, ಚಾಕು ದೊರಕಿದೆ. ಕಾರ್ಯಾಚರಣೆ ವೇಳೆ ಎಷ್ಟು ನಕ್ಸಲರು ಇದ್ದರು ಎಂದು ಎಎನ್‌ಎಫ್‌ಗೆ ಮಾಹಿತಿ ಇಲ್ಲ. ಎನ್‌ಕೌಂಟರ್‌ ಫೇಕ್‌ ಅಲ್ಲ, ಈ ಬಗ್ಗೆ ಪ್ಲ್ಯಾನ್‌ ಕೂಡ ಮಾಡಿರಲಿಲ್ಲ. ಈ ವಿಷಯದಲ್ಲಿ ಯಾವುದೇ ಸಂಶಯ ಬೇಡ. ನಕ್ಸಲ್ ಪ್ರತಿದಾಳಿ ಸಾಧ್ಯತೆ ಬಗ್ಗೆ ಅಲರ್ಟ್ ಆಗಿದ್ದೇವೆ. ಅದನ್ನು ತಡೆಯುತ್ತೇವೆ ಎಂದು ತಿಳಿಸಿದರು.

ವಿಕ್ರಂ ಗೌಡ ಶರಣಾಗತಿ ಬಗ್ಗೆ ಮಾತನಾಡಿ, ಆತನ ಶರಣಾಗತಿಗೆ ಯಾವುದೇ ಪತ್ರ ವ್ಯವಹಾರ ನಡೆದಿರಲಿಲ್ಲ. ವಿಕ್ರಂ ಗೌಡನ ಮೇಲೆ ಹಲವಾರು ಕೇಸುಗಳಿದ್ದವು. ಆತ ಮೋಸ್ಟ್ ವಾಂಟೆಡ್, ರಾಜ್ಯಮಟ್ಟದ ನಕ್ಸಲ್‌ ನಾಯಕನಾಗಿದ್ದ. ಮಲೆನಾಡಿನ ಭಾಗದ ಕಾಡುಗಳಲ್ಲಿ ಇನ್ನೂ ಕೂಂಬಿಂಗ್ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಮಲೆನಾಡು ಪ್ರದೇಶಗಳಾದ ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ದ.ಕ.,ಕೇರಳ ನಡುವೆ ನಕ್ಸಲ್ ಚಟುವಟಿಕೆಗಳಿವೆ. ಕೇರಳ ಜೊತೆ ನಮ್ಮ ರಾಜ್ಯದ ಎಎನ್‌ಎಫ್ ಸಂಪರ್ಕ, ಸಂಬಂಧ ಚೆನ್ನಾಗಿದೆ.‌ ಈ ವರ್ಷದ ಏಪ್ರಿಲ್‌ನಲ್ಲಿ ದಕ್ಷಿಣ ಕನ್ನಡ, ಕೊಡಗಿನಲ್ಲಿ ವಿಕ್ರಂ ಗೌಡನ ಚಲನವಲನಗಳು ಕಂಡು ಬಂದಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿದ್ದೆವು ಎಂದರು.

ನಕ್ಸಲರ ಶರಣಾಗತಿ ನಮ್ಮ ಮೂಲ ಉದ್ದೇಶವೇ ಹೊರತು ಎನ್‌ಕೌಂಟರ್ ಅಲ್ಲ. ಶರಣಾಗತಿ ಪ್ಯಾಕೇಜ್, ಪುನರ್ವಸತಿ ಪ್ಯಾಕೇಜ್‌ಗಳಿವೆ. ಅದನ್ನು ಬಳಸಿಕೊಂಡು ನಕ್ಸಲರು ಮುಖ್ಯವಾಹಿನಿಗೆ ಬರಬಹುದಾಗಿದೆ. ನಕ್ಸಲ್‌ ಚಟುವಟಿಕೆ ಬಗ್ಗೆ ಸಾರ್ವಜನಿಕರು ಭಯಪಡಬೇಕಾದ ಅವಶ್ಯಕತೆ ಇಲ್ಲ. ಜನರ ರಕ್ಷಣೆಗಾಗಿಯೇ ನಾವಿದ್ದೇವೆ. ಊಹಾಪೋಹ ಮತ್ತು ಅರ್ಧ ಸತ್ಯದ ಮಾಹಿತಿಗೆ ಯಾರೂ ಕಿವಿಗೊಡಬಾರದು ಎಂದು ಅವರು ಸಲಹೆ ನೀಡಿದರು.

--ಮನಸ್ಸು ಬದಲಾಯಿಸಿ ಅಂತ್ಯಸಂಸ್ಕಾರ ನಡೆಸಿದ ವಿಕ್ರಂಗೌಡ ಕುಟುಂಬ

- ಶವಸಂಸ್ಕಾರ ನಡೆಸಲ್ಲ ಎಂದಿದ್ದ ಮನೆಯವರು- ಕೊನೆಗೆ ಪಿತ್ರಾರ್ಜಿತ ಜಮೀನಿನಲ್ಲೇ ಅಗ್ನಿಸ್ಪರ್ಶ

ಕಾರ್ಕಳ :  ಸೋಮವಾರ ರಾತ್ರಿ ಪೀತಾಬೈಲಿನಲ್ಲಿ ನಡೆದ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಮೋಸ್ಟ್ ವಾಂಟೆಡ್‌ ನಕ್ಸಲ್‌ ನಾಯಕ ವಿಕ್ರಂ ಗೌಡನ‌ ಅಂತ್ಯಸಂಸ್ಕಾರ ಅವನ ಹುಟ್ಟೂರು ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಮೈರೋಳಿ ಎಂಬಲ್ಲಿ ಆತನ ಸ್ವಂತ ಜಮೀನಿನಲ್ಲಿ ನೆರವೇರಿತು.ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಸುದ್ದಿ ಕೇಳಿ ಭಯ ಮತ್ತು ಆತಂಕದಲ್ಲಿದ್ದ ಆತನ ಮನೆಯವರು ಆತನ ಶವಸಂಸ್ಕಾರವನ್ನು ತಾವು ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ, ಬುಧವಾರ ಮನಸ್ಸು ಬದಲಾಯಿಸಿ, ತಮ್ಮ ಸಮುದಾಯದ ವಿ‍ಧಿವಿಧಾನಗ‍ಳಂತೆ ಅಂತ್ಯಸಂಸ್ಕಾರ ನಡೆಸಿದರು.

ಇದಕ್ಕೂ ಮೊದಲು ಮಂಗಳವಾರ ರಾತ್ರಿ ‍ಆತನ ಮೃತದೇಹವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ತರಲಾಗಿತ್ತು. ಬುಧವಾರ ಮುಂಜಾನೆ ಉಡುಪಿ ತಾಲೂಕು ನ್ಯಾಯಾಧೀಶರ ಉಪಸ್ಥಿತಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಸಂದರ್ಭ ಆತನಿಗೆ 7 ಗುಂಡು ತಗಲಿರುವುದು ಪತ್ತೆಯಾಯಿತು. ನಂತರ ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಲಾಯಿತು. ವಿಕ್ರಂ ಗೌಡನ ತಮ್ಮ ಮತ್ತು ತಂಗಿ ಮೃತದೇಹವನ್ನು ಪಡೆದುಕೊಂಡರು. ಈ ವೇಳೆ, ಮನೆ ಮಗನನ್ನು ಅನಾಥನಂತೆ ಪೊಲೀಸರು ಅಂತ್ಯಸಂಸ್ಕಾರ ಮಾಡುವುದು ಬೇಡ, ಆತನಿಗೆ ಸೇರಿದ ಭೂಮಿ ಇದೆ. ಅದರಲ್ಲಿಯೇ ಆತನನ್ನು ಮಣ್ಣು ಮಾಡುತ್ತೇವೆ ಎಂದು ತಮ್ಮ ಸುರೇಶ್‌ ಗೌಡ ಮತ್ತು ತಂಗಿ ಸುಗುಣಾ ಹೇಳಿದರು.

ಬಳಿಕ, ಪೊಲೀಸ್ ಬಂದೋಬಸ್ತ್‌ನಲ್ಲಿ ಮೃತದೇಹವನ್ನು ಆತ ಹುಟ್ಟಿ ಬೆಳೆದ ಮನೆಯಂಗಳಕ್ಕೆ ತಂದು ಸಂಬಂಧಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. 21 ವರ್ಷಗಳ ಬಳಿಕ ಆತನ ನಿಸ್ತೇಜ ಮುಖದರ್ಶನ ಮಾಡಿದ ಸಂಬಂಧಿಕರು ಮತ್ತು ಊರವರು ಭಾರವಾದ ಹೃದಯದಿಂದ ಆತನಿಗೆ ಅಂತಿಮ ಗೌರವ ಸಲ್ಲಿಸಿದರು.

ವಿಕ್ರಂ ಗೌಡನಿಗೆ ಪಿತ್ರಾರ್ಜಿತವಾಗಿ ಬಂದಿದ್ದ 1 ಎಕ್ರೆ ಜಮೀನಿನಲ್ಲಿ, ಹುಟ್ಟಿದ ಮನೆಯ ಮುಂದೆಯೇ, ತಮ್ಮ ಸುರೇಶ್ ಗೌಡ ಅಂತ್ಯಸಂಸ್ಕಾರದ ವಿಧಿಗಳನ್ನು ನೆರವೇರಿಸಿ, ಚಿತೆಗೆ ಬೆಂಕಿಯಿಟ್ಟರು. ಆತನ‌ ತಂಗಿ ಸುಗುಣಾ, ಆಕೆಯ ಪತಿ ಮತ್ತು ಸಂಬಂಧಿಕರು ಈ ಸಂದರ್ಭ ಉಪಸ್ಥಿತರಿದ್ದರು. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.