ಸಾರಾಂಶ
ಹರಿಕಥಾ ಸಮ್ಮೇಳನ ಸಮಿತಿ ಹಮ್ಮಿಕೊಂಡಿರುವ ಹರಿಕಥಾ ಸಮ್ಮೇಳನ 2025 ಇದರ ಆಮಂತ್ರಣ ಪತ್ರಿಕೆಯನ್ನು ಕಲ್ಪತರು ಉತ್ಸವದ ಸಂದರ್ಭದಲ್ಲಿಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದ ಜೀ ಮಹಾರಾಜ್ ಬಿಡುಗಡೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರುಭಾರತೀಯ ಕಲೆಗಳು ಆಧ್ಯಾತ್ಮಿಕ ನೆಲೆಗಟ್ಟನ್ನು ಹೊಂದಿದ್ದರೂ ಶಾಸ್ತ್ರಗಳಲ್ಲಿ ಅಡಕವಾಗಿರುವ ಆಧ್ಯಾತ್ಮಿಕ ತತ್ವಗಳನ್ನು ಜನ ಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಿಳಿಹೇಳವಂತಹ ಅತ್ಯಂತ ಸಶಕ್ತ ಕಲಾ ಮಾಧ್ಯಮ ಹರಿಕಥೆಯಾಗಿದೆ. ಹಾಗಾಗಿ ಹರಿಕಥೆಗೆ ರಾಮಕೃಷ್ಣ ಆಶ್ರಮವು ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದ ಜೀ ಮಹಾರಾಜ್ ಹೇಳಿದ್ದಾರೆ.
ಇದೀಗ ಆಶ್ರಮ, ಹರಿಕಥಾ ಪರಿಷತ್ ಮಂಗಳೂರು ಹಾಗೂ ಷಡ್ಜ ಕಲಾ ಕೇಂದ್ರ ಟ್ರಸ್ಟ್ ಸಂಯುಕ್ತ ಸಹಯೋಗದಲ್ಲಿ ಹರಿಕಥಾ ಸಮ್ಮೇಳನ ಸಮಿತಿಯ ಮೂಲಕ ಜ.19ರಂದು ಆಯೋಜಿಸುತ್ತಿರುವ ಹರಿಕಥಾ ಸಮ್ಮೇಳನದಲ್ಲಿ ಕಲಾಸಕ್ತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನ್ನು ಯಶಸ್ಸುಗೊಳಿಸಬೇಕು ವಿನಂತಿ ಮಾಡಿಕೊಂಡರು.ಹರಿಕಥಾ ಸಮ್ಮೇಳನ ಸಮಿತಿ ಹಮ್ಮಿಕೊಂಡಿರುವ ಹರಿಕಥಾ ಸಮ್ಮೇಳನ 2025 ಇದರ ಆಮಂತ್ರಣ ಪತ್ರಿಕೆಯನ್ನು ಕಲ್ಪತರು ಉತ್ಸವದ ಸಂದರ್ಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಹರಿದಾಸ ಕೆ. ಮಹಾಬಲ ಶೆಟ್ಟಿ, ಸಮ್ಮೇಳನ ಸಮಿತಿಯ ಅಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕಾರ್ಯಾಧ್ಯಕ್ಷ ಬೆಟ್ಡಂಪಾಡಿ ಸುಂದರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ. ಎಸ್. ಪಿ. ಗುರುದಾಸ್, ಖಜಾಂಚಿ ಬಿ. ನಾರಾಯಣ ರಾವ್, ಸದಸ್ಯರಾದ ಮಂಜುಳಾ ಜಿ ರಾವ್, ಶೇಣಿ ಮುರಳಿ, ಬಿ. ಸತೀಶ್ ಕಾಮತ್, ಮಂಗಲದಾಸ್ ಗುಲ್ವಾಡಿ ಉಪಸ್ಥಿತರಿದ್ದರು.