ಸಾರಾಂಶ
ಮರು ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಆಗ್ರಹಿ
ಕನ್ನಡಪ್ರಭ ವಾರ್ತೆ ಸರಗೂರು
ತಾಲೂಕಿನ ಇಟ್ನ ಗ್ರಾಮದಲ್ಲಿ ಭಾನುವಾರ ಸಂಜೆ ಭತ್ತದ ಮೂಟೆಗಳನ್ನು ತುಂಬಿದ ಲಾರಿಯೊಂದು ನೂತನವಾಗಿ ನಿರ್ಮಿಸಿದ್ದ ಕಬಿನಿ ಬಲದಂಡೆ ನಾಳೆಯ ಸೇತುವೆ ಮೇಲೆ ಸಾಗುವಾಗ ಕುಸಿದು ಬಿದ್ದಿದ್ದು, ತಾಲೂಕಿನ ಹಲವಾರು ಸೇತುವೆಗಳು ಶಿಥಿಲಗೊಂಡಿದ್ದು, ಕೂಡಲೇ ಮರು ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.ನಾಲಾ ದುರಸ್ಥಿ ವೇಳೆಯಲ್ಲಿ ಈ ಸೇತುವೆಗಳನ್ನು ನಿರ್ಮಿಸಿದ್ದು, ಇವುಗಳೆಲ್ಲವೂ ಶಿಥಿಲಗೊಂಡಿವೆ. ಉದಾಹರಣೆಗೆ ಸರಗೂರಿನ ವಿವೇಕಾನಂದ ಆಸ್ಪತ್ರೆಯ ಹತ್ತಿರ ಇರುವ ಸೇತುವೆ, ಸಾಗರೆ, ಕೊತ್ತೇಗಾಲ, ಕೂಲ್ಯ, ಕುಂದಪಟ್ಟಣ ಈ ಸೇತುವೆಗಳೆಲ್ಲ ಬಾರಿ ಹಳೆಯದಾಗಿದ್ದು, ಈ ಸೇತುವೆಗಳು ಬೀಳುವ ಸಂಭವವಿದೆ. ಆದ್ದರಿಂದ ಇದರ ಬಗ್ಗೆ ಇಲಾಖೆಯವರು ಗಮನವಹಿಸಿ ಶೀಘ್ರದಲ್ಲೇ ದುರಸ್ತಿ ಮಾಡಿಸಿದರೆ ಒಳ್ಳೆಯದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಚಿಕ್ಕದೇವಮ್ಮನ ಬೆಟ್ಟದಿಂದ ಹಾಲುಗಡಕ್ಕೆ ಬರುವಂತಹ ಭಕ್ತಾದಿಗಳಿಗೆ ಆಲದ ಮರದ ಹತ್ತಿರ ಇರುವ ಕಬಿನಿ ನಾಲೆ ಸೇತುವೆಯು ಮುರಿದು ಬಿದ್ದ ಕಾರಣ ಚಾಮೇಗೌಡನ ಹುಂಡಿ, ಇಟ್ನ, ಕುಂದಪಟ್ಟಣ ಇನ್ನಿತರ ಗ್ರಾಮಗಳ ರೈತಾಪಿಗಳು ಈ ಸೇತುವೆ ಮುಖಾಂತರ ತಮ್ಮ ತಮ್ಮ ಜಮೀನುಗಳಿಗೆ ದನಕರ ಹಾಗೂ ಜಮೀನಿನ ಆರಂಭಗಳಿಗೆ ಇದೇ ಮಾರ್ಗವಾಗಿ ಹೋಗಿ ಬರುತ್ತಿದ್ದೆವು, ಈಗ ಈ ಸೇತುವೆ ಬಿದ್ದ ಕಾರಣ ನಾವು ನಮ್ಮ ಜಮೀನುಗಳಿಗೆ ಹೋಗಲು ಹರಸಾಹಸ ಪಡಬೇಕಾಗಿದೆ ಎಂದು ಹೇಳಲಾಗಿದೆ.ಇಲಾಖೆಯ ಅಧಿಕಾರಿಗಳು ಮಾತನಾಡಿ, ನಾಲೆಗಳಿಗೆ ನೀರನ್ನು ಬಿಟ್ಟಿರುವುದರಿಂದ ಸದ್ಯಕ್ಕೆ ಸೇತುವೆ ನಿರ್ಮಾಣ ಮಾಡಲಾಗುವುದಿಲ್ಲ, ನಾಲೆಯಲ್ಲಿ ನೀರು ನಿಂತ ನಂತರ ನಿರ್ಮಾಣ ಮಾಡಲಾಗುವುದು ಎಂದರು.
ಮುರಿದು ಬಿದ್ದ ಸೇತುವೆಯಿಂದ ಲಾರಿಯನ್ನು ಅಧಿಕಾರಿಗಳ ಸಹಕಾರದಿಂದ ಹೊರತೆಗೆದು ಬದಲಿ ಲಾರಿ ವ್ಯವಸ್ಥೆಯಲ್ಲಿ ಮಾಲೀಕರು ಮೂಟೆಗಳನ್ನು ತುಂಬಿಕೊಂಡು ಹೋದರು.-------