ಹುಕುಂಶಾಹಿ ಹುಮನಾಬಾದ್‌ನಲ್ಲಿ ನಡೆಯಲ್ಲ: ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್‌

| Published : Sep 26 2024, 10:09 AM IST

ಸಾರಾಂಶ

ಯಾವುದೇ ಸರ್ಕಾರಿ ಕಾರ್ಯಕ್ರಮಗಳು ಸರ್ಕಾರಿ ಕಚೇರಿಗಳಲ್ಲಿ ಮಾಡಬೇಕು ಹೊರತಾಗಿ ವೈಯಕ್ತಿಕ ಸ್ಥಳದಲ್ಲಿ ಅಲ್ಲ

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಇನ್ನೂ ನಿಜಾಮನ ಆಡಳಿತದ ಕನಸ್ಸಿನಲ್ಲಿದ್ದಂತಿದೆ. ಅಂತಹ ಹುಕುಂಶಾಹಿ ಹುಮನಾಬಾದ್‌ದಲ್ಲಿ ನಡೆಯಲ್ಲ. ಜನರು ಸಾಕಷ್ಟು ಜಾಗೃತರಾಗಿದ್ದಾರೆ ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್‌ ಅವರು ಹೆಸರು ಹೇಳದೇ ಪರೋಕ್ಷವಾಗಿ ಮಾಜಿ ಸಚಿವ ರಾಜಶೇಖರ ಪಾಟೀಲ್‌ ವಿರುದ್ಧ ಕುಟುಕಿದರು.

ಅವರು ಪಟ್ಟಣದ ಶಾಸಕರ ಭವನದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ, ದಿವ್ಯಾಂಗನಿಗೆ ಭಾರತ ಸರ್ಕಾರದ ಎಡಿಐಪಿ ಯೋಜನೆಯಡಿಯಲ್ಲಿ ವಿಶೇಷ ಚೇತನ ಅರ್ಹ ಫಲಾನುಭವಿಗಳಿಗೆ 2024-25ನೇ ಸಾಲಿನ 34 ತ್ರಿಚಕ್ರ ಬೈಸಿಕಲ್‌, 12 ಬ್ಯಾಟರಿ ಚಾಲಿತ, 18 ವ್ಹೀಲ್‌ಚೇರ್‌, 8 ಸುಗಮ್ಯ ಊರುಗೋಲು, 8 ಬುದ್ಧಿಮಾಂದ್ಯತೆ ಎಡಿಲ್‌ ಕಿಟ್‌, 8 ಶ್ರವಣ ಸಾಧನಗಳು, 25 ಕ್ರಚಸ್‌ ಜೋಡಿ, 25 ವಾಕಿಂಗ್ ಸ್ಟಿಕ್‌, ಸಹಾಯಕ ಸಾಧನಗಳ ಉಚಿತ ವಿತರಣೆ ಕಾರ್ಯಕ್ರಮ ಪ್ರಯುಕ್ತ ವಿತರಿಸಿ ಫಲಾನುಭವಿಗಳಿಗೆ ಶುಭಹಾರೈಸಿ ಮಾತನಾಡಿದರು.

ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸುವ ಸರ್ಕಾರಿ ಕಚೇರಿ ಈ ಶಾಸಕ ಭವನವಾಗಿದೆ. ಯಾವುದೇ ಸರ್ಕಾರಿ ಕಾರ್ಯಕ್ರಮಗಳು ಸರ್ಕಾರಿ ಕಚೇರಿಗಳಲ್ಲಿ ಮಾಡಬೇಕು ಹೊರತಾಗಿ ವೈಯಕ್ತಿಕ ಸ್ಥಳದಲ್ಲಿ ಅಲ್ಲ. ಈ ಕುರಿತು ಸರ್ಕಾರದ ಸೂತ್ತೋಲೆ ಇದೆ. ಆದರೆ ವಿಕಲಚೇತನ ಜಿಲ್ಲಾ ಸಂಯೋಜಕ ಮಹಾದೇವ ಅವರಿಗೆ ಯಾವುದೇ ಮಾಹಿತಿ ಇಲ್ಲದೆ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿ ತಮ್ಮ ಮನೆಯ ಮುಂದೆ ತ್ರಿಚಕ್ರ ವಾಹನವನ್ನು ಫಲಾನುಭವಿಗಳಿಗೆ ನೀಡಲಾಗಿದೆ. ಶಿವಪೂರದಲ್ಲಿ ದೇವಸ್ಥಾನಕ್ಕೆ ಬಂದಿರುವ ಸರ್ಕಾರದ ಅನುದಾನಕ್ಕೆ ಒತ್ತಾಯಪೂರ್ವಕವಾಗಿ ಹೋಗಿ ಗುದ್ದಲಿ ಪೂಜೆ ಮಾಡಿದ್ದಾರೆ ಎಂದು ಆರೋಪಿಸಿದರು.

ಜನ ತೀರ್ಪು ನೀಡಿದ ಮೇಲೆ ಮನೆಯಲ್ಲಿ ಕುಳಿತಿರಬೇಕು. ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸುವದು ಸರಿಯಲ್ಲ. ಹಿಂದೆ ಉಸ್ಮಾನ ಪಾಶಾ ರಾಜಕೀಯ ಇತ್ತು ಇದೀಗ ಹೋಗಿದೆ. ಸಂವಿಧಾನದ ಪ್ರಕಾರ ನಾವು ಕೆಲಸ ಮಾಡಿಕೊಂಡು ಹೋಗಬೇಕಾಗುತ್ತದೆ. ಅದಕ್ಕೆ ಶಾಸಕನಾಗಿ ಯಾವುದೇ ದಬ್ಬಾಳಿಕೆ ಮಾಡದೇ ಜನ ಸೇವಕನಾಗಿ, ಸರ್ಕಾರದ ಸೂತ್ತೊಲೆ ಪ್ರಕಾರ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಎಂದರು.

ಜಿಲ್ಲಾ ಅಂಗವಿಕಲ ಕಲ್ಯಾಣಧಿಕಾರಿ ಮಹಾದೇವ ಮುಂಗಳೆ, ತಾಲೂಕು ಸಂಯೋಜಕ ಜಗನ್ನಾಥ ಗಾರಿ, ಗ್ರಾಮಿಣ ಪೂರ್ಣವಸತಿ ಕಾರ್ಯಕರ್ತ ರಾಚಯ್ಯಸ್ವಾಮಿ ಸೇರಿದಂತೆ ಅನೇಕರಿದ್ದರು.