ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಹೇಮಾವತಿ ಪ್ರತಿಮೆ ಬಳಿ ಯುಗಯೋಗಿ, ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 80ನೇ ಜನ್ಮ ಜಯಂತಿಯನ್ನು ಮಾಜಿ ಶಾಸಕ ದಿವಂಗತ ಎಚ್.ಎಸ್ ಪ್ರಕಾಶ್ ಪುತ್ರ ಶಾಸಕ ಎಚ್.ಪಿ. ಸ್ವರೂಪ್, ಕುಟುಂಬದ ಸದಸ್ಯರು ಹಾಗೂ ಮಠದ ಸದ್ಭಕ್ತರು ಸೇರಿ ಪೂಜ್ಯರ ಭಾವಚಿತ್ರವನ್ನಿಟ್ಟು ನಮನ ಅರ್ಪಿಸಿ, ನಂತರ ಸಾವಿರಾರು ಜನರಿಗೆ ಅನ್ನದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜನ್ಮದಿನದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಗಳು ಒಂದು ಸಮುದಾಯಕ್ಕೆ ಸೀಮಿತವಾಗದೇ ಇಡೀ ಸಮಾಜದಲ್ಲಿ ನೊಂದ
ವರ್ಗದ ಜನತೆಗೆ ಧ್ವನಿಯಾದರು. ಶ್ರೀ ಮಠದಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅವರು ನೀಡಿದ ವಿದ್ಯಾದಾನವು ಸಮಾಜದಲ್ಲಿ ಅವರ ಹೆಸರನ್ನು ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಪ್ರತಿವರ್ಷ ನಮ್ಮ ಕುಟುಂಬದಿಂದ ಸ್ವಾಮೀಜಿಯವರ ಜನ್ಮದಿನದಂದು ಅನ್ನದಾನ ಹಮ್ಮಿಕೊಳ್ಳುತ್ತಾ ಬರಲಾಗಿದೆ ಎಂದರು.ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ ಮಾತನಾಡಿ, ಜಿಲ್ಲೆಗೆ ಮಹಾ ಸ್ವಾಮೀಜಿಗಳ ಪಾದರ್ಪಣೆಯಿಂದ ಅನೇಕ ಸತ್ಕಾರ್ಯಗಳು ಹಾಸನದಲ್ಲಿ ನಡೆದಿವೆ. ಶಾಲಾ, ಕಾಲೇಜುಗಳನ್ನು ತೆರೆದು ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ.ಸಮಾಜದಲ್ಲಿ ವಂಚಿತ ಸಮುದಾಯವನ್ನು ಮೇಲಕ್ಕೆತ್ತಿದ್ದಾರೆ ಎಂದರು.
ದೇಶ ವಿದೇಶಗಳಲ್ಲಿ ಆದಿ ಚುಂಚನಗಿರಿ ಮಠವನ್ನು ತೆರೆದು ಜ್ಞಾನ ಹರಡಿದ್ದಾರೆ ಎಂದು ತಿಳಿಸಿ. ಶಾಸಕರಾದ ಎಚ್.ಪಿ. ಸ್ವರೂಪ್ ಅವರು ಅನ್ನದಾಸೋಹದ ವ್ಯವಸ್ಥೆ ಮಾಡಿರುವುದನ್ನು ಶ್ಲಾಘಿಸಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ ಮಾತನಾಡಿ, ಸ್ವಾಮೀಜಿಯವರು ಹಾಕಿಕೊಟ್ಟ ಯೋಜನೆಗಳು ಇಂದಿಗೂ ಕೂಡ ಮುಂದುವರೆದುಕೊಂಡು ಬರುತ್ತಿವೆ. ಎಚ್.ಎಸ್. ಪ್ರಕಾಶ್ ಶಾಸಕರಾಗಿದ್ದಾಗ ಸ್ವಾಮೀಜಿಯವರ ಸದ್ಭಕ್ತರಾಗಿ ಅವರು ಹಾಕಿಕೊಟ್ಟ ದಾರಿಯನ್ನು
ಪಾಲಿಸುತ್ತಿದ್ದರು. ಅದರಂತೆ ಈಗ ಅವರ ಪುತ್ರ ಎಚ್.ಪಿ. ಪ್ರಕಾಶ್ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರು.ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರು ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಬಹುವಿಧ ದಾಸೋಹಿಗಳಾಗಿ ನಾಡಿಗೆ ನೀಡಿರುವ ಕೊಡುಗೆ ಮಹತ್ತರವಾದುದು ಎಂದು ಹೇಳಿದರು.
ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ ಮಾತನಾಡಿ, ಶಾಸಕ ಎಚ್.ಪಿ. ಸ್ವರೂಪ್ ಅವರ ಕುಟುಂಬದವರು ಪ್ರತಿವರ್ಷವೂ ಅನ್ನಸಂತರ್ಪಣೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಬಡವರು ಯಾರಿದ್ದಾರೋ ಅಂತಹವರ ಮಕ್ಕಳಿಗೆ ವಿದ್ಯೆ ನೀಡಿ ಬದುಕುವ ದಾರಿ ಮಾಡಿಕೊಟ್ಟಿರುವವರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು, ನಾನೂ ಕೂಡ ಮಠದ ವಿದ್ಯಾರ್ಥಿಯಾಗಿದ್ದೇನೆ ಎಂದರು.ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್, ಜೆಡಿಎಸ್ ಜಿಲ್ಲಾ ವಕ್ತಾರ ಹೊಂಗೆರೆ ರಘು, ಇತರರು ಹಾಜರಿದ್ದರು.