ಸಾರಾಂಶ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಂವಿಧಾನ ಬದಲಾವಣೆ ಕುರಿತಾದ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಬಂಟ್ವಾಳ ಮಂಡಲ ವತಿಯಿಂದ ಬಿಸಿರೋಡಿನ ಪ್ಲೈ ಓವರ್ ನ ಕೆಳಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಂವಿಧಾನ ಬದಲಾವಣೆ ಕುರಿತಾದ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಬಂಟ್ವಾಳ ಮಂಡಲ ವತಿಯಿಂದ ಬಿಸಿರೋಡಿನ ಪ್ಲೈ ಓವರ್ ನ ಕೆಳಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.ಈ ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿ ಹೇಳಿಕೆ ನೀಡಿರುವ ಡಿಕೆಶಿ ಪ್ರತಿಕೃತಿ ದಹನ ಮಾಡಿದ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಘೋಷಣೆ ಕೂಗಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಸದನದಲ್ಲಿ ಉದ್ದೇಶಪೂರ್ವಕವಾಗಿ ಬಿಜೆಪಿಯ 18 ಶಾಸಕರನ್ನು ಸಸ್ಪೆಂಡ್ ಮಾಡಿದ್ದಾರೆ. 6 ತಿಂಗಳ ಕಾಲ ಸಸ್ಪೆಂಡ್ ಮಾಡಿರುವುದು ಇತಿಹಾಸದಲ್ಲಿಯೇ ಇಲ್ಲ, ಇದೇ ಮೊದಲ ಬಾರಿಗೆ ಬಹಳ ದೊಡ್ಡ ತಪ್ಪು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮಾಡಿದ್ದಾರೆ ಎಂದು ಹೇಳಿದರು.ಹನಿಟ್ರ್ಯಾಪ್ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿಗೆ ಸದನ ಕಾರಣವಾಗಿದ್ದ ಬಿಸಿಬಿಸಿ ವಾತಾವರಣದ ನಡುವೆ ಸಂವಿಧಾನ ವಿರೋಧಿ ಬಿಲ್ ಪಾಸ್ ಮಾಡಲು ಕಾಂಗ್ರೆಸ್ ಮುಂದಾಗಿದ್ದ ವೇಳೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅ ಸಮಯದಲ್ಲಿ ಶಾಸಕರ ಅಮಾನತು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿರಾಗಾಂಧಿ ವಂಶದಿಂದ ಬಂದ ಡಿಕೆಶಿ ಅವರು ಸಂವಿಧಾನವನ್ನು ಬದಲು ಮಾಡಿಯಾದರೂ ಮುಸ್ಲಿಂ ಸಮುದಾಯದ ಓಲೈಕೆಗೆ ಮುಂದಾಗಿರುವುದು ನಾಚಿಕೆಯ ವಿಚಾರ ಎಂದರು.ಬಿಜೆಪಿ ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ಹರಿಕೃಷ್ಣ ಬಂಟ್ವಾಳ, ಸುದರ್ಶನ ಬಜ, ಶಿವಪ್ರಸಾದ್ ಶೆಟ್ಟಿ, ಕಮಲಾಕ್ಷಿ ಪೂಜಾರಿ, ಪ್ರಭಾಕರ ಪ್ರಭು, ದಿನೇಶ್ ಅಮ್ಟೂರು,ದೇವಪ್ಪ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು, ದಿನೇಶ್ ಭಂಡಾರಿ ಹಾಗೂ ಮಂಡಲದ ಪ್ರಮುಖರು ಮತ್ತು ಕಾರ್ಯಕರ್ತರು ಇದ್ದರು.