ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸ್ವಾತಂತ್ರ್ಯೊತ್ತರ ಭಾರತದ 4 ನೇ ಉಪಪ್ರಧಾನಿಯಾಗಿದ್ದ ಡಾ.ಬಾಬು ಜಗಜೀವನ್ ರಾಮ್ ರವರು ಧಮನಿತ ಸಮುದಾಯದ ಧೀಮಂತ ಚೇತನವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸಮಾಜಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ,ಬಾಬು ಜಗಜೀವನ್ ರಾಮ್ ಅವರ 117 ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಬಹುಭಾಷಾ ಕೋವಿದಅಸ್ಪೃಶ್ಯ ಸಮುದಾಯದ ಎರಡು ಕಣ್ಣುಗಳಂತಿರುವ ಭಾರತ ರತ್ನ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ರಾಮ್ ರವರು ಬಹುಭಾಷಾ ಕೋವಿದರಲ್ಲದೆ ಉತ್ತಮ ಸಂಸದೀಯ ಪಟುವಾಗಿದ್ದರು. ಬಾಲ್ಯದಲ್ಲೇ ಅಸ್ಪೃಶ್ಯತೆ ನೋವುಂಡಿದ್ದರು. ಇದರಿಂದ ಶೋಷಿತ ಸಮುದಾಯಗಳನ್ನು ಪಾರುಮಾಡಲು ಜೀವನ ಪರ್ಯಂತ ಶ್ರಮಿಸಿದರು. ಉತ್ತಮ ಸಂಸದೀಯ ಪಟುವಾಗಿ, ಉಪ ಪ್ರಧಾನಿಯಾಗಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಡಾ.ಬಾಬು ಜಗಜೀವನ್ರಾಮ್ ಅವರ ಬದುಕು ಬರಹದ ಸಾಧನೆ ಬಗ್ಗೆ ಉಪನ್ಯಾಸಕ ಮುನಿರಾಜು.ಎಂ.ಅರಿಕೆರೆ ಉಪನ್ಯಾಸ ನೀಡಿ, ಡಾ.ಬಾಬು ಜಗಜೀವನ್ರಾಮ್ ಎಂಬ ಧೃವತಾರೆ ಬಡತನ ಮತ್ತು ಅಸ್ಪೃಶ್ಯತೆಯ ಮಧ್ಯೆ ಮೂಡಿದ ಪರಿವರ್ತನೆಯ ಹಣತೆಯಾಗಿದ್ದಾರೆ. ಚಮ್ಮಾರ ಸಮುದಾಯದಲ್ಲಿ ಜನಿಸಿದರೂ ಆಧುನಿಕ ಭಾರತದ ರಾಜಕೀಯ ಚರಿತ್ರೆಯಲ್ಲಿ 50 ವರ್ಷಗಳ ಕಾಲ ಉತ್ತಮ ಸಂಸದೀಯ ಪಟುವಾಗಿ ಅಚ್ಚಳಿಯದ ಸಾಧನೆ ಮಾಡುವಂತಾಯಿತು ಎಂದರು.
ಶಿಷ್ಯವೇತನ ನಿರಾಕರಣೆತಮ್ಮ ವಿದ್ಯಾರ್ಥಿ ಜೀವನದ ಉದ್ದಕ್ಕೂ ಯಾವುದೇ ತರಹದ ಜಾತಿ ಆಧಾರಿತ ಶಿಷ್ಯ ವೇತನ ಪಡೆಯಲು ನಿರಾಕರಿಸಿ, ಮೆರಿಟ್ ಸ್ಕಾಲರ್ಶಿಪ್ ಅನ್ನು ಪಡೆದೇ ವಿದ್ಯಾಭ್ಯಾಸ ಮುಂದುವರೆಸಿದ ಪ್ರತಿಭಾವಂತರಿವರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಹ ಜಾತಿ ತಾರತಮ್ಯ,ಅಸಮಾನತೆ, ಪೂರ್ವಗ್ರಹ ಪೀಡಿತ ಮನಸ್ಸುಗಳನ್ನು ಕಂಡು ಬೆರಗಾದರು. ಕ್ಷೌರಿಕರು ತಲೆಗೂದಲು ಕತ್ತರಿಸುತ್ತಿರಲಿಲ್ಲ, ಕೆಲಸದವರು ಊಟ ಬಡಿಸುತ್ತಿರಲಿಲ್ಲ. ಇದರಿಂದ ನೊಂದ ಅವರು ಇಂಟರ್ಸೈನ್ಸ್ ಪರೀಕ್ಷೆ ತೇರ್ಗಡೆ ಆದ ಕೂಡಲೇ ವಿಶ್ವವಿದ್ಯಾಲಯ ತೊರೆದರು. ದಲಿತ ವಿದ್ಯಾರ್ಥಿಗಳನ್ನು ಸಂಘಟಿಸಿ ಬನಾರಸ್ ವಿಶ್ವವಿದ್ಯಾಲಯದ ಸಾಮಾಜಿಕ ತಾರತಮ್ಯ ನೀತಿಯ ವಿರುದ್ಧ ಹೋರಾಟ ನಡೆಸಿದರು ಎಂದರು.1935 ರಲ್ಲಿ ಮೊದಲ ಬಾರಿಗೆ ಬಿಹಾರ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದ ಬಾಬೂಜಿ ಮತ್ತೆಂದೂ ಹಿಂದಿರುಗಿ ನೋಡಿದ್ದೇ ಇಲ್ಲ. 1947ರಲ್ಲಿ ನೆಹರೂ ಅವರ ನೇತೃತ್ವದ ಹಂಗಾಮಿ ಸರ್ಕಾರದಲ್ಲಿ ಕಾರ್ಮಿಕ ಇಲಾಖೆ ಮಂತ್ರಿಯಾದ ಇವರು ಮೊದಲ ಬಾರಿಗೆ ಸಂವಿಧಾನ ರಚನಾ ಸಭೆಯ ಸದಸ್ಯರಾಗಿಯೂ ಆಯ್ಕೆಯಾಗುತ್ತಾರೆ.ಕೃಷಿಯಲ್ಲಿ ಕ್ರಾಂತಿಕಾರಿ ಬದಲಾವಣೆ
ಇವರು ಕೃಷಿ ಸಚಿವರಾಗಿದ್ದ ಅವಧಿಯಲ್ಲಿ ದೇಶದಲ್ಲಿ ಎದುರಾಗಿದ್ದ ಆಹಾರ ಸಮಸ್ಯೆಯನ್ನು ನೀಗಿಸಲು ಕೃಷಿಯಲ್ಲಿ ತಾಂತ್ರಿಕತೆ ಸಹಿತ ಯಂತ್ರನಾಗರಿಕತೆಗೆ ಅವಕಾಶ ನೀಡಿ ಕೃಷಿಕ ವಲಯವನ್ನು ಸಂಕಷ್ಟದಿಂದ ಪಾರು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪಾರಂಪರಿಕ ಕೃಷಿಯ ಜತೆಗೆ ಭೂರಹಿತ ಸಾಗುವಳಿದಾರರಿಗೆ ಭೂಮಿ ಹಂಚಿಕೆ, ಸಹಕಾರಿ ಸೇವೆ ಪ್ರಾರಂಭ,ಉತ್ತಮ ಬೀಜ, ರಸಗೊಬ್ಬರ ವಿತರಣೆ ಯೋಜನೆ ಜಾರಿಗೊಳಿಸಿದರು. ಬ್ಯಾಂಕ್ಗಳಲ್ಲಿ ರೈತರಿಗೆ ಸಾಲಸಹಿತ ಸಬ್ಸಿಡಿ ಕೊಡಿಸುವಲ್ಲಿ ಸಫಲರಾದರು. ಕಡುಬಡವರಿಗೆ ಸರ್ಕಾರದಿಂದಲೇ ಉಚಿತ ಉಪಕರಣಗಳ ಹಂಚಿಕೆ ಹೀಗೆ ಕ್ರಾಂತಿಕಾರಕ ಹೆಜ್ಜೆಗಳ ಮೂಲಕ ಹಸಿರು ಕ್ರಾಂತಿಗೆ ಕಾರಣವಾದ ಕಾರಣ ಇವರನ್ನು ಹಸಿರುಕ್ರಾಂತಿಯ ಹರಿಕಾರ ಎಂದು ಕರೆಯುತ್ತಾರೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆದಿಯಾಗಿ ಸಮುದಾಯದ ಮುಖಂಡರು ಬಾಬುಜಗಜೀವನ್ರಾಮ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಸಮಾಜಕಲ್ಯಾಣ ಇಲಾಖೆ ಉಪ ನಿರ್ದೇಶಕ ತೇಜಾನಂದರೆಡ್ಡಿ, ಶೇಷಾದ್ರಿ ಮತ್ತಿತರರು ಇದ್ದರು.