ಸಾರಾಂಶ
ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿಲ್ಲ. ಅವರು ತಮಗೆ ಆದ ಅನ್ಯಾಯದ ಬಗ್ಗೆ ಮಾತಾಡಿರುವುದರಲ್ಲಿ ತಪ್ಪೇನಿದೆ? ಎಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಗಂಗಾವತಿ: ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿಲ್ಲ. ಅವರು ತಮಗೆ ಆದ ಅನ್ಯಾಯದ ಬಗ್ಗೆ ಮಾತಾಡಿರುವುದರಲ್ಲಿ ತಪ್ಪೇನಿದೆ? ಎಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಪ್ರಶ್ನಿಸಿದ್ದಾರೆ.ನಗರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯತ್ನಾಳ ನಿಷ್ಠುರವಾಗಿ ಮಾತನಾಡುವ ಛಲಗಾರ. ಹಾಗಾಗಿ ಬಿಜೆಪಿ ನಾಯಕರ ಬಗ್ಗೆ ಟೀಕಿಸುತ್ತಾರೆ ಎಂದರು.
ಯತ್ನಾಳ ಬೆನ್ನಿಗೆ ಪಂಚಮಸಾಲಿ ಸಮಾಜದ ಶಕ್ತಿ ಇದೆ ಎನ್ನುವುದು ಬಿಜೆಪಿಗೆ ಮನವರಿಕೆಯಾಗಿದೆ. ವರಿಷ್ಠರು ಯತ್ನಾಳ ಅವರನ್ನು ಕರೆದು ಮಾತನಾಡಬೇಕು ಎಂದರು.ಕಾಂತರಾಜ ವರದಿ ಬಗ್ಗೆ ಸುತ್ತೂರುಮಠ ಸ್ವಾಮೀಜಿ ಒಪ್ಪಿಲ್ಲ. ಸ್ವಾಮೀಜಿಗಳ ನಿರ್ಣಯಕ್ಕೆ ತಾವು ಸಂಪೂರ್ಣ ಬೆಂಬಲಿಸುತ್ತೇವೆ. ಲಿಂಗಾಯತರು ಮೂಲಧರ್ಮ ಮರೆಯಬಾರದು. ಪ್ರಮಾಣಪತ್ರಗಳಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಬೇಕೆಂದರು.
ದಾವಣಗೆರೆಯಲ್ಲಿ ಜರುಗಿದ ವೀರಶೈವ ಲಿಂಗಾಯತ ಮಹಾಸಭೆ ಬಗ್ಗೆ ನಮಗೆ ಗೊತ್ತಿಲ್ಲ. ಇದರ ಅಧ್ಯಕ್ಷರು ಯಾರು ಎನ್ನುವುದೂ ಗೊತ್ತಿಲ್ಲ ಎಂದರು. ಪ್ರತಿ ದಿನ ಎಲ್ಲೊ ಒಂದೊಂದು ಸಭೆ ನಡೆಯುತ್ತಿರುತ್ತವೆ, ಅದೇ ರೀತಿ ಯಾವುದೋ ಸಭೆ ನಡೆದಿರಬಹುದೆಂದರು.ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದೆ. ತಾವು ಹೋಗುವುದಾಗಿ ತಿಳಿಸಿದರು.
ಮಾಜಿ ಸಂಸದ ಶಿವರಾಮಗೌಡ, ಮಹಾಲಿಂಗಪ್ಪ ಬನ್ನಿಕೊಪ್ಪ, ಕಳಕನಗೌಡ, ನಾಗರಾಜ ಬರಗೂರ, ರಾಚಪ್ಪ ಗುಂಜಳ್ಳಿ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಮೇಗೂರು ರಾಘವೇಂದ್ರ, ನಾರಾಯಣರಾವ ಎಸ್.ಬಿ.ಎಚ್., ಅಳವಂಡಿಕರ್, ನಿಜಲಿಂಗಪ್ಪ ಮೆಣಸಗಿ, ಎ.ಕೆ. ಮಹೇಶಕುಮಾರ, ಒ.ಎಂ. ಬೆಳ್ಳುಳ್ಳಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.