ಸಾರಾಂಶ
ದೇಶದಲ್ಲಿ ಹಸಿರು ಕ್ರಾಂತಿ ಮಾಡಿದ ಡಾ. ಬಾಬು ಜಗಜೀವನರಾಮ್ ಅವರು, ಕೃಷಿ ಸಚಿವರಾಗಿ ಹೊಸ-ಹೊಸ ಕಲ್ಪನೆ, ಯೋಜನೆ ತರುವ ಮೂಲಕ ಕೃಷಿಯಲ್ಲಿ ಅಧುನಿಕರಣ ತಂದರು.
ಕೊಪ್ಪಳ:
ಕೃಷಿ ಕ್ಷೇತ್ರದಲ್ಲಿ ಬಹು ದೊಡ್ಡ ಕ್ರಾಂತಿ ಮಾಡಿರುವ ಇತಿಹಾಸ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರದ್ದಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ಶನಿವಾರ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಆಯೋಜಿಸಿದ್ದ ಹಸಿರು ಕ್ರಾಂತಿ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ 118ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಹಸಿರು ಕ್ರಾಂತಿ ಮಾಡಿದ ಡಾ. ಬಾಬು ಜಗಜೀವನರಾಮ್ ಅವರು, ಕೃಷಿ ಸಚಿವರಾಗಿ ಹೊಸ-ಹೊಸ ಕಲ್ಪನೆ, ಯೋಜನೆ ತರುವ ಮೂಲಕ ಕೃಷಿಯಲ್ಲಿ ಅಧುನಿಕರಣ ತಂದರು ಎಂದು ಬಣ್ಣಿಸಿದರು.
ಅಸ್ಪೃಶ್ಯತೆ ಹೋಗಲಾಡಿಸಬೇಕು, ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಜಗಜೀವನರಾಮ್ ಅವರು ಹಲವಾರು ಹೋರಾಟ ಮಾಡಿದ್ದಾರೆ. ಇಂತಹ ಮಹಾನ ವ್ಯಕ್ತಿಗಳು ಕೇವಲ ಒಂದೇ ಸಮುದಾಯಕ್ಕೆ ಸೀಮಿತವಲ್ಲ. ಈ ಹಿನ್ನೆಲೆಯಲ್ಲಿ ಮಹನೀಯರ ಆದರ್ಶವನ್ನು ಯುವ ಜನಾಂಗಕ್ಕೆ ಪರಿಚಯಿಸಲು ಜಯಂತಿಗಳನ್ನು ಸರ್ಕಾರ ಆಚರಿಸುತ್ತಿದೆ. ಡಾ. ಬಿ.ಆರ್. ಅಂಬೇಡ್ಕರ್, ಡಾ. ಬಾಬು ಜಗಜೀವನರಾಮ್, ಕನಕದಾಸರು, ವಾಲ್ಮೀಕಿ ಮಹರ್ಷಿಗಳು, ಬಸವಣ್ಣ, ಪುರಂದರದಾಸರು, ಮಹಾತ್ಮ ಗಾಂಧೀಜಿ ಸೇರಿದಂತೆ ಹಲವಾರು ಮಹನೀಯರ ಆದರ್ಶ ಯುವಪೀಳಿಗೆಗೆ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.ಸಂಸದ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ಬಾಬು ಜಗಜೀವನರಾಮ್ ಅವರು ದೇಶದಲ್ಲಿ ಆಹಾರದ ಕೊರತೆಯಿದ್ದ ವೇಳೆ ಹಲವು ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಸ್ಥಿತಿಯಿತ್ತು. ಆಗ ಕೃಷಿ ಸಚಿವರಾಗಿದ್ದ ಇವರು ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೈಗೊಂಡು ಹಸಿರು ಕ್ರಾಂತಿಯನ್ನುಂಟು ಮಾಡಿ, ಭಾರತವನ್ನು ಸ್ವಾಭಿಮಾನ ದೇಶವನ್ನಾಗಿ ಮಾಡಿದ್ದಾರೆ ಎಂದರು.
ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿದರು. ವೈದ್ಯಾಧಿಕಾರಿ ಡಾ. ರಾಜಶೇಖರ ನಾರಿನಾಳ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ, ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ ಹಾಗೂ ವಿರೂಪಾಕ್ಷಪ್ಪ ಮೋರನಾಳ, ಮುಖಂಡರಾದ ಗಾಳೆಪ್ಪ ಪೂಜಾರ, ಚನ್ನಬಸಪ್ಪ ಹೊಳೆಯಪ್ಪ, ರಾಮಣ್ಣ ಕಂದಾರಿ, ಗ್ಯಾನಪ್ಪ ಪೂಜಾರಿ, ಲಿಂಗರಾಜ, ಪರಶುರಾಮ ಕೆರಳ್ಳಿ, ಯಲ್ಲಪ್ಪ ಮುದ್ಲಾಪುರ, ನಿಂಗಜ್ಜ ಹರ್ಲಾಪುರ, ಗಣೇಶ ಹೊರತಟ್ನಾಳ, ಮಂಜುನಾಥ ಗೊಂಡಬಾಳ ಉಪಸ್ಥಿತರಿದ್ದರು.ಮೆರವಣಿಗೆ:
ಕಾರ್ಯಕ್ರಮದ ನಿಮಿತ್ತ ಬಾಬು ಜಗಜೀವನರಾಮ್ ಅವರ ಭಾವಚಿತ್ರದ ಮೆರವಣಿಗೆ ತಹಸೀಲ್ದಾರ್ ಕಚೇರಿಯಿಂದ ಆರಂಭಗೊಂಡು ಸಾಲಾರಜಂಗ್ ರಸ್ತೆ, ಅಶೋಕ ವೃತ್ತದ ಮೂಲಕ ಸಾಹಿತ್ಯ ಭವನದ ವರೆಗೆ ಅದ್ಧೂರಿಯಾಗಿ ನಡೆಯಿತು.