ನಿರಶನ ಮಾಡಿದರೆ ಆತ್ಮಹತ್ಯೆ ಯತ್ನ ಕೇಸ್‌!

| Published : Jul 02 2024, 01:33 AM IST / Updated: Jul 02 2024, 06:28 AM IST

ನಿರಶನ ಮಾಡಿದರೆ ಆತ್ಮಹತ್ಯೆ ಯತ್ನ ಕೇಸ್‌!
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳನ್ನು ರಾಜ್ಯ ಸರ್ಕಾರ ವಿರೋಧಿಸಲು ಸಜ್ಜಾಗಿದ್ದು,   ಕಾಯ್ದೆಗಳನ್ನು ತಡೆಹಿಡಿಯಬೇಕು  ಇಲ್ಲದಿದ್ದರೆ, ಸಂವಿಧಾನದಲ್ಲಿ ಲಭ್ಯವಿರುವ ಅಧಿಕಾರ ಬಳಸಿಕೊಂಡು ನಾವೇ ತಿದ್ದುಪಡಿ ತರುತ್ತೇವೆ ಎಂದು ಎಚ್ಚರಿಕೆ

  ಬೆಂಗಳೂರು : ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳನ್ನು ರಾಜ್ಯ ಸರ್ಕಾರ ವಿರೋಧಿಸಲು ಸಜ್ಜಾಗಿದ್ದು, ಈ ಕಾಯ್ದೆಗಳನ್ನು ತಡೆಹಿಡಿಯಬೇಕು ಅಥವಾ ಹಿಂಪಡೆಯಬೇಕು. ಇಲ್ಲದಿದ್ದರೆ, ಸಂವಿಧಾನದಲ್ಲಿ ಲಭ್ಯವಿರುವ ಅಧಿಕಾರ ಬಳಸಿಕೊಂಡು ಸದರಿ ಕಾಯ್ದೆಗಳಿಗೆ ನಾವೇ ತಿದ್ದುಪಡಿ ತರುತ್ತೇವೆ ಎಂದು ಎಚ್ಚರಿಕೆ ನೀಡಿದೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ್, ಈ ಕಾಯ್ದೆಗಳಲ್ಲಿ ಹಲವು ಗೊಂದಲ, ಲೋಪಗಳಿವೆ. ಇವುಗಳನ್ನು ಸರಿಪಡಿಸುವಂತೆ ಈ ಹಿಂದೆಯೇ ರಾಜ್ಯ ಸರ್ಕಾರ ಕೇಂದ್ರಕ್ಕೆ ತನ್ನ ಸಲಹೆ ನೀಡಿತ್ತು. ಆದರೆ, ಇದ್ಯಾವುದನ್ನೂ ಪರಿಗಣಿಸಿಲ್ಲ. ಹೀಗಾಗಿ ಸಂವಿಧಾನದಲ್ಲಿ ಲಭ್ಯವಿರುವ ಅಧಿಕಾರ ಬಳಸಿಕೊಂಡು ಕಾಯ್ದೆಗಳಿಗೆ ತಿದ್ದುಪಡಿ ತರಲಾಗುವುದು ಎಂದು ತಿಳಿಸಿದರು.

ಕಾಯ್ದೆಗಳಲ್ಲಿ ಇರುವ ಯಾವೆಲ್ಲಾ ಅಂಶಗಳ ತಿದ್ದುಪಡಿ ಆಗಬೇಕೆಂಬ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ನಂತರ ತಿದ್ದುಪಡಿ ವಿಧೇಯಕಗಳನ್ನು ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸಿ ರಾಷ್ಟ್ರಪತಿಗೆ ಕಳುಹಿಸಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಈ ಕಾಯ್ದೆಗಳಲ್ಲಿ ಇದುವರೆಗೂ 23ಕ್ಕೂ ಹೆಚ್ಚು ಅಂಶಗಳನ್ನು ನಾವು ಪಟ್ಟಿ ಮಾಡಿ ಅವುಗಳ ತಿದ್ದುಪಡಿಗೆ ಸಲಹೆ ನೀಡಿದ್ದೆವು. ಉದಾಹರಣೆಗೆ ಸ್ವಾತಂತ್ರ್ಯ ಹೋರಾಟದ ವೇಳೆ ಪರಿಣಾಮಕಾರಿ ಅಸ್ತ್ರವಾಗಿದ್ದ ಉಪವಾಸ ಸತ್ಯಾಗ್ರಹವನ್ನು ಆತ್ಮಹತ್ಯೆ ಯತ್ನ ಎಂದು ಪರಿಗಣಿಸಿ ಕ್ರಿಮಿನಲ್‌ ಪ್ರಕರಣವಾಗಿ ಪರಿಗಣಿಸಲಾಗುತ್ತಿದೆ. ಇದರಿಂದ ಉಪವಾಸ ಸತ್ಯಾಗ್ರಹದ ಮೂಲಕ ಪ್ರತಿಭಟಿಸುವ ಹಕ್ಕು ಮೊಟಕುಗೊಳಿಸಲಾಗುತ್ತಿದೆ ಎಂದರು.

ಅಲ್ಲದೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಮಹಾತ್ಮ ಗಾಂಧೀಜಿ ಅವರಿಗೆ ಅವಮಾನ ಮಾಡುವುದನ್ನು ಗಂಭೀರ ಪ್ರಕರಣವಾಗಿ ಪರಿಗಣಿಸಲಾಗಿಲ್ಲ. ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ಅಪರಾಧಗಳಿಗೆ ಕೇವಲ ಮೂರು ವರ್ಷಗಳ ಕಾರಾಗೃಹ ವಾಸ ಅಥವಾ ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶ ಕಲ್ಪಿಸಲಾಗಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆನ್ನಲಾದ ಆರೋಪಿಗಳ ಆಸ್ತಿಪಾಸ್ತಿ ಜಪ್ತಿ ಮಾಡಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ಪೊಲೀಸ್ ಕಸ್ಟಡಿ ಅವಧಿಯನ್ನು 90 ದಿನಗಳಿಗೆ ಹೆಚ್ಚಿಸಲಾಗಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದು ಹೇಳಿದರು.

ರಾಜಕೀಯ ಅಸಂಬದ್ಧ ಕ್ರಮ:

ಕೇಂದ್ರ ಸರ್ಕಾರವು ತನ್ನ ಹಿಂದಿನ ಅವಧಿಯಲ್ಲಿ ರೂಪಿಸಿದ್ದ ಕಾಯ್ದೆಯನ್ನು ಇದೀಗ ಯಾವುದೇ ಚರ್ಚೆಯಿಲ್ಲದೆ ಜಾರಿಗೊಳಿಸಿದೆ. ಇದು ಸರಿಯಲ್ಲ. ಏಕೆಂದರೆ, ಯಾವುದೇ ಒಂದು ಕಾನೂನು ರೂಪುಗೊಂಡರೆ ಅದು ಅದೇ ಸರ್ಕಾರದ ಅವಧಿಯಲ್ಲಿ ಜಾರಿಯಾಗಬೇಕು. ಇದಾಗದ ಪಕ್ಷದಲ್ಲಿ ಮತ್ತೆ ಅದೇ ಪಕ್ಷ ಅಧಿಕಾರಕ್ಕೆ ಬಂದಾಗ ಹಳೆ ನೀತಿ ಜಾರಿಗೊಳಿಸುವ ಮುನ್ನ ಮತ್ತೊಮ್ಮೆ ಕಾನೂನು ಜಾರಿ ಪ್ರಕ್ರಿಯೆಯನ್ನು ನಡೆಸಬೇಕು. ಆದರೆ, ಈ ಸರ್ಕಾರ ಸದರಿ ಪ್ರಕ್ರಿಯೆ ನಡೆಸದೆ ಹಳೆ ಕಾಯ್ದೆಯನ್ನು ಜಾರಿಗೊಳ್ಳಲು ಮುಂದಾಗಿರುವುದು ಅನೈತಿಕ ಹಾಗೂ ರಾಜಕೀಯ ಅಸಂಬದ್ಧ ಕ್ರಮ ಎಂದು ಅವರು ಆರೋಪಿಸಿದರು.

ಈ ಕಾನೂನುಗಳನ್ನು ಜಾರಿಗೆ ತರುವಾಗ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳು ನೀಡಿರುವ ಸಲಹೆ, ಅಭಿಪ್ರಾಯಗಳನ್ನು ಪರಿಗಣಿಸಲಾಗಿಲ್ಲ ಎಂದು ದೂರಿದ ಅವರು, 2023ರಲ್ಲಿ ಅಮಿತ್ ಶಾ ಅವರು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಮೂರು ಕಾನೂನುಗಳು ಮಸೂದೆ ಹಂತದಲ್ಲಿ ಇರುವಾಗ ಸಲಹೆ ಸೂಚನೆ ಕೇಳಿದ್ದರು. ಅದರಂತೆ ತಜ್ಞರ ಸಮಿತಿ ರಚಿಸಿ ಅಭಿಪ್ರಾಯ ಪಡೆದು ರಾಜ್ಯ ಸರ್ಕಾರ ಕೇಂದ್ರದ ಆಗಿನ ಸಚಿವ ಅಮಿತ್ ಶಾಗೆ 23 ಸಲಹೆಗಳೊಂದಿಗೆ ವರದಿಯನ್ನು ನೀಡಿದ್ದರು. ಆದರೆ, ಈ ಯಾವ ಸಲಹೆಯನ್ನೂ ಪರಿಗಣಿಸಲಾಗಿಲ್ಲ ಎಂದು ಅವರು ಆರೋಪಿಸಿದರು.