ಕನ್ನಡಪ್ರಭ ವಾರ್ತೆ ಬೈಲಹೊಂಗಲ ಬ್ರಿಟಿಷ ಕಾಲದಿಂದಲೂ ಉಪವಿಭಾಗ ಕೇಂದ್ರವಾಗಿರುವ ಬೈಲಹೊಂಗಲ ಜಿಲ್ಲಾ ಕೇಂದ್ರ ಮಾಡುವಂತೆ ಒತ್ತಾಯಿಸಿ ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಮುಖಂಡರು, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬೈಲಹೊಂಗಲ ಬಂದ್ ಬಹುತೇಕ ಯಶಸ್ವಿಯಾಗಿದೆ.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಬ್ರಿಟಿಷ ಕಾಲದಿಂದಲೂ ಉಪವಿಭಾಗ ಕೇಂದ್ರವಾಗಿರುವ ಬೈಲಹೊಂಗಲ ಜಿಲ್ಲಾ ಕೇಂದ್ರ ಮಾಡುವಂತೆ ಒತ್ತಾಯಿಸಿ ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಮುಖಂಡರು, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬೈಲಹೊಂಗಲ ಬಂದ್ ಬಹುತೇಕ ಯಶಸ್ವಿಯಾಗಿದೆ.ಶನಿವಾರ ಬಂದ್ ಹಿನ್ನಲೆಯಲ್ಲಿ ಕೇಂದ್ರ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಶಾಲಾ, ಕಾಲೇಜುಗಳು, ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಶಾಖಾ ಮೂರುಸಾವಿರ ಮಠದಲ್ಲಿ ಜರುಗುದ ಪ್ರತಿಭಟನಾ ಮೆರವಣಿಗೆ ಉದ್ದೇಶಿಸಿ ಹೊಸೂರ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ಮಾತನಾಡಿ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ ಅನೇಕ ವೀರ ಮಹನೀಯರು ಪ್ರಾಣ ತ್ಯಾಗ ಮಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಬ್ರಿಟಿಷ್ ಕಾಲದಿಂದಲೂ ಬೈಲಹೊಂಗಲ ಉಪ ವಿಭಾಗವಾಗಿದೆ. ಇದನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸಿ ಕಳೆದ 3 ದಶಕಗಳಿಂದ ಹೋರಾಟ ಮಾಡುತ್ತಿದ್ದು, ಸರಕಾರ ಇಚ್ಛಾ ಶಕ್ತಿ ತೋರದಿರುವುದು ದುರ್ದೈವದ ಸಂಗತಿ. ಈ ಹೋರಾಟ ನಿರ್ಣಾಯಕ ಅಂತ್ಯ ಕಾಣಬೇಕಿದ್ದಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಯ ವಿಭಜನೆ ಕುರಿತು ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಶಿವರಂಜನ ಬೋಳನ್ನವರ ಮಾತನಾಡಿ, ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಲು ಸರಕಾರ ಮುಂದಾದರೆ ಬೈಲಹೊಂಗಲಕ್ಕೆ ಪ್ರಥಮ ಆದ್ಯತೆ ನೀಡಬೇಕು. ಜಿಲ್ಲೆಯಾಗಲು ಬೈಲಹೊಂಗಲ ಕ್ಷೇತ್ರ ಎಲ್ಲ ಅರ್ಹತೆ ಹೊಂದಿದ್ದು, ಕಳೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಳಿ ನಿಯೋಗ ಬೈಲಹೊಂಗಲ ಕೈಪಿಡಿ ನೀಡಲಾಗಿದೆ. ಮತ್ತೆ ಶಾಸಕರ ನೇತೃತ್ವ, ಮಠಾಧೀಶರ ಮಾರ್ಗದರ್ಶನ ಹಾಗೂ ಎಲ್ಲ ಸಂಘಟನೆಗಳ ಮುಖಂಡರ ಸಹಯೋಗದಲ್ಲಿ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಮನವಿ ಸಲ್ಲಿಸಿ ಮನವರಿಕೆ ಮಾಡಲಾಗುವುದು. ಒಂದು ವೇಳೆ ಸರಕಾರ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಬೈಲಹೊಂಗಲ ನಿರ್ಲಕ್ಷಿಸಿದರೆ ಉಗ್ರ ಹೋರಾಟ ನಡೆಸಲಾಗುವುದು. ಅಲ್ಲದೇ, ಮುಂದಿನ ಅಹಿತಕರ ಘಟನೆಗಳಿಗೆ ಸರ್ಕಾರ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಮಹಾಂತೇಶ ತುರಮರಿ, ವಿಜಯ ಮೆಟಗುಡ್ಡ, ಮಲ್ಲಿಕಾರ್ಜುನ ಹುಂಬಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, ಬಿ.ಬಿ.ಗಣಾಚಾರಿ, ಬಾಬು ಸುತಗಟ್ಟಿ, ಮಲ್ಲಪ್ಪ ಮುರಗೋಡ, ಶಿವಾನಂದ ಕೋಲಕಾರ, ಡಾ.ಶಿವನಾಗ ಅವ್ವಕ್ಕನವರ, ಮಾಜಿ ಸೈನಿಕ ಗಂಗಪ್ಪ ಗುಗ್ಗರಿ, ಬಸವರಾಜ ಕಮತ, ರಾಚಪ್ಪ ಪಾಟೀಲ, ನಿಂಗಪ್ಪ ಚೌಡಣ್ಣವರ, ವಿಠ್ಠಲ ಕಡಕೋಳ, ಡಾ.ಎ.ಎಂ.ಬಾಗೇವಾಡಿ, ಸಂತೋಷ ಹಡಪದ, ಬಸವರಾಜ ಸಂಪಗಾವ ಮಾತನಾಡಿದರು.ಇದೇ ವೇಳೆಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಹಾಗೂ ಲೋಕಾಯುಕ್ತ ಇನ್ಸಪೆಕ್ಟರ್ ಪಂಚಾಕ್ಷರಯ್ಯ ಸಾಲಿಮಠ ಅವರ ನಿಧನಕ್ಕೆ ಮೌನಾಚರಣೆ ಮಾಡಿ ಸಂತಾಪ ಸೂಚಿಸಿದರು. ನಂತರ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಪ್ರಮುಖ ಬಜಾರ್ ರಸ್ತೆಯ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೈಲಹೊಂಗಲ ಜಿಲ್ಲಾ ಕೇಂದ್ರಕ್ಕಾಗಿ ಘೋಷಣೆ ಕೂಗಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಪ್ರವೀಣ ಜೈನ್ ಮನವಿ ಸ್ವೀಕರಿಸಿ ಮಾತನಾಡಿ, ಮನವಿಯನ್ನು ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಡಾ.ಮಹಾಂತಯ್ಯ ಆರಾದ್ರಮಠ ಶಾಸ್ತ್ರಿಗಳು, ಬಸವರಾಜ ಕೌಜಲಗಿ, ಮಹೇಶ ಬೆಲ್ಲದ, ಮಹಾಂತೇಶ ಮತ್ತಿಕೊಪ್ಪ, ಶಂಕರ ಬೋಳನ್ನವರ, ಸಿ.ಆರ್.ಪಾಟೀಲ, ಮಡಿವಾಳಪ್ಪ ಹೋಟಿ, ಪ್ರಫುಲ್ ಪಾಟೀಲ, ಅರ್ಜುನ ಕಲಕುಟಕರ, ಗುರು ಮೆಟಗುಡ್ಡ, ಪ್ರಮೋಕುಮಾರ ವಕ್ಕುಂದಮಠ, ಬಸವರಾಜ ಭರಮಣ್ಣವರ, ಸೋಮನಾಥ ಸೊಪ್ಪಿಮಠ, ಚಂದ್ರಶೇಖರ ಕೊಪ್ಪದ, ಬುಡ್ಡೆಸಾಬ ಶಿರಸಂಗಿ, ಗುಂಡಪ್ಪ ಸನದಿ, ಆನಂದಗೌಡ ಪಾಟೀಲ, ಶಾಂತಾ ಮಡ್ದಿಕರ ಹಾಗೂ ವಿವಿಧ ಕನ್ನಡಪರ, ರೈತ ಮುಖಂಡರು, ವ್ಯಾಪಾರಸ್ಥರು ಸೇರಿದಂತೆ ಹಲವರು ಭಾಗವಹಿಸಿದ್ದರು.ನ್ಯಾಯವಾದಿಗಳು ಕಲಾಪದಿಂದ ದೂರ ಉಳಿದು ಬಂದ್ ಗೆ ಬೆಂಬಲ ಸೂಚಿಸಿದರು. ಬಂದ್ ವೇಳೆ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ ಮಾರ್ಗದರ್ಶನದಲ್ಲಿ ಸಿಪಿಐ ಪ್ರಮೋದ ಯಲಿಗಾರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ನಗರಕ್ಕೆ ಆಗಮಿಸಿದ ಲೋಕಾಯುಕ್ತ ಇನ್ಸಪೆಕ್ಟರ್ ಪಂಚಾಕ್ಷರಯ್ಯ ಸಾಲಿಮಠ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಅಧಿಕಾರಿಗಳು ಹಾಗೂ ಹೋರಾಟಗಾರರು ಪಡೆದು ಗೌರವ ಸಲ್ಲಿಸಿದರು.
----ಕೋಟ್
ಸರ್ಕಾರ ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲೆ ವಿಭಜನೆ ಮಾಡುವುದಾದರೆ ಉಪ ವಿಭಾಗ ಕೇಂದ್ರವಾಗಿರುವ ಬೈಲಹೊಂಗಲನ್ನೇ ಜಿಲ್ಲೆ ಮಾಡುವಂತೆ ಒತ್ತಾಯಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಹೋರಾಟಕ್ಕೆ ಸಿದ್ಧವಿರುವುದಾಗಿ ಘೋಷಿಸಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲಾಗುವುದು.ಬಾಬಾಸಾಹೇಬ ಪಾಟೀಲ, ಚ.ಕಿತ್ತೂರು ಶಾಸಕರು