ಸಾರಾಂಶ
ಕನ್ನಡಪ್ರಭ ವಾರ್ತೆ ಔರಾದ್
ಒಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಆಗಬೇಕಂದ್ರೆ ಅಲ್ಲಿ ಎಲ್ಲವೂ ಸಿಗಬೇಕು. ಮೂಲವಾಗಿ ಕ್ಷೇತ್ರದ ಆಡಳಿತ ಸುಲಭವಾಗಿರಬೇಕು. ಆದ್ರೆ ಔರಾದ್ ತಾಲೂಕಿನ ಬಹುಪಾಲು ಅಧಿಕಾರಿಗಳು ಮಾತ್ರ ಕೇಂದ್ರ ಸ್ಥಾನ ಬಿಟ್ಟು ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಮಾಡುತ್ತಿರುವುದರಿಂದ ಕ್ಷೇತ್ರದ ಅಭಿವೃದ್ಧಿ ಹೀನವಾಗಲು ಕಾರಣವಾಗ್ತಿದೆ.ಅಧಿಕಾರಿಗಳು ಬೀದರ್ನಿಂದ ಔರಾದ್ಗೆ ವಾರಕ್ಕೆ ಒಂದೆರಡು ದಿನ ಹಾಗೇ ಬಂದು ಹೀಗೆ ಹೋಗೂ ಪ್ರವೃತ್ತಿ ಬೆಳೆಸಿಕೊಂಡಿರುವುದರಿಂದ ಕ್ಷೇತ್ರದ ಅಭಿವೃದ್ಧಿ ಸಾಮೂಹಿಕವಾಗಿ ಕುಂಠಿತಗೊಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಹಿರಿಯ ಅಧಿಕಾರಿಗಳು ಅಷ್ಟೇ ಅಲ್ಲ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೂಡ ಜಿಲ್ಲಾ ಕೇಂದ್ರದಲ್ಲೇ ಮನೆ ಮಾಡಿಕೊಂಡಿದ್ದಾರೆ. ಬಹುತೇಕ ಕಚೇರಿಗಳಲ್ಲಿ ಅಳವಡಿಸಲಾದ ಬಯೋಮೇಟ್ರಿಕ್ಗೆ ಹೆಬ್ಬೆಟ್ಟು ಹಾಜರಾತಿ ಹಾಕಲೆಂದೇ ಕೆಲವೊಂದಿಷ್ಟು ಸಿಬ್ಬಂದಿ ಔರಾದ್ಗೆ ಬರ್ತಿದ್ದಾರೆ. ಬೀದರ್-ಔರಾದ್ ಹೆದ್ದಾರಿ ಸಂಚಾರ ಈಗ ಅರ್ಧ ಗಂಟೆಯ ದೂರ ಇರುವಂತಾಗಿದ್ದರಿಂದ ಕೆಲವೊಬ್ಬರಂತು ದಿನಕ್ಕೆ ಎರಡೆರಡು ಬಾರಿ ಸುತ್ತಾಡಿ ಬಯೋಮೆಟ್ರಿಕ್ ಹೆಬ್ಬೆಟ್ಟು ಹಾಕ್ತಿದ್ದಾರೆ. ಕೇವಲ ಸಂಬಳಕ್ಕಾಗಿ ಹಾಜರಿ ಹಾಕ್ತಿರುವ ಅಧಿಕಾರಿಗಳು ಸಾರ್ವಜನಿಕರಿಗೆ ಸುಲಭವಾಗಿ ಕೈಗೆ ಸಿಗ್ತಿಲ್ಲ ಎಂಬ ಆರೋಪ ಗಂಭೀರವಾಗಿದೆ.ಸಿಪಿಐ, ಅಬಕಾರಿ ಇನ್ಸ್ಪೆಕ್ಟರ್, ನೋಂದಣಿ ಅಧಿಕಾರಿ, ಬಿಸಿಯೂಟ ಅಧಿಕಾರಿ, ಕೆಲ ವೈದ್ಯರು ಸೇರಿದಂತೆ ಬೆರಳೆಣಿಕೆಯಷ್ಟು ಅಧಿಕಾರಿಗಳ ಮನೆ ಮಾತ್ರ ಔರಾದ್ನಲ್ಲಿದೆ. ತಹಸೀಲ್ದಾರ್, ತಾಪಂ ಇಓ, ಕೃಷಿ ಇಲಾಖೆ ಅಧಿಕಾರಿಗಳು, ಪಶು ಸಂಗೋಪನೆ, ಜೆಸ್ಕಾಂ ಎಇಇ, ತೋಟಗಾರಿಕೆ ಅಧಿಕಾರಿ, ರೇಷ್ಮೆ ಅಧಿಕಾರಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಜಿಪಂ ಉಪ ವಿಭಾಗದ ಅಧಿಕಾರಿಗಳು, ಪಿಡಬ್ಲೂಡಿ ಎಇಇ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಎಪಿಎಂಸಿ ಕಾರ್ಯದರ್ಶಿ ಇನ್ನೂ ಹಲವು ಇಲಾಖೆ ಅಧಿಕಾರಿಗಳು ಬೀದರ್ನಲ್ಲೆ ಮನೆ ಮಾಡಿಕೊಂಡು ಜಿಲ್ಲಾ ಕೇಂದ್ರದಿಂದ ಔರಾದ್ಗೆ ಸಂಚಾರ ಮಾಡಿಕೊಂಡಿದ್ದಾರೆ ಎಂಬ ಸಾರ್ವಜನಿಕರ ಆರೋಪವನ್ನು ಜಿಲ್ಲಾಡಳಿತ ಗಮನಿಸಬೇಕಿದೆ.
ಸರ್ಕಾರಿ ವಾಹನಗಳ ದುರ್ಬಳಕೆ: ಅಧಿಕಾರಿಗಳು ಬೀದರ್ನಲ್ಲೆ ಮನೆ ಮಾಡಿಕೊಂಡಿರುವುದಕ್ಕೆ ಬೀದರ್ನಿಂದ ಕೇಂದ್ರ ಸ್ಥಾನಕ್ಕೆ ಹೋಗಿ ಬರಲು ಅನಗತ್ಯವಾಗಿ ಸರ್ಕಾರಿ ವಾಹನಗಳನ್ನು ಬಳಸಿಕೊಳ್ತಿದ್ದಾರೆ. ಬಹುತೇಕ ಅಧಿಕಾರಿಗಳು ಸರ್ಕಾರಿ ವಾಹನದಲ್ಲೆ ಬೀದರ್ ಟು ಔರಾದ್ ಸಂಚಾರ ಮಾಡ್ತಾರೆ. ಇದನ್ನು ಪ್ರಶ್ನಿಸಬೇಕಿದೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇರುವಂತೆ ಚುರುಕು ಮುಟ್ಟಿಸಬೇಕಿದೆ. ಸ್ಥಳೀಯ ಮುಖಂಡ ಸುಧಾಕರ ಕೊಳ್ಳುರ ಮಾತನಾಡಿ, ಇನ್ನು ಹಿರಿಯ ಅಧಿಕಾರಿಗಳು ಪ್ರಮುಖ ಕೆಲಸ ಇದ್ದರಷ್ಟೇ ಔರಾದ್ಗೆ ಬರ್ತಿದ್ದಾರೆ. ಸಣ್ಣ ಪುಟ್ಟ ಕೆಲಸ ಇದ್ದರೆ ಫೈಲ್ಗಳನ್ನೇ ಬೀದರ್ಗೆ ತರಿಸಿಕೊಳ್ತಾರೆ. ಯಾರಾದ್ರು ಕೇಳಿದ್ರೆ ಬೀದರ್ನಲ್ಲಿ ಸಭೆ ಇದೆ ಸಾಹೇಬ್ರು ಇಲ್ಲ ಎಂದು ಹೇಳುವ ಚಾಳಿ ಬೆಳೆದುಕೊಂಡು ಬಂದಿದೆ ಎಂದು ಆಪಾದಿಸಿದರು.ಔರಾದ್ನ ಹೋರಾಟಗಾರ ಅಶೋಕ ಶೆಂಬೆಳ್ಳಿ ಮಾತನಾಡಿ, ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಮನೆ ಮಾಡಿಕೊಂಡಿದ್ರೆ ಇಲ್ಲಿ ನಡೆಯುವ ಬೆಳವಣಿಗೆ ಗೊತ್ತಾಗುತ್ತೆ. ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ಸಿಗಲಿದೆ. ಅಧಿಕಾರಿಗಳೇ ಇಲ್ಲದೆ ಔರಾದ್ ಆಡಳಿತ ನಡೆಯುವ ಅನಾಥ ಪ್ರಜ್ಞೆ ನಮ್ಮನ್ನು ಕಾಡ್ತಿದೆ. ಈ ದುರಾವಸ್ಥೆ ಸರಿಪಡಿಸಿ ಸುಭದ್ರ ಆಡಳಿತ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳು ನೀಡಬೇಕು ಎಂದು ಒತ್ಆಯಿಸಿದರು.