ಛತ್ರಪತಿ ಶಿವಾಜಿರ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಖಾ ಮಸೀದಿಗೆ ಬೀಗ ಜಡಿಯಬೇಕು ಎಂದು ಹಿಂದೂ ಜಾಗರಣ ವೇದಿಕೆ ಉತ್ತರ ಪ್ರಾಂತ ಸಹ ಸಂಚಾಲಕರಾದ ಮುಖಂಡ ಶ್ರೀಕಾಂತ ಹೊಸಕೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಛತ್ರಪತಿ ಶಿವಾಜಿರ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಖಾ ಮಸೀದಿಗೆ ಬೀಗ ಜಡಿಯಬೇಕು ಎಂದು ಹಿಂದೂ ಜಾಗರಣ ವೇದಿಕೆ ಉತ್ತರ ಪ್ರಾಂತ ಸಹ ಸಂಚಾಲಕರಾದ ಮುಖಂಡ ಶ್ರೀಕಾಂತ ಹೊಸಕೇರಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲು ತೂರಾಟ ನಡೆಸಿದ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಮಸೀದಿಯಲ್ಲಿ ಸುಮಾರು 100ಕ್ಕೂ ಅಧಿಕ ಜನರಿದ್ದರು. ಅವರನ್ನೆಲ್ಲ ಬಂಧಿಸಬೇಕು. ಪದೇ ಪದೆ ಈ ಮಸೀದಿಯಿಂದ ಇಂತಹ ಘಟನೆಗಳು ನಡೆಯುತ್ತಿದೆ. ಬಾಗಲಕೋಟೆಯಲ್ಲಿ ಶಾಂತಿ ನೆಲೆಸಬೇಕಾದರೆ ಕೂಡಲೇ ಸರ್ಕಾರ ಎಚ್ಚೆತ್ತು ಮಸೀದಿಗೆ ಬೀಗ ಜಡಿಯಬೇಕು ಎಂದು ಆಗ್ರಹಿಸಿದರು.

ಮಸೀದಿಯ ಕಮಿಟಿ ಸದಸ್ಯರ ಮೇಲೆ ಹಾಗೂ ಕಲ್ಲು ಎಸೆದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಪೊಲೀಸ್ ಇಲಾಖೆ ಘಟನೆಯಲ್ಲಿ ತುಷ್ಟೀರಣ ನೀತಿ ಅನುಸರಿಸುತ್ತಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೇಲೆ ಕಲ್ಲು ಬಿದ್ದಿದೆ. ಆದರೆ ಇದನ್ನು ಮರೆಮಾಚಲಾಗುತ್ತಿದೆ. ಸರಕಾರ ಪೊಲೀಸರ ಮೇಲೆಯೂ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಸಿದರು.

ನವನಗರದಲ್ಲಿ ಅನೇಕ ಸೆಕ್ಟರ್‌ ಗಳಲ್ಲಿ ಅನಧಿಕೃತ ಮಸೀದಿಗಳು ತಲೆ ಎತ್ತಿದ್ದು, ಇದಕ್ಕೆ ಅಧಿಕಾರಿಗಳು, ರಾಜಕಾರಣಿಗಳು ಕುಮ್ಮಕ್ಕಿದೆ. ಇದೇ ಧೋರಣೆ ಮುಂದುವರಿದಲ್ಲಿ ಕಾನೂನು ಭಂಗ ಹಾಗೂ ಅಶಾಂತಿಗೆ ಕಾರಣವಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕಿರಣ ಪವಾಡಶೆಟ್ಟರ, ಕುಮಾರಸ್ವಾಮಿ ಹಿರೇಮಠ, ವೆಂಕಣ್ಣ ಯಳ್ಳಿಗುತ್ತಿ, ಕಾಂತು ಜಾಪೂರ, ಶರಣು ಗೌಡರ, ಮಲ್ಲು ಕೋಟಿ ಉಪಸ್ಥಿತರಿದ್ದರು.