ಬನ್ನೇರುಘಟ್ಟ ರಸ್ತೆಯಲ್ಲಿ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎದುರಿನ ಹದಗೆಟ್ಟ ರಸ್ತೆಯ ಡಾಂಬರೀಕರಣ ಕಾರ್ಯವನ್ನು ದಕ್ಷಿಣ ನಗರ ಪಾಲಿಕೆ ಆರಂಭಿಸಿದೆ. ಅನೇಕ ತಿಂಗಳಿಂದ ಹಾಳಾಗಿದ್ದ ರಸ್ತೆಯನ್ನು ರಿಪೇರಿ ಮಾಡಲು ನಿರ್ಲಕ್ಷ್ಯ ತೋರಿದ್ದ ಅಧಿಕಾರಿಗಳ ವಿರುದ್ಧ ಅನೇಕರು ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತಪಡಿಸಿದ್ದರು
ಬೆಂಗಳೂರು : ಬನ್ನೇರುಘಟ್ಟ ರಸ್ತೆಯಲ್ಲಿ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎದುರಿನ ಹದಗೆಟ್ಟ ರಸ್ತೆಯ ಡಾಂಬರೀಕರಣ ಕಾರ್ಯವನ್ನು ದಕ್ಷಿಣ ನಗರ ಪಾಲಿಕೆ ಆರಂಭಿಸಿದೆ.
ಅನೇಕ ತಿಂಗಳಿಂದ ಹಾಳಾಗಿದ್ದ ರಸ್ತೆ
ಅನೇಕ ತಿಂಗಳಿಂದ ಹಾಳಾಗಿದ್ದ ರಸ್ತೆಯನ್ನು ರಿಪೇರಿ ಮಾಡಲು ನಿರ್ಲಕ್ಷ್ಯ ತೋರಿದ್ದ ಅಧಿಕಾರಿಗಳ ವಿರುದ್ಧ ಉದ್ಯಮಿ ಕಿರಣ್ ಮಜುಂದಾರ್ ಶಾ ಸೇರಿದಂತೆ ಅನೇಕರು ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತಪಡಿಸಿದ್ದರು. ಈ ಕುರಿತು ವರದಿಯನ್ನು ಏ.6ರಂದು ‘ಕನ್ನಡಪ್ರಭ’ ಪ್ರಕಟಿಸಿತ್ತು.
ಡಾಂಬರೀಕರಣ ಆರಂಭಿಸಲಾಗಿದೆ
ಸಾರ್ವಜನಿಕರ ದೂರುಗಳು ಹಾಗೂ ಮಾಧ್ಯಮಗಳ ವರದಿಗಳನ್ನು ಗಂಭೀರವಾಗಿ ಪರಿಗಣಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ಪ್ರಾಥಮಿಕ ಹಂತದಲ್ಲಿ ಒಂದೂವರೆ ಕಿ.ಮೀ ಉದ್ದದ ರಸ್ತೆಯ ಡಾಂಬರೀಕರಣ ಆರಂಭಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ಜಲಮಂಡಳಿಯಿಂದ ಒಳಚರಂಡಿ ಪೈಪ್ಲೈನ್ ಅಳವಡಿಕೆ ಕಾಮಗಾರಿ ನಡೆಸಿದ್ದ ಕಾರಣ ರಸ್ತೆ ತೀವ್ರವಾಗಿ ಹದಗೆಟ್ಟಿತ್ತು. ಈ ಕಾಮಗಾರಿಯಿಂದ ರಸ್ತೆಯ ಮೇಲ್ಮೈ ಹಾಳಾಗಿ ದಿನನಿತ್ಯ ಸಂಚರಿಸುವ ಸಾವಿರಾರು ವಾಹನ ಸವಾರರು ಮತ್ತು ಸ್ಥಳೀಯ ನಿವಾಸಿಗಳು ತೀವ್ರ ಧೂಳಿನ ಸಮಸ್ಯೆ ಹಾಗೂ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿತ್ತು. ಅತೀ ಹೆಚ್ಚು ಹಾನಿಗೊಳಗಾದ ಭಾಗದಲ್ಲಿ ದುರಸ್ತಿ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಬನ್ನೇರುಘಟ್ಟ ಮುಖ್ಯರಸ್ತೆಯ ಕಲ್ಯಾಣಿ ಚೌಲ್ಟ್ರಿಯಿಂದ ಆರಂಭಗೊಂಡು ಐಐಎಂಬಿ ಮೆಟ್ರೋ ನಿಲ್ದಾಣದವರೆಗಿನ ಸುಮಾರು ಒಂದು ಕಿ.ಮೀ ರಸ್ತೆಯ ಡಾಂಬರೀಕರಣದ ಕಾಮಗಾರಿ ನಡೆಸಲಾಗಿದ್ದು, ವಾಹನ ಸವಾರರಿಗೆ ಸಂಚಾರಕ್ಕೆ ಸುಗಮವಾಗಿದೆ. ಬಾಕಿ ಉಳಿದಿರುವ ರಸ್ತೆಯ ಭಾಗದ ಕಾಮಗಾರಿಯನ್ನು ಮಂಗಳವಾರ ರಾತ್ರಿಯೊಳಗೆ ಮುಗಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.