ಪವರ್ ಪ್ಲಾಂಟ್ ನಿರ್ಮಾಣಕ್ಕಾಗಿ ಕಾವೇರಿ ನದಿಗೆ ತಡೆಗೋಡೆ..!

| Published : Jul 04 2024, 01:06 AM IST

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಮಜ್ಜಿಗೆಪುರ ಗ್ರಾಮದ ಬಳಿಯ ಸೇತುಕಟ್ಟೆ ಬಳಿ ವ್ಯಕ್ತಿಯೊಬ್ಬರು ಯಾವುದೇ ಗಡಿ ಗುರುತು ಮಾಡದೆ ಅಕ್ರಮವಾಗಿ ನದಿ ಮತ್ತು ರಸ್ತೆ ತಡೆಗೋಡೆ ನಿರ್ಮಿಸುತ್ತಿರುವ ಬಗ್ಗೆ ತಹಸೀಲ್ದಾರ್ ಮತ್ತು ಕಾ.ನೀ.ನಿಗಮದ ಅಧಿಕಾರಿಗಳು ಮಾಹಿತಿ ಇದ್ದರೂ ಕ್ರಮ ತೆಗೆದುಕೊಳ್ಳಲು ನಿರ್ಲಕ್ಷ ತೋರುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಅಣೆಕಟ್ಟೆ ಸಮೀಪದ ಎಡಮುರಿ ಪ್ರವಾಸಿ ತಾಣ, ಕಾವೇರಿ ನದಿಯಲ್ಲಿ ವ್ಯಕ್ತಿಯೊಬ್ಬ ಅಕ್ರಮವಾಗಿ ಯಾವುದೇ ಗಡಿ ಗುರುತಿಸದೆ ಪವರ್ ಪ್ಲಾಂಟ್ ನಿರ್ಮಿಸಲು ತಡೆಗೋಡೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ಮಜ್ಜಿಗೆಪುರ, ಬೆಳಗೊಳ, ಕೆ.ಆರ್.ಸಾಗರ, ಹೊಂಗಳ್ಳಿ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ತಾಲೂಕಿನ ಮಜ್ಜಿಗೆಪುರ ಗ್ರಾಮದ ಬಳಿಯ ಸೇತುಕಟ್ಟೆ ಬಳಿ ವ್ಯಕ್ತಿಯೊಬ್ಬರು ಯಾವುದೇ ಗಡಿ ಗುರುತು ಮಾಡದೆ ಅಕ್ರಮವಾಗಿ ನದಿ ಮತ್ತು ರಸ್ತೆ ತಡೆಗೋಡೆ ನಿರ್ಮಿಸುತ್ತಿರುವ ಬಗ್ಗೆ ತಹಸೀಲ್ದಾರ್ ಮತ್ತು ಕಾ.ನೀ.ನಿಗಮದ ಅಧಿಕಾರಿಗಳು ಮಾಹಿತಿ ಇದ್ದರೂ ಕ್ರಮ ತೆಗೆದುಕೊಳ್ಳಲು ನಿರ್ಲಕ್ಷ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಡಮುರಿ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿ ನೂರಾರು ವರ್ಷಗಳ ಇತಿಹಾಸವಿದೆ. ಅನೇಕ ಪ್ರಭೇದದ ಪ್ರಾಣಿ-ಪಕ್ಷಿಗಳ ಸಂತತಿ ಇದ್ದು, ಏಕೋ ಜೋನ್ ಎಂದು ಘೋಷಣೆಯಾಗಿದೆ. ಅಲ್ಲದೇ, ಇದೇ ಸ್ಥಳದಲ್ಲಿ ಸುತ್ತಮುತ್ತಲಿನ ಗ್ರಾಮದವರು ತಮ್ಮ ಊರ ಹಬ್ಬಕ್ಕೆ ಇದೇ ಜಾಗದಲ್ಲಿ ಪೂಜೆ ಸಲ್ಲಿಸಿ ಈನೀರನ್ನು ತೆಗೆದುಕೊಂಡು ಹೋಗುತ್ತಾರೆ. ಈ ಪ್ರದೇಶದ ಸುತ್ತಮುತ್ತಲಿನ ಜಮೀನು ಕೆಲಸಕ್ಕೆ ಬರುವ ಜನರು ಹಾಗೂ ರೈತರು ತಮ್ಮ ಜಾನುವಾರುಗಳಿಗೆ ಈ ಸ್ಥಳದಲ್ಲೇ ನೀರು ಕುಡಿಸುತ್ತಾರೆ. ಈ ಸ್ಥಳ ಬಿಟ್ಟು ಸ್ವಲ್ಪ ದೂರದಲ್ಲಿ ಪವರ್ ಪ್ಲಾಂಟ್ ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಏಕಾಏಕಿ ತಡೆಗೋಡೆ ನೀರ್ಮಾಣ ಮಾಡಲು ಮುಂದಾಗಿರುವುದು ಸರಿಯಲ್ಲ. ಅವೈಜ್ಞಾನಿಕವಾಗಿ ನದಿಯಲ್ಲಿ ಕೆಲಸ ಮಾಡುತ್ತಿರುವುದನ್ನು ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಬೇಕು. ಜೊತೆಗೆ ಪವರ್ ಪ್ಲಾಂಟ್ ಸ್ಥಳಾಂತರ ಮಾಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬೆಳಗೊಳ ಗ್ರಾಪಂ ಅಧ್ಯಕ್ಷ ಬಿ.ವಿ.ಸುರೇಶ್ ಒತ್ತಾಯಿಸಿದರು.

ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿ ಕಾ.ನೀ.ನಿಗಮದ ಸಹಾಯಕ ಅಭಿಯಂತರ ಸುರೇಶ್ ಕುಮಾರ್ ತರಾಟೆ ತೆಗೆದುಕೊಂಡ ಗ್ರಾಮಸ್ಥರು, ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ತಡೆಗೋಡೆ ನಿರ್ಮಿಸುತ್ತಿದ್ದರೂ ಸುಮ್ಮನಿರಲು ಕಾರಣವೇನು?, ಯಾರ ಪ್ರಭಾವಕ್ಕೆ ಒಳಾಗಾಗಿದ್ದರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ನಂತರ ಸಹಾಯಕ ಅಭಿಯಂತರ ಸುರೇಶ್ ಕುಮಾರ್ ಮಾತನಾಡಿ, ಅವೈಜ್ಙಾನಿಕ ಕಾಮಗಾರಿ ಬಗ್ಗೆ ನೀವು ನೀಡಿರುವ ಮನವಿಯನ್ನು ಹಾಗೂ ನಾನು ಪರಿಶೀಲನೆ ನಡೆಸಿದ ವರದಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.

ಪ್ರತಿಭಟನೆಯಲ್ಲಿ ಬೆಳಗೊಳ ತಾಪಂ ಮಾಜಿ ಸದಸ್ಯ ಬಿ.ಟಿ.ಸ್ವಾಮಿಗೌಡ, ಬೆಳಗೊಳ ಗ್ರಾಪಂ ಸದಸ್ಯ ಪುಟ್ಟರಾಜು, ಗ್ರಾಪಂ ಮಾಜಿ ಸದಸ್ಯ ಮಂಜನಾಥ್, ಭಾರ್ಗವ, ಪುಟ್ಟೇಗೌಡ, ರಾಮೇಗೌಡ, ಶಿವೇಗೌಡ, ಎಂ.ಬಿ.ಚಂದ್ರು, ಎಂ.ಸಿ.ಚಂದ್ರ, ಶ್ರೀನಿವಾಸ್, ಕೆ.ಆರ್.ಎಸ್ ಗ್ರಾ.ಪಂ ಸದಸ್ಯ ರವಿಕುಮಾರ್, ಹೊಸ ಉಂಡವಾಡಿ ಸಂಜು ಸೇರಿದಂತೆ ಮಜ್ಜಿಗೆಪುರ, ಬೆಳಗೊಳ, ಕೆ.ಆರ್.ಸಾಗರ, ಹೊಂಗಳ್ಳಿ ಗ್ರಾಮಗಳ ಗ್ರಾಮಸ್ಥರು ಇದ್ದರು.