ಕನ್ನಡಪ್ರಭ ವಾರ್ತೆ ಹುಕ್ಕೇರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯತಿಗಳ ಸಹಯೋಗದಲ್ಲಿ ನಡೆದ ವಿಶೇಷ ಅಭಿಯಾನದಲ್ಲಿ ಕ್ಷಯ ಮುಕ್ತ ಗ್ರಾಮ ಪಂಚಾಯತಿ ಆಗಿ ಹೊರಹೊಮ್ಮಿದ ಹುಕ್ಕೇರಿ ತಾಲೂಕಿನ ಕೋಟ ಗ್ರಾಪಂಗೆ ಬಂಗಾರದ ಪದಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯತಿಗಳ ಸಹಯೋಗದಲ್ಲಿ ನಡೆದ ವಿಶೇಷ ಅಭಿಯಾನದಲ್ಲಿ ಕ್ಷಯ ಮುಕ್ತ ಗ್ರಾಮ ಪಂಚಾಯತಿ ಆಗಿ ಹೊರಹೊಮ್ಮಿದ ಹುಕ್ಕೇರಿ ತಾಲೂಕಿನ ಕೋಟ ಗ್ರಾಪಂಗೆ ಬಂಗಾರದ ಪದಕ ಪ್ರಶಸ್ತಿ ಪ್ರದಾನ ಮಾಡಲಾಯಿತು.ವಿಶ್ವ ಕ್ಷಯ ರೋಗ ದಿನಾಚರಣೆ ನಿಮಿತ್ತ ಬೆಳಗಾವಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಗ್ರಾಪಂ ಪಿಡಿಒ ಸಂತೋಷ ಕಬ್ಬಗೋಳಗೆ ಬಂಗಾರದ ಪದಕ, ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.ಶ್ವಾಸಕೋಶ ಬಾಧಿಸುವ ಸಾಂಕ್ರಾಮಿಕ ಕಾಯಿಲೆ ಕ್ಷಯ(ಟಿಬಿ)ರೋಗ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಟಿಬಿ ಸೋಲಿಸಿ ಗ್ರಾಮ ಪಂಚಾಯತಿ ಗೆಲ್ಲಿಸಿ ವಿನೂತನ ಅಭಿಯಾನ ಆಯೋಜಿಸಲಾಗಿತ್ತು. ಈ ಅಭಿಯಾನವನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿದ ಕೋಟ ಗ್ರಾಪಂಯನ್ನು ಕ್ಷಯಮುಕ್ತ ಗ್ರಾಪಂ ಆಗಿ ಘೋಷಿಸಲಾಗಿತ್ತು.
ಈ ವೇಳೆ ಪಿಡಿಒ ಸಂತೋಷ ಕಬ್ಬಗೋಳ ಮಾತನಾಡಿ, ಕ್ಷಯ ಶೇ.100 ರಷ್ಟು ಗುಣಮುಖವಾಗಬಲ್ಲ ರೋಗ. ಪಂಚಾಯಿತಿ ನೀಡಿದ್ದ ಕ್ಷಯ ಮುಕ್ತ ಗುರಿಯಲ್ಲಿ ನಾವು ನಿಗದಿಗಿಂತ ಹೆಚ್ಚಿನ ಗುರಿ ತಲುಪಿದ್ದೇವೆ. ಇದರೊಂದಿಗೆ ಕ್ಷಯ ಬಗೆಗಿನ ಕೀಳರಿಮೆ ದೂರ ಮಾಡುವ ನಮ್ಮ ಉದ್ದೇಶ ಈಡೇರಿದಂತಾಗಿದೆ ಎಂದರು.ಜೆಎನ್ಎಂಸಿ ಉಪಕುಲಪತಿ ಡಾ.ಸಂದೀಪ ಶ್ರೀವಾಸ್ತವ, ರಿಜಿಸ್ಟ್ರಾರ್ ಡಾ.ವಿ.ಎಂ.ಪಟ್ಟಣಶೆಟ್ಟಿ, ಉಪಪ್ರಾಚಾರ್ಯೆ ಡಾ.ನಯನಾ ಹಾಸಿಲಕರ, ಡಿಎಚ್ಒ ಡಾ.ಐ.ಪಿ.ಗಡಾದ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಚಾಂದಿನಿ ದೇವಡಿ, ಭಾರತೀಯ ವೈದ್ಯಕೀಯ ಸಂಘದ ಪ್ರತಿನಿಧಿ ಡಾ.ಸಂತೋಷ ಗಾಡದವರ, ಶ್ವಾಸಕೋಶ ವಿಭಾಗದ ಮುಖ್ಯಸ್ಥೆ ಡಾ.ಭಾಗ್ಯಶ್ರೀ ಪಾಟೀಲ, ಮೈಕ್ರೋಬಯೋಲಾಜಿ ವಿಭಾಗದ ಮುಖ್ಯಸ್ಥ ಡಾ.ಶೀತಲ ಹರಕುಣಿ ಮತ್ತಿತರರು ಉಪಸ್ಥಿತರಿದ್ದರು.