ಹಿಂದುಳಿದ ವರ್ಗಗಳು ‘ಕೈ’ ಬೆಂಬಲಿಸಬೇಕು: ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪಿ.ನಂಜುಂಡಿ

| Published : Nov 09 2024, 01:17 AM IST / Updated: Nov 09 2024, 05:35 AM IST

ಸಾರಾಂಶ

ಹಿಂದುಳಿದ ಸಮಾಜಗಳು ಅವಕಾಶಗಳನ್ನು ಒಗ್ಗಟ್ಟು ಪ್ರದರ್ಶಿಸಿ ಸದೃಢವಾದ ಸರ್ಕಾರದೊಂದಿಗೆ ಹೋಗ ಬೇಕು. ಕಾಂಗ್ರೆಸ್ ಬೆಂಬಲಿಸಬೇಕು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪಿ.ನಂಜುಂಡಿ ಮನವಿ ಮಾಡಿದರು.

  ಚನ್ನಪಟ್ಟಣ : ಹಿಂದುಳಿದ ವರ್ಗಗಳಿಗೆ ಅರ್ಹತೆ, ಅವಕಾಶ ಇದ್ದರೂ ರಾಜಕೀಯವಾಗಿ ಶಕ್ತಿ ಇಲ್ಲದ ಕಾರಣ ಮಹತ್ತರವಾದ ಮಸೂದೆಗಳು ತಿರಸ್ಕರಿಲ್ಪಡುತ್ತಿವೆ. ಹಿಂದುಳಿದ ಸಮಾಜಗಳು ಅವಕಾಶಗಳನ್ನು ಉಪಯೋಗಿಸಿಕೊಳ್ಳಲು ಒಗ್ಗಟ್ಟು ಪ್ರದರ್ಶಿಸಿ ಸದೃಢವಾದ ಸರ್ಕಾರದೊಂದಿಗೆ ಹೋಗಬೇಕು. ಇದಕ್ಕಾಗಿ ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಬೆಂಬಲಿಸಬೇಕು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪಿ.ನಂಜುಂಡಿ ಮನವಿ ಮಾಡಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಚುನಾವಣಾ ಪ್ರಚಾರಕ್ಕೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಮೂರೂ ಕ್ಷೇತ್ರಗಳ ಉಪ ಚುನಾವಣೆಗಳ ಫಲಿತಾಂಶ ನಿರ್ಧರಿಸುವಲ್ಲಿ ವಿಶ್ವಕರ್ಮ ಮಾತ್ರವಲ್ಲದೆ ಹಿಂದುಳಿದ ವರ್ಗಗಳೇ ಪ್ರಮುಖ ಪಾತ್ರ ವಹಿಸುವಂತಹ ಗಟ್ಟಿ ನಿರ್ಧಾರವನ್ನು ಮತದಾರರು ತೆಗೆದುಕೊಳ್ಳಬೇಕು ಎಂದರು.

ಈಗಿನ ರಾಜಕಾರಣದಲ್ಲಿ ಯಾವಾಗಲೂ ಕಾಂಬಿನೇಷನ್‌ಗಳು ವರ್ಕ್ ಔಟ್ ಆಗುತ್ತವೆ. ಸಿದ್ದರಾಮಯ್ಯ ಹಿಂದುಳಿದ ವರ್ಗ ಹಾಗೂ ಡಿ.ಕೆ.ಶಿವಕುಮಾರ್ ಬಲಿಷ್ಠ ಒಕ್ಕಲಿಗ ಸಮುದಾಯದಿಂದ ಬಂದಿರುವ ನಾಯಕರು. ರಾಜ್ಯದಲ್ಲಿ ಇಬ್ಬರ ಕಾಂಬಿನೇಷನ್ ಚೆನ್ನಾಗಿ ವರ್ಕ್ ಔಟ್ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಶಕ್ತಿ ಇಲ್ಲದಂತಹ ವಿಶ್ವಕರ್ಮ, ಕುರುಬ ಸೇರಿ 187 ಹಿಂದುಳಿದ ಸಮಾಜಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ತಿಳಿಸಿದರು.

ನಾನು ನಮ್ಮ ಸಮುದಾಯದೊಂದಿಗೆ ಹೋರಾಟ ನಡೆಸಿ ವಿಶ್ವಕರ್ಮ ಜಯಂತಿ, ಜಕಣಾಚಾರಿ ಜಯಂತಿ, ಅಭಿವೃದ್ಧಿ ನಿಗಮ ಸ್ಥಾಪಿಸಲು ಶ್ರಮಿಸಿದ್ದೇನೆ. ಈಗ ಕುಲಶಾಸ್ತ್ರ ಅಧ್ಯಯನದ ಮೂಲಕ ಮೀಸಲಾತಿ ಬೇಕೆಂದು ಹೋರಾಟ ಮಾಡುತ್ತಿದ್ದೇನೆ. ದೇಶದ ಎಲ್ಲ ಗುಡಿ ಗೋಪುರಗಳನ್ನು ವಿಶ್ವ ಕರ್ಮ ಸಮುದಾಯದವರೇ ನಿರ್ಮಿಸಿದ್ದಾರೆ. ಹೀಗಾಗಿ ಮುಜರಾಯಿ ಇಲಾಖೆ ವ್ಯಾಪ್ತಿಯ ದೇಗುಲಗಳ ಆಡಳಿತ ಮಂಡಳಿಯಲ್ಲಿ ಒಂದು ಸ್ಥಾನ ವಿಶ್ವಕರ್ಮ ಸಮುದಾಯದವರಿಗೆ ಮೀಸಲಿಡಬೇಕೆಂದು ಹೋರಾಟ ನಡೆಸುತ್ತಿದ್ದೇನೆ. ನಮ್ಮ ಹೋರಾಟಕ್ಕೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿರವರೂ ಬೆಂಬಲ ನೀಡಿ ಕ್ಯಾಬಿನೆಟ್‌ನಲ್ಲಿ ಈ ಕುರಿತು ಒಪ್ಪಿಗೆ ಕೊಡಿಸಿದರು. ಆದರೆ ಈ ಕುರಿತು ವಿಧೇಯಕಕ್ಕೆ ಪರಿಷತ್‌ನಲ್ಲಿ ಸೋಲುಂಟಾಗುವಂತೆ ಬಿಜೆಪಿಯವರು ಮಾಡಿದರು ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಹೆಚ್ಚು ಆದಾಯ ಬರುತ್ತಿರುವ ದೇವಾಲಯಗಳ ಹಣವನ್ನು ಆದಾಯವಿಲ್ಲದ ದೇಗುಲಗಳಿಗೆ ನೀಡುವ ತಿದ್ದುಪಡಿ ತಂದಿದ್ದರು. ಆಗ ಬಿಜೆಪಿಯವರು ದೇವಾಲಯದ ಹಣವನ್ನು ಮಸೀದಿ ಮತ್ತು ಚರ್ಚ್‌ಗಳಿಗೆ ಹಂಚುತ್ತಿದ್ದಾರೆಂದು ತಪ್ಪಾಗಿ ಅರ್ಥೈಸಿ ತಡೆ ಹಿಡಿಯುವಂತೆ ಮಾಡಿದರು ಎಂದು ಕಿಡಿಕಾರಿದರು.

ಸರ್ಕಾರ ನಂತರ ಈ ಮಸೂದೆಯನ್ನು ಕಮಿಟಿ ಹೆಗಲಿಗೆ ವಹಿಸಿತು. ನನ್ನ ಒತ್ತಡದಿಂದ ಮತ್ತೊಮ್ಮೆ ಮಸೂದೆ ಮಂಡಿಸಿದಾಗ ಪರಿಷತ್‌ನಲ್ಲಿ ಒಪ್ಪಿಗೆ ಸಿಕ್ಕಿತು. ಆದರೆ ಇಲ್ಲಿವರೆಗೂ ರಾಜ್ಯಪಾಲರಿಂದ ಅಂಕಿತ ಬಿದ್ದಿಲ್ಲ. ಅರ್ಹತೆ, ಅವಕಾಶ ಇದ್ದರೂ ಕೊನೆಗೆ ತಿರಸ್ಕರಿಲ್ಪಡುವವರು ಹಿಂದುಳಿದ ವರ್ಗದವರೆ. ಆದ್ದರಿಂದ ಮತದಾನ ಅವಕಾಶಗಳನ್ನು ಉಪಯೋಗಿಸಿಕೊಂಡು ಸದೃಢವಾದ ಸರ್ಕಾರದೊಂದಿಗೆ ಹೋಗಬೇಕು ಎಂದು ನಂಜುಂಡಿ ಮತದಾರರಲ್ಲಿ ಮನವಿ ಮಾಡಿದರು.