ಜಾತಿ ವ್ಯವಸ್ಥೆ ಜಾರಿಗೆ ತಂದವರನ್ನು ಬಸವಣ್ಣ 900 ವರ್ಷಗಳ ಹಿಂದೆಯೇ ಪ್ರಶ್ನಿಸಿ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.
ಹೂವಿನಹಡಗಲಿ: ವೇದ, ಶಾಸ್ತ್ರ, ಪುರಾಣಗಳ ಮೂಲಕ ದೇವರು, ದೇಗುಲ ನಿರ್ಮಿಸಿ, ಜಾತಿ ವ್ಯವಸ್ಥೆ ಜಾರಿಗೆ ತಂದವರನ್ನು ಬಸವಣ್ಣ 900 ವರ್ಷಗಳ ಹಿಂದೆಯೇ ಪ್ರಶ್ನಿಸಿ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಅವರು ಎಲ್ಲಿಯೂ ನಾನು ಲಿಂಗಾಯತ ಧರ್ಮದವನು ಎಂದು ಹೇಳಿಕೊಂಡಿಲ್ಲ ಎಂದು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ.ಚಿನ್ನಸ್ವಾಮಿ ಸೋಸಲೆ ಹೇಳಿದರು.ಇಲ್ಲಿನ ಜಿಬಿಆರ್ ಕಾಲೇಜಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಶ್ನೆ ಮಾಡುವ ನಾಯಕರು ಇತಿಹಾಸ ಪುಟ ಸೇರಿಲ್ಲ. 12ನೇ ಶತಮಾನದಲ್ಲಿ ಅನುಭವ ಮಂಟಪ ರಚಿಸಿದ ಬಸವಣ್ಣ ಸೇರಿದಂತೆ ಎಲ್ಲ ಶಿವ ಶರಣರು ಸೇರಿಕೊಂಡು, ಜಾತಿ ವ್ಯವಸ್ಥೆಯಲ್ಲಿ ಅವೈಜ್ಞಾನಿಕ ಸಂಪ್ರದಾಯಗಳ ವಿರುದ್ಧ ಚಳವಳಿ ಮಾಡಿದ್ದಾರೆ. ದೈಹಿಕ ಅಸ್ಪೃಶ್ಯತೆ ಮತ್ತು ಮಾನಸಿಕ ಅಸ್ಪೃಶ್ಯತೆಗೆ ವ್ಯತ್ಯಾಸವಿದ್ದು, ಬಸವ, ಬುದ್ಧ, ಅಂಬೇಡ್ಕರ್ ಅವರ ಸ್ಥಾವರ ಪೂಜಿಸುತ್ತೇವೆ. ಬಸವಣ್ಣ ಕಾಯಕ ತತ್ವ ಮತ್ತು ದಾಸೋಹಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಬಸವ ತತ್ವ, ಸಾಂಸ್ಕೃತಿಕತೆ, ಸಮಾನತೆಯನ್ನು ನಾವು ಮೊದಲು ಅರಿಯುವ ಅನಿವಾರ್ಯವಿದೆ. ಧರ್ಮ ಎಂದಿಗೂ ಸೋತಿಲ್ಲ. ಜಾತಿ ವ್ಯವಸ್ಥೆ ಹೆಚ್ಚು ಮಾತನಾಡುತ್ತಿದೆ ಎಂದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ, ಜಿಲ್ಲಾ ಉಪಾಧ್ಯಕ್ಷ ಪಿ.ವಿಜಯಕುಮಾರ್, ಯುವ ಜನಾಂಗ ಬಸವಣ್ಣನವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಪ್ರಾಚಾರ್ಯ ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮಾನಿಹಳ್ಳಿ ಬಸವರಾಜ, ಕಾರ್ಯದರ್ಶಿ ಅಕ್ಕಿ ಮಲ್ಲಿಕಾರ್ಜುನ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಡಾ.ಸತೀಶ್ ರೆಡ್ಡಿ, ಕೋಡಿಹಳ್ಳಿ ಮುದುಕಪ್ಪ, ಐಗೋಳ್ ಸುಭಾಶ್ಚಂದ್ರ, ಎಂ.ಮಲ್ಲಿಕಾರ್ಜುನ, ಮುಂಡವಾಡ ಉಮೇಶ್, ಕೆ.ಎಂ. ಉದಾಸಿ, ರಮೇಶ್, ಹಾಲೇಶ್ ಇದ್ದರು.