ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಸಾರ್ವಜನಿಕ ಸ್ಥಳಗಳಲ್ಲಿ “ಸಮೂಹ ನಮಾಜ್” ಹೆಸರಿನಲ್ಲಿ ರಸ್ತೆ, ಸರ್ಕಾರಿ ಆವರಣ ಹಾಗೂ ಸಾರ್ವಜನಿಕ ಸೌಲಭ್ಯಗಳ ದುರುಪಯೋಗ ನಡೆಯುತ್ತಿರುವುದನ್ನು ಖಂಡಿಸಿ, ತಕ್ಷಣವೇ ಸರ್ಕಾರ ನಿಷೇಧ ಸೂಚನೆ ಹೊರಡಿಸಬೇಕೆಂದು ಆಗ್ರಹಿಸಿ ಶ್ರೀರಾಮಸೇನೆಯಿಂದ ಶುಕ್ರವಾರ ಅಪರ ಜಿಲ್ಲಾಧಿಕಾರಿ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಶ್ರೀರಾಮಸೇನೆ ರಾಜ್ಯ ದಕ್ಷಿಣ ಪ್ರಾಂತ್ ಸಹ ಕಾರ್ಯದರ್ಶಿ ಜಾನೆಕೆರೆ ಹೇಮಂತ್ ಮಾತನಾಡಿ, ರಾಜ್ಯದ ವಿವಿಧ ನಗರಗಳು ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತೀ ಶುಕ್ರವಾರ ಮತ್ತು ವಿಶೇಷ ದಿನಗಳಲ್ಲಿ ರಸ್ತೆ, ಬಸ್ ನಿಲ್ದಾಣ, ಸರ್ಕಾರಿ ಕಚೇರಿ ಆವರಣ, ಶಾಲಾ ಮೈದಾನ ಮತ್ತು ಉದ್ಯಾನಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಸಮೂಹ ನಮಾಜ್ ನಡೆಯುತ್ತಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ, ತುರ್ತು ಸೇವೆಗಳಾದ ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳ ಚಲನವಲನಕ್ಕೂ ತೊಂದರೆ ಆಗುತ್ತಿದೆ ಎಂದರು. ಹಿಂದೂ ಹಬ್ಬಗಳು, ಜಾತ್ರೆಗಳು, ಗಣೇಶೋತ್ಸವ ಮತ್ತು ರಾಮನವಮಿ ಮೆರವಣಿಗೆಗಳಿಗೆ ಕಟ್ಟುನಿಟ್ಟಿನ ನಿಯಮ ಹೇರಲಾಗುತ್ತದೆ. ಆದರೆ ರಸ್ತೆ ಮೇಲೆ ನಡೆಯುವ ನಮಾಜ್ ಕುರಿತು ಸರ್ಕಾರ ಮೌನದಲ್ಲಿರುವುದು ಧಾರ್ಮಿಕ ವೈಷಮ್ಯದ ಉದಾಹರಣೆ ಎಂದು ಅವರು ಆರೋಪಿಸಿದರು. ರಸ್ತೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಕಡ್ಡಾಯ. ಆದರೆ ಕೆಲವಡೆ ಪೊಲೀಸರು ಅನುಮತಿ ಪಡೆಯದೇ ಟ್ರಾಫಿಕ್ ತಿರುಗಿಸುವ ಮೂಲಕ ಸಾರ್ವಜನಿಕರ ಹಕ್ಕನ್ನು ದಾರಿ ತಪ್ಪಿಸುತ್ತಿದ್ದಾರೆ. ಸಿ.ಆರ್.ಪಿ.ಸಿ. ೧೪೪ ಮತ್ತು ಪಬ್ಲಿಕ್ ರೈಟ್ ಆಫ್ ವೇ ಆಕ್ಟ್ ಪ್ರಕಾರ ರಸ್ತೆ ಎಲ್ಲರಿಗೂ ಸೇರಿದ್ದು, ಅದನ್ನು ಧಾರ್ಮಿಕ ಕಾರ್ಯಕ್ಕಾಗಿ ತಡೆಹಿಡಿಯುವುದು ಕಾನೂನು ಉಲ್ಲಂಘನೆ ಎಂದು ಹೇಳಿದರು.ಯಾವುದೇ ಧಾರ್ಮಿಕ ಪ್ರಾರ್ಥನೆಗಳು, ನಮಾಜ್ ಅಥವಾ ಸಮೂಹ ಸಭೆಗಳು ರಸ್ತೆ, ಸರ್ಕಾರಿ ಕಚೇರಿ ಆವರಣ, ಬಸ್ ನಿಲ್ದಾಣ, ಸಾರ್ವಜನಿಕ ಉದ್ಯಾನಗಳಲ್ಲಿ ನಡೆಯದಂತೆ ನಿಷೇಧದ ಆದೇಶ ಹೊರಡಿಸಬೇಕು. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು. ಪೊಲೀಸ್ ಇಲಾಖೆಯ ‘ಸಹನೆ’ ಎಂಬ ಹೆಸರಿನಲ್ಲಿ ಸಾರ್ವಜನಿಕ ಹಕ್ಕು ಬಲಿಯಾಗಬಾರದು. ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿ, ಭವಿಷ್ಯದ ಸಾಮಾಜಿಕ ಅಶಾಂತಿಯನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಶ್ರೀರಾಮಸೇನೆ ಉಪಾಧ್ಯಕ್ಷ ಕೆ.ಕೆ. ಪುನೀತ್ ಕಾಳನಹಳ್ಳಿ, ಪ್ರಧಾನ ಕಾರ್ಯದರ್ಶಿ ಎಂ.ಜಿ. ಧರ್ಮನಾಯಕ್, ನಗರಾಧ್ಯಕ್ಷ ದರ್ಶನ ಮಹೇಶ್, ಕಾರ್ಯಾಧ್ಯಕ್ಷ ವಿನಯ್, ಗೋರಕ್ಷಕ ಅಮಿತ್ ಹಾಗೂ ಅರಕಲಗೂಡು ತಾಲೂಕು ಅಧ್ಯಕ್ಷ ಮಂಜುನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))