ಸಾರಾಂಶ
ಇಪ್ಪತ್ತು ಸಾವಿರ ರುಪಾಯಿ ಸಾಲದ ಹಣಕ್ಕಾಗಿ ವ್ಯಕ್ತಿಯನ್ನು ಸರಪಳಿಯಿಂದ ಕಟ್ಟಿ ಹಾಕಿದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಚಡಚಣ (ಬಾಗಲಕೋಟೆ) : ಇಪ್ಪತ್ತು ಸಾವಿರ ರುಪಾಯಿ ಸಾಲದ ಹಣಕ್ಕಾಗಿ ವ್ಯಕ್ತಿಯನ್ನು ಸರಪಳಿಯಿಂದ ಕಟ್ಟಿ ಹಾಕಿದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಚಾಲಕನಾದ ಚಾಂದಸಾಬ್ ಅಲ್ಲಾವುದ್ದೀನ್ ಮುಲ್ಲಾ ಎಂಬಾತ ಚಾಲಕ ಕೆಲಸಕ್ಕೆ ಬರುವುದಾಗಿ ಹೇಳಿ ಆರೋಪಿ ಕುಮಾರಗೌಡ ಬಿರಾದಾರ್ ಬಳಿ ₹20 ಸಾವಿರ ಹಣ ಪಡೆದಿದ್ದ. ಬಳಿಕ ಕೆಲಸಕ್ಕೂ ಹೋಗದೇ ಹಣವನ್ನೂ ವಾಪಸ್ ಕೊಡದೇ ಸತಾಯಿಸುತ್ತಿದ್ದ. ಇದರಿಂದ ಕುಪಿತರಾದ ಆರೋಪಿಗಳಾದ ಕುಮಾರಗೌಡ ಬಿರಾದಾರ ಹಾಗೂ ಶ್ರೀಶೈಲ ಬಿರಾದಾರ ಸೇರಿ ಚಡಚಣದಲ್ಲಿ ಸಿಕ್ಕ ಚಾಂದಸಾಬ್ನನ್ನು ತಮ್ಮ ಪಲ್ಸರ್ ಬೈಕ್ ಮೇಲೆ ಹತ್ತಿಸಿಕೊಂಡು ಹತ್ತಳ್ಳಿ ಗ್ರಾಮಕ್ಕೆ ಕರೆತಂದಿದ್ದಾರೆ.
ಬಳಿಕ ಮಲ್ಲಿಕಾರ್ಜುನ ಬಿರಾದಾರ್ ಅಂಗಡಿಯ ಮುಂದೆ ಕಾಲಿಗೆ ಸರಪಳಿ ಕಟ್ಟಿ ಬೀಗ ಜಡಿದು ಹಣಕ್ಕಾಗಿ ಒತ್ತಾಯಿಸಿದ್ದಾರೆ. ಸಂಜೆ ವೇಳೆಗೆ ಸರಪಳಿ ಬಿಚ್ಚಿ ಕಳುಹಿಸಿ ಕೊಟ್ಟಿದ್ದಾರೆ. ಘಟನೆ ನಡೆದು ನಾಲ್ಕೈದು ದಿನಗಳಾಗಿದ್ದು, ಚಾಂದಸಾಬ್ ಮುಲ್ಲಾ ಶನಿವಾರ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.