ಸಾರಾಂಶ
ಬೆಂಗಳೂರು : ತ್ಯಾಗ-ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಸೋಮವಾರ ನಗರದ ವಿವಿಧೆಡೆ ವಿಶೇಷ ಸಾಮೂಹಿಕ ಪ್ರಾರ್ಥನೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ವಿವಿಧ ಪ್ರದೇಶಗಳಿಂದ ಈದ್ಗಾ ಮೈದಾನಗಳಿಗೆ ಆಗಮಿಸಿದ ಮುಸಲ್ಮಾನರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಧರ್ಮಗುರುಗಳು ಹಬ್ಬದ ಸಂದೇಶ ನೀಡಿ, ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗುವಂತೆ ಹಾಗೂ ಆರೋಗ್ಯಪೂರ್ಣ ಬದುಕಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ನಗರದ ಕಲಾಸಿಪಾಳ್ಯ, ಚಾಮರಾಜಪೇಟೆ, ಶಿವಾಜಿನಗರ, ಬಿಟಿಎಂ ಲೇಔಟ್, ಪಾದರಾಯನಪುರ, ಹೆಬ್ಬಾಳ, ಆರ್.ಟಿ.ನಗರ, ಶಾಂತಿನಗರ, ಮೈಸೂರು ರಸ್ತೆ, ಜಯನಗರ, ಲಾಲ್ಬಾಗ್, ಮಾಗಡಿ ರಸ್ತೆ, ಕಮ್ಮಗೊಂಡನಹಳ್ಳಿ, ಸೇರಿದಂತೆ ವಿವಿಧಡೆ ಮಸೀದಿ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಪರಸ್ಪರ ಆಲಿಂಗನದ ಮೂಲಕ ಶುಭ ಕೋರಿಕೊಂಡರು.
ಪುಟ್ಟಮಕ್ಕಳು, ದೊಡ್ಡವರು ಸೇರಿದಂತೆ ಹೊಸಬಟ್ಟೆ ಧರಿಸಿ ಪಾಲ್ಗೊಂಡಿದ್ದರು. ಚಾಮರಾಜಪೇಟೆಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಮಕ್ಕಳು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.