ಕನ್ನಡಪ್ರಭ ವಾರ್ತೆ ತಾಳಿಕೋಟೆ
ದೇವರಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಡಗಾನೂರಿನಿಂದ ಇಂಗಳಗಿಗೆ ಸಂಪರ್ಕಿಸುವ ೨೦-೩೦ ವರ್ಷದ ಹಳೆಯದಾದ ಮುಳ್ಳು-ಕಂಠಿಗಳಿಂದ ಸಂಪೂರ್ಣ ಮುಚ್ಚಿಹೋಗಿದ್ದ ರಸ್ತೆಯನ್ನು ರೈತರ ಮನವಿಯ ಮೇರೆಗೆ ಬಿಜೆಪಿ ನಾಯಕ ಬಸನಗೌಡ ಪಾಟೀಲ (ಯಡಿಯಾಪೂರ) ಅವರು ಮುಳ್ಳುಕಂಠಿ ಕಡಿಸುವುದರೊಂದಿಗೆ ಗರಸು ಮಣ್ಣು ಹಾಕಿಸಿ ರಸ್ತೆ ದುರಸ್ತಿ ಮಾಡಿಸಿದ್ದಾರೆ.ಈ ರಸ್ತೆಯಲ್ಲಿ ಮುಳ್ಳು ಕಂಠಿ-ತಗ್ಗು ದಿನ್ನೆಗಳು ತುಂಬಿಕೊಂಡ ಪರಿಣಾಮವಾಗಿ ವಾಹನಗಳ ಸಂಚಾರ, ಕಾಲ್ನಡಿಗೆಯಲ್ಲಿಯೂ ತೆರಳುವುದು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರತಿನಿತ್ಯ ಈ ರಸ್ತೆಯ ಮೂಲಕ ಜಮೀನುಗಳಿಗೆ ತೆರಳುವ ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು.
ಈ ಸಮಸ್ಯೆ ಕುರಿತು ಅಲ್ಲಿನ ರೈತರು ಬಿಜೆಪಿ ಮುಖಂಡ ಬಸನಗೌಡ ಪಾಟೀಲ(ಯಡಿಯಾಪೂರ) ಅವರ ಗಮನಕ್ಕೆ ತರಲಾಗಿತ್ತು. ಈ ಮನವಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಬಸನಗೌಡ ಪಾಟೀಲ ಯಡಿಯಾಪೂರ ಅವರು ರಸ್ತೆಯ ದುಃಸ್ಥಿತಿ ಪರಿಶೀಲಿಸಿ ವಿಳಂಬ ಮಾಡದೇ ಸ್ವಂತ ಖರ್ಚಿನಲ್ಲಿ ಸುಮಾರು ೧.೫೦ ಕಿ.ಮೀ. ರಸ್ತೆಯನ್ನು ಜೆಸಿಬಿ ಯಂತ್ರದ ಮೂಲಕ ಸ್ವಚ್ಛಗೊಳಿಸಿ, ಮಣ್ಣು, ಕಲ್ಲು ಹಾಗೂ ಗರಸು ಹಾಕಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.ಈ ಕಾರ್ಯ ಶ್ಲಾಘಿಸಿದ ರೈತರಾದ ಬಸಂತರಾಯ ಕೊಣ್ಣೂರ, ಶಿವಾನಂದ ಕೊಣ್ಣೂರ, ಮಲ್ಲಣ್ಣ ಕೊಣ್ಣೂರ, ಸಿದ್ದು ಹುಗ್ಗಿ, ಮಾತಾಬಸಾಬ ಮುಜಾವರ, ಸಿದ್ದನಗೌಡ ಕೊಣ್ಣೂರ, ಸುರೇಶ್ ಕೊಣ್ಣೂರ, ಶ್ರೀಶೈಲ ಕೊಣ್ಣೂರ, ರಾಮನಗೌಡ ಕೊಣ್ಣೂರ, ಶಂಕರಗೌಡ ಕೊಣ್ಣೂರ, ಭೀಮನಗೌಡ ಕೊಣ್ಣೂರ ಸೇರಿ ಸುತ್ತಮುತ್ತಲಿನ ರೈತರು ಬಸನಗೌಡ ಪಾಟೀಲ(ಯಡಿಯಾಪೂರ) ಅವರನ್ನು ಸನ್ಮಾನಿಸಿ ಗೌರವಿಸಿದರು.
ಪಡಗಾನೂರಿನಿಂದ ಇಂಗಳಗಿಗೆ ಸಂಪರ್ಕಿಸುವ ೨೦-೩೦ ವರ್ಷದ ಹಳೆಯ ರಸ್ತೆಯು ಮುಳ್ಳು ಕಂಠಿಗಳಿಂದ ಹಾಗೂ ತಗ್ಗು-ದಿನ್ನೆಗಳಿಂದ ರೈತಾಪಿ ಜನರಿಗೆ ಸಂಚರಿಸುವುದೇ ದುಸ್ತರವೆಂಬಂತಾಗಿತ್ತು. ಈ ರಸ್ತೆಯ ದುರಸ್ತಿಗೊಳಿಸಿಕೊಡುವ ಬಗ್ಗೆ ರೈತರು ಮನವಿ ಮಾಡಿದ ಹಿನ್ನೆಲೆ ಸ್ಥಳಕ್ಕೆ ಭೇಟಿನೀಡಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಿದ್ದೇನೆ. ನಾನೂ ಕೂಡ ರೈತನಾಗಿದ್ದು, ಅವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ನನ್ನದಾಗಿದೆ. ಅವರ ಆಶಿರ್ವಾದವೇ ನನಗೆ ಶ್ರೀರಕ್ಷೆಯಾಗಲಿದೆ.
- ಬಸನಗೌಡ. ಎಸ್. ಪಾಟೀಲ(ಯಡಿಯಾಪುರ) ಬಿಜೆಪಿ ಮುಖಂಡರು ದೇವರ ಹಿಪ್ಪರಗಿಕ್ಷೇತ್ರ