ಸಾರಾಂಶ
ದೇಶದಲ್ಲಿ ಹೊಸ ಇತಿಹಾಸ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಜಗತ್ತಿನ 4000 ಸಂತರಿಗೆ ಆಹ್ವಾನಿಸಿರುವುದು, ಅದರಲ್ಲಿ ತಾವು ಒಬ್ಬರಾಗಿರುವುದು ಸಂತಸದ ಸಂಗತಿ ಎಂದು ರಾಜುಗುರು ಸ್ವಾಮೀಜಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಕೋಲಿ ಸಮಾಜದ ಕಚೇರಿಯಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರ ಉದ್ಘಾಟನೆಗೆ ಅಧಿಕೃತ ಆಹ್ವಾನ ಪಡೆದ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಿಗಿ ಗ್ರಾಮದ ರಾಜು ಗುರು ಸ್ವಾಮೀಜಿ ಅವರಿಗೆ ಸನ್ಮಾನಿಸಿ, ಆಹ್ವಾನ ಪತ್ರಿಕೆ ನೀಡಲಾಯಿತು.ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ತಿಪ್ಪಣ್ಣ ಹೂಗಾರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜೇಂದ್ರ ಬಸವರಾಜ ಗೌನಳ್ಳಿ ಮತ್ತು ದಳದ ವಿಭಾಗ ಸಂಯೋಜಕ ಬಸವರಾಜ ಅವರು ಅಧಿಕೃತ ಆಹ್ವಾನ ನೀಡಿದರು.
ಬಳಿಕ ಮುದ್ನಾಳ ಗ್ರಾಮದಲ್ಲಿ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ.ಮುದ್ನಾಳ ಅವರು ತಮ್ಮ ಮನೆಯಲ್ಲಿ ಅಯೋಧ್ಯೆಗೆ ಆಹ್ವಾನ ಪಡೆದ ಶ್ರೀಗಳನ್ನು ಅದ್ಧೂರಿಯಾಗಿ ಸನ್ಮಾನಿಸಲಾಯಿತು.ಈ ವೇಳೆ ಮಾತನಾಡಿದ ಶ್ರೀಗಳು, ಭಾರತ ದೇಶದಲ್ಲಿ ಹೊಸ ಇತಿಹಾಸ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಜಗತ್ತಿನ 4000 ಸಂತರಿಗೆ ಆಹ್ವಾನಿಸಿರುವುದು, ಅದರಲ್ಲಿ ತಾವು ಒಬ್ಬರಾಗಿರುವುದು ಸಂತಸದ ಸಂಗತಿಯಾಗಿದೆ. ಜಿಲ್ಲೆಯ ಸಂತರ ಪರವಾಗಿ ನಾವು ಭಾಗವಹಿಸಲು ತೆರಳುತ್ತಿದ್ದುದಾಗಿ ತಿಳಿಸಿದರು.
ಸನ್ಮಾನಿಸಿ ಮಾತನಾಡಿದ ಉಮೇಶ ಕೆ.ಮುದ್ನಾಳ, ಶ್ರೀರಾಮ ಮುಂದಿರ ಉದ್ಘಾಟನೆಗೆ ಕೋಲಿ ಸಮಾಜದ ಶರಣರಾದ ರೇಖಿ ತಜ್ಞರು ಹಾಗೂ ಆಧ್ಯಾತ್ಮಿಕ ಚಿಂತಕರಾದ ರಾಜು ಗುರುಸ್ವಾಮಿ ಅವರು ಜ.22ರಂದು ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಅಯೋಧ್ಯೆಗೆ ತೆರಳುತ್ತಿರುವುದು ಗೌರವದ ಸಂಗತಿಯಾಗಿದೆ ಎಂದರು.ಅಂಬರೀಷ್ ದೋರನಹಳ್ಳಿ, ಸಾಬು, ಕಿರಣ, ಅಂಜನೇಯ ಬೆಳಗೇರಾ, ಹೊನ್ನಪ್ಪ, ರಫೀಕ್ ಪಟೇಲ, ಸದ್ದಾಂ, ದೇವಿಂದ್ರ, ನಾಗಪ್ಪ, ಹಣಮಂತ, ಶಿವಯೋಗಿ, ಈಶಪ್ಪ, ಸಾಬಣ್ಣ, ಗಿರಿನಾಡು ಟ್ಯಾಕ್ಸಿ ಚಾಲಕರ ಸಂಘದ ಪದಾಧಿಕಾರಿಗಳಾದ ಬಸವರಾಜ, ಶರಣು ನಾಪೇಟೆ, ಸಾಬಯ್ಯ, ಬಾಬಾ, ರಶೀದ, ಗಣೇಶ ಇತರರಿದ್ದರು.