ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಭಾಗಮಂಡಲ ಕೆವಿಜಿ ಐಟಿಐ ಸಭಾಂಗಣದಲ್ಲಿ ದಿ.ಪಾಣತಲೆ ಅಣ್ಣಯ್ಯ ಮತ್ತು ಚಿಣ್ಣಮ್ಮ ಜ್ಞಾಪಕಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಕೆ.ವಿ .ಶ್ರೀಕಾಂತ್ ಉದ್ಘಾಟಿಸಿ ಮಾತನಾಡಿ, ತಾಂತ್ರಿಕ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳ ಮೂಲಕ ಸಾಹಿತ್ಯದ ಅರಿವು ಮೂಡುತ್ತದೆ. ಅಲ್ಲದೆ ಸಾಹಿತ್ಯ ಪರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ಸ್ಥಾಪನೆ ಮಾಡಿದರೆ ಸಾಹಿತ್ಯ ಪರಿಷತ್ತು ಇರುವವರೆಗೂ ಅಜರಾಮರವಾಗಿರುತ್ತದೆ ಎಂದು ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ನುಡಿದರು. ಅವರು ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದತ್ತಿ ಕಾರ್ಯಕ್ರಮಗಳನ್ನು ಜಿಲ್ಲೆಯ ವಿವಿಧಡೆ ನಡೆಸುವುದರಿಂದ ಆ ಭಾಗದಲ್ಲೂ ದತ್ತಿದಾನಿಗಳ ಪರಿಚಯವಾಗುತ್ತದೆ ಹಾಗೂ ಇತರರಿಗೆ ಪ್ರೇರಣೆಯೂ ಆಗುತ್ತದೆ. ವಿದ್ಯಾರ್ಥಿಗಳು ದತ್ತಿ ಉಪನ್ಯಾಸದಲ್ಲಿ ನೀಡುವ ಉಪನ್ಯಾಸದ ವಿಚಾರಗಳನ್ನು ಮೈಗೂಡಿಸಿಕೊಂಡು ಮುಂದೆ ಉದ್ಯೋಗಸ್ಥ ರಾಗಿ ತಾವು ಕೂಡ ವಿದ್ಯಾರ್ಥಿಗಳಿಗಾಗಿ ಯಾವುದಾದರೂ ಕ್ಷೇತ್ರದಲ್ಲಿ ದತ್ತಿನಿಧಿ ಸ್ಥಾಪನೆ ಮಾಡುವ ಮನಸ್ಸು ಮಾಡಬೇಕು ಎಂದರು. ಕಾವೇರಿ ಹರಿಯುತ್ತಾ ಹೇಗೆ ರೈತರಿಗೆ ಪರಿಸರಕ್ಕೆ ಗಣಿಯಾಗುತ್ತಾಳೋ ಅದೇ ರೀತಿ ಸಾಹಿತಿಗಳು ಕನ್ನಡ ಸಾಹಿತ್ಯದ, ಇತಿಹಾಸದ ಗಣಿ ಸ್ಥಾಪಿಸಿದ್ದಾರೆ ಎಂದು ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರಾದ ವಿವಿ ಶಿವಪ್ಪ ಅವರು ಅಭಿಪ್ರಾಯ ಪಟ್ಟರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾಗಮಂಡಲ ಕೆವಿಜಿ ಐಟಿಐ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಕೊಡಗಿನ ಸಾಹಿತಿಗಳ ಕೊಡುಗೆ ಈ ವಿಷಯದಲ್ಲಿ ದತ್ತಿ ಉಪನ್ಯಾಸಕರಾಗಿ ಭಾಗವಹಿಸಿ ಕೊಡಗಿನ ಎಲ್ಲಾ ಸಾಹಿತಿಗಳ ಪರಿಚಯದೊಂದಿಗೆ ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಯನ್ನೂ ಸ್ಮರಿಸಿಕೊಂಡು ಮಾತನಾಡಿದರು. ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುನಿಲ್ ಪತ್ರಾವೋ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆವಿಜಿ ಐಟಿಐ ಕಚೇರಿ ಅಧೀಕ್ಷರಾದ ಸಿ ಕೆ ವಿನೋದ್, ಎಸ್ ಎಸ್ ಸಂಪತ್ ಕುಮಾರ್, ಪಾಣತಲೆ ಲೋಕನಾಥ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಕವನ್ ಸಿ ಪಿ ಮತ್ತು ಮನೀಶ್ ಕೆ ಪಿ ಪ್ರಾರ್ಥಿಸಿದರು. ವಿನೋದ್ ಸಿ ಕೆ ಸ್ವಾಗತಿಸಿ, ಉಪನ್ಯಾಸಕರಾದ ಪುನೀತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.