ಕಿನ್ನಿಗೋಳಿ ನೇಕಾರ ಸೌಧದಲ್ಲಿ ನಡೆದ ಅನಂತ ಪ್ರಕಾಶ ಸಂಸ್ಥೆಯ ಮೂವತ್ತನೇ ವರ್ಷಾಚರಣೆ ಸಂದರ್ಭದಲ್ಲಿ ಕನ್ನಡ ನಾಡು ನುಡಿಗೆ ಕೊಡುಗೆ ಕೊಟ್ಟಿರುವ ಡಾ. ರಮಾನಂದ ಬನಾರಿ ಹಾಗೂ ಹೊನ್ನಾಳಿಯ ಯು. ಎನ್. ಸಂಗನಾಳಮಠ ಅವರಿಗೆ ಅನಂತ ಪ್ರಕಾಶ ಪುರಸ್ಕಾರ ಪ್ರದಾನ

ಡಾ. ರಮಾನಂದ ಬನಾರಿ, ಹೊನ್ನಾಳಿಯ ಯು. ಎನ್. ಸಂಗನಾಳಮಠಗೆ ಅನಂತ ಪ್ರಕಾಶ ಪುರಸ್ಕಾರ

ಮೂಲ್ಕಿ: ಕನ್ನಡಿಗರ ಮಕ್ಕಳಿಗೆ ಕನ್ನಡ ಬರುತ್ತಿಲ್ಲ. ಸರ್ಕಾರ ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ನೀಡುತ್ತಿಲ್ಲ. ವರ್ಷಕ್ಕೆ ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿದ್ದು ಕಾಸರಗೋಡಿನಲ್ಲಿ ಕನ್ನಡವನ್ನು ಅಳಿಸುವ ಕಾರ್ಯ ನಡೆಯುತ್ತಿದೆ. ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು ಪುಸ್ತಕಗಳನ್ನು ಕೊಂಡು ಕೊಂಡಾಡಬೇಕೆಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು. ಕಿನ್ನಿಗೋಳಿ ನೇಕಾರ ಸೌಧದಲ್ಲಿ ನಡೆದ ಅನಂತ ಪ್ರಕಾಶ ಸಂಸ್ಥೆಯ ಮೂವತ್ತನೇ ವರ್ಷಾಚರಣೆ ಸಂದರ್ಭದಲ್ಲಿ ಕನ್ನಡ ನಾಡು ನುಡಿಗೆ ಕೊಡುಗೆ ಕೊಟ್ಟಿರುವ ಡಾ. ರಮಾನಂದ ಬನಾರಿ ಹಾಗೂ ಹೊನ್ನಾಳಿಯ ಯು. ಎನ್. ಸಂಗನಾಳಮಠ ಅವರಿಗೆ ಅನಂತ ಪ್ರಕಾಶ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ. ರಮಾನಂದ ಬನಾರಿ ಹಾಗೂ ಹೊನ್ನಾಳಿಯ ಯು. ಎನ್. ಸಂಗನಾಳಮಠ ರವರಿಗೆ ಅನಂತ ಪ್ರಕಾಶ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣ ಮಾತನಾಡಿ ಓದುವ ಉತ್ತಮ ವ್ಯಸನ, ಪತ್ರಿಕೆ, ಪುಸ್ತಕಗಳ ಮೂಲಕ ಹೆಚ್ಚಾಗಬೇಕು ಎಂದರು.ಕಾರ್ಡೋಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ ನ ಜನರಲ್ ಮೆನೇಜರ್ ದಿವಾಕರ್ ಕದ್ರಿ ಮಾತನಾಡಿ, ಸಂಸ್ಕೃತಿಯ ಚಿಂತನೆಯನ್ನು ಇವತ್ತಿನ ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು ಎಂದರು. ಅಭಿನಂದನ ಕೃತಿಗಳಾದ ಬಹುರೂಪಿ, ಅರಳಿದ ಬದುಕು ಹಾಗೂ ಅನಂತಪ್ರಕಾಶ ಪತ್ರಿಕೆಯ 360ನೆಯ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.ಉಪನ್ಯಾಸಕರಾದ ಡಾ. ಟಿ. ಎ. ಎನ್. ಖಂಡಿಗೆ ಹಾಗೂ ಡಾ. ಸುಧಾರಾಣಿ ಅವರು ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನ ಮಾತುಗಳನ್ನಾಡಿದರು.

ವಿದ್ವಾಂಸ ಕೆ. ಎಲ್. ಕುಂಡಂತಾಯ, ಕ್ಯಾಪ್ಸ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸಿ ಎ ಚಂದ್ರಶೇಖರ ಶೆಟ್ಟಿ, ಅನಂತ ಪ್ರಕಾಶದ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ಮತ್ತಿತರರು ಉಪಸ್ತಿತರಿದ್ದರು. ಪ್ರಕಾಶ ಆಚಾರ್, ಅನಿಕೇತ ಉಡುಪ ನಿರೂಪಿಸಿದರು. ಆಶ್ವೀಜ ಉಡುಪ ಭಾವಗೀತೆ ಹಾಡಿದರು. ಸುರೇಶ್ ಅತ್ತೂರು ಗಮಕ ವಾಚನ ಮಾಡಿದರು. ವಿದುಷಿ ರಶ್ಮಿ ಉಡುಪ ಬಳಗದವರಿಂದ ಭರತನಾಟ್ಯ ಹಾಗೂ ಉಡುಪಿ ಕಲಾರಂಗದ ವಿದ್ಯಾರ್ಥಿಗಳಿಂದ ಯಕ್ಷಗಾನ ನಡೆಯಿತು.