ತ್ಯಾಗ-ಬಲಿದಾನದ ಬಕ್ರೀದ್‌ ಆಚರಣೆ

| Published : Jun 18 2024, 12:46 AM IST

ಸಾರಾಂಶ

ವಿಶ್ವದೆಲ್ಲೆಡೆ ಸುಖ-ಶಾಂತಿ ನೆಲೆಸುವಂತೆ ಹಾಗೂ ಸರ್ವ ಸಮಾಜದವರು ಸಾಮರಸ್ಯದಿಂದ ಬಾಳುಬೇಕು ಜತೆಗೆ ಸಕಾಲಕ್ಕೆ ಮಳೆ-ಬೆಳೆ ಆಗಲಿ ಎಂದು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು.

ಹುಬ್ಬಳ್ಳಿ:

ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್‌ (ಈದ್‌-ಅಲ್‌-ಅಧಾ)ನ್ನು ಸೋಮವಾರ ಮಹಾನಗರ ಸೇರಿದಂತೆ ಎಲ್ಲೆಡೆ ಶ್ರದ್ಧಾ-ಭಕ್ತಿಯಿಂದ ಮುಸ್ಲಿಮ ಬಾಂಧವರು ಆಚರಿಸಿದರು.

ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಮೌಲಾನಾ ಜಹೀರುದ್ದೀನ್‌ ಖಾಜಿ ಹಾಗೂ ಹಳೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮೌಲಾನಾ ನಯೀಮೊದ್ದೀನ ಶೇಖ್‌ ಅವರ ನೇತೃತ್ವದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ವಿಶ್ವದೆಲ್ಲೆಡೆ ಸುಖ-ಶಾಂತಿ ನೆಲೆಸುವಂತೆ ಹಾಗೂ ಸರ್ವ ಸಮಾಜದವರು ಸಾಮರಸ್ಯದಿಂದ ಬಾಳುಬೇಕು ಜತೆಗೆ ಸಕಾಲಕ್ಕೆ ಮಳೆ-ಬೆಳೆ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಿದ ನಂತರ, ಸಂಪ್ರದಾಯದಂತೆ ನಗರದ ಮೂರು ಸಾವಿರಮಠಕ್ಕೆ ಭೇಟಿ ನೀಡಿದ ಧರ್ಮ ಗುರುಗಳು ಹಾಗೂ ಮುಖಂಡರು ಶ್ರೀಗಳ ಆಶೀರ್ವಾದ ಪಡೆದುಕೊಂಡರು.

ಅದಕ್ಕೂ ಮುನ್ನ ಸಮಾಜದ ಬಾಂಧವರು ಪರಸ್ಪರ ಆಲಂಗನೆ ಮಾಡಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಸಾಮೂಹಿಕ ಪ್ರಾರ್ಥನೆಯಲ್ಲಿ ಅಂಜುಮನ್‌ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಗೌರವ ಕಾರ್ಯದರ್ಶಿ ಬಶೀರ ಹಳ್ಳೂರ, ಜಂಟಿ ಕಾರ್ಯದರ್ಶಿ ರಫೀಕ ಬಂಕಾಪೂರ, ಸಲೀಂ ಸುಂಡಕೆ, ನವೀದ್‌ ಮುಲ್ಲಾ, ರಿಯಾಜ್‌ ಖತೀಬ್‌, ಫಾರೋಖ ಅಬ್ಬುನವರ, ಕೆಪಿಸಿಸಿ ಕಾರ್ಯದರ್ಶಿ ಅಲ್ತಾಫ್‌ ಕಿತ್ತೂರ, ಮುಖಂಡರಾದ ಮುನ್ನಾ ಕಿತ್ತೂರ, ರಫೀಕ ಚವ್ಹಾಣ, ಬಾಬಾ ಐನಾಪುರಿ, ಫೈಜುಲ್ಲಾ ಕಾಲೇಬುಡ್ಡೆ, ಮುಶ್ತಾಕ ಸುಂಡಕೆ, ಮುಶ್ತಾಕ ಸವಣೂರ, ಅಬ್ದುಲ್‌ ಕರೀಮ್‌ ಮಿಶ್ರೀಕೋಟಿ, ಗೌಸ ಮೋದಿನ್‌ ದೊಡ್ಡಮನಿ, ಇಮಾಮ ಹುಸೇನ ಮಡಕಿ, ಫಾರೋಖ ಕಾಲೇಬುಡ್ಡೆ, ಜಾಫರ ಕಿತ್ತೂರ, ಮುಶ್ತಾಕ ಮುದಗಲ, ಅಬ್ಬು ಬಿಜಾಪುರ ಹಾಗೂ ಎಲ್ಲ ಮೊಹಲ್ಲಾಗಳ ಮುತವಲ್ಲಿ ಹಾಗೂ ಜಮಾತಿನ ಪದಾಧಿಕಾರಿಗಳು, ಪಾಲಿಕೆ ಸದಸ್ಯರು ಹಾಗೂ ಸಾವಿರಾರು ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ಉಪಸ್ಥಿತರಿದ್ದರು.