ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಸಾಮಾಜಿಕ ಪಿಡುಗುಗಳಿಗೆ ಕಡಿವಾಣ ಅಗತ್ಯ ಎಂದು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆ. ಕೆ. ಹೊನ್ನಯ್ಯ ಅಭಿಪ್ರಾಯಪಟ್ಟರು.ನಗರದ ಡಾ.ಎಚ್.ಎನ್, ಕಲಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ವರ್ಷ ರೂರಲ್ ಡೆವಲಪ್ ಮೆಂಟ್ ಆ್ಯಂಡ್ ಎಜುಕೇಷನ್ ಟ್ರಸ್ಟ್ ಹಾಗೂ ರೂಟ್ಸ್ ಪಾರ್ ಪ್ರೀಡಂ ಇವರ ಸಹಯೋಗದಲ್ಲಿ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ- ವರ್ಗಗಳ, ನಾಗರಿಕ ಹಕ್ಕು ಮತ್ತು ರಕ್ಷಣಾ ಕಾಯ್ದೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಬಾಲ್ಯ ವಿವಾಹ, ಜಾತಿ ಪದ್ಧತಿಯಂಥ ಪಿಡುಗುಗಳು ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿವೆ, ಇವು ಮುಂದಿನ ಪೀಳಿಗೆಗೆ ನಕಾರಾತ್ಮಕ ಪರಿಣಾಮ ಬೀರುತ್ತವೆ, ಗ್ರಾಮೀಣ ಭಾಗದ ಜನ ಶಿಕ್ಷಿತರಾದಾಗ ಮಾತ್ರ ಇಂತಹ ಅನಿಷ್ಟ ಪದ್ಧತಿಗಳಿಂದ ಹೊರ ಬರಲು ಸಾಧ್ಯ, ಇಂತಹ ಘಟನೆಗಳು ಕಂಡು ಬಂದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ತಕ್ಷಣ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು, ಅವುಗಳಿಗೆ ಕಡಿವಾಣ ಹಾಕಲು ಕೈಜೋಡಿಸಬೇಕು ಎಂದು ತಿಳಿಸಿದರು.ಸಂಘಟನೆಯ ಜಿಲ್ಲಾ ಜಾಗೃತಿ ಸಮಿತಿಯ ಡಾ. ಜೀವಿಕಾ ರತ್ನಮ್ಮ ಮಾತನಾಡಿ, ಪೋಕ್ಸೋ ಕಾಯ್ದೆ ಬಗ್ಗೆ ಮಹಿಳೆಯರು ತಿಳಿದುಕೊಳ್ಳಬೇಕು, ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಮೊಬೈಲ್ ಬಳಕೆಗೆ ಕಡಿವಾಣ ಹಾಕಿ ಅಪರಿಚಿತರ ಬಳಿ ಮಾತನಾಡುವುದನ್ನು ಗಮನಿಸಿ ಅದಕ್ಕೆ ಕಡಿವಾಣ ಹಾಕಿ, ಶಿಕ್ಷಣದ ಕಡೆ ಹೆಚ್ಚು ಒತ್ತು ನೀಡಲು ಪ್ರೇರೇಪಿಸಬೇಕು. ಇತ್ತೀಚಿನ ದಿನಗಳಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾ ಗಿದೆ, ಇದಕ್ಕೆ ಕಠಿಣ ಕಾನೂನು ಅಗತ್ಯ ಎಂದು ತಿಳಿಸಿದರು.
ಹಿರಿಯ ವಕೀಲ ಎಚ್ಎಲ್ವಿ ವೆಂಕಟೇಶ್ ಮಾತನಾಡಿ, ಪರಿಶಿಷ್ಟ ಜಾತಿ- ವರ್ಗಗಳ ಅಟ್ರಾಸಿಟಿ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ, ಅದರೆ ಇಂತಹ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕೇವಲ ಶೇ 0.1ರಷ್ಟು ಆಗಿದೆ, ಇದು ಖಂಡನೀಯ. ಇಂತಹ ಪ್ರಕರಣದಲ್ಲಿ ಸಾಕ್ಷಿಗಳು ಸತ್ಯಾಸತ್ಯತೆ ಅಂಶಗಳು ಬಯಲಿಗೆ ಬರುವುದಿಲ್ಲ, ಇದರಿಂದ ಅಟ್ರಾಸಿಟಿ ಪ್ರಕರಣ ವಿಫಲವಾಗುತ್ತಿವೆ. ಹಳ್ಳಿಗಳಲ್ಲಿ ಜಾತಿ ಪದ್ಧತಿ ಅಚರಣೆ ಇಂದಿಗೂ ಜೀವಂತವಾಗಿದೆ. ಬಿಸಿಯೂಟ ಜಾಗದಲ್ಲಿ ಮುಖ್ಯ ಅಡುಗೆ ಮಾಡುವ ಮಹಿಳೆ ಪ,ಜಾತಿಯವಳಾದರೆ ಅಂತಹ ಊಟವನ್ನು ಯಾರೂ ಸೇವನೆ ಮಾಡಲು ಇಷ್ಟಪಡುವುದಿಲ್ಲ, ಇದು ಸಹ ಅಟ್ರಾಸಿಟಿ ಪ್ರಕರಣದ ವ್ಯಾಪ್ತಿಗೆ ಬರುತ್ತದೆ, ಅಂಗನವಾಡಿ ಶಾಲೆಗಳಲ್ಲಿ ಪ.ಜಾತಿ ಮಕ್ಕಳನ್ನು ಪ್ರತ್ಯೇಕವಾಗಿ ಕೂಡಿಸುವ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಚನ್ನಪ್ಪ ಗೌಡ ನಾಯ್ಕರ್, ಎಸಿಡಿಪಿಒ ಮೂಕಾಂಬಿಕಾ, ಪೊಲೀಸ್ ಇಲಾಖೆ ಉಪ ನಿರೀಕ್ಷಕಿ ಲಲಿತಮ್ಮ, ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಮೋಹನ್ ರೆಡ್ಡಿ, ಸಂಘಟನೆಯ ಜಿಲ್ಲಾ ಸಂಚಾಲಕರಾದ ಚಂದ್ರಪ್ಪ, ಕೃಷ್ಣಪ್ಪ, ಮಂಜುನಾಥ್, ಕಲ್ಯಾಣಕುಮಾರ, ಗೋಪಿ.ಎಚ್.ವಿ, ತಿಪ್ಪಕ್ಕ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಅಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.