ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದಲ್ಲಿನ ವಡ್ಡಿನ ಕೆರೆ ಸಮೀಪದ ಜಾಗದಲ್ಲಿ ಕನಕ ಗುರುಭವನ ಹಾಗೂ ಕಾಗಿನೆಲೆ ಗುರುಪೀಠದವತಿಯಿಂದ ಶಿಕ್ಷಣ ಸಂಸ್ಥೆ ನಿರ್ಮಿಸಲು ಕೆಲವಾರು ವರ್ಷಗಳ ಹಿಂದೆಯೇ ಮನವಿ ಸಲ್ಲಿಸಿ ಪುರಸಭೆ ಸಭೆಯಲ್ಲಿ ಕೂಡ ಅನುಮೋದನೆಯಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಇದೇ ಜಾಗದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಶಾಸಕ ಡಿ.ಜಿ.ಶಾಂತನಗೌಡ ಪುತ್ರ ಡಿ.ಎಸ್.ಸುರೇಂದ್ರಗೌಡ ಬಸವಣ್ಣನ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿರುವುದು ಸರಿಯಲ್ಲ ಎಂದು ಕುರುಬ ಸಮಾಜದ ಅವಳಿ ತಾಲೂಕುಗಳ ಅಧ್ಯಕ್ಷ ಎಂ.ಸಿ.ಮೋಹನ್ ಹೇಳಿದರು.ತಾಲೂಕಿನಲ್ಲಿ ಬಯಲು ಸೀಮೆ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ತಾಲೂಕು ಕುರುಬ ಸಮಾಜದ ಕಾರ್ಯಾಧ್ಯಕ್ಷ ಧರ್ಮಪ್ಪ ನೇತೃತ್ವದಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ವಡ್ಡಿನಕೆರೆ ಹಳ್ಳಿದ ಪಕ್ಕದಲ್ಲಿರುವ ಸುಮಾರು 38 ಗುಂಟೆ ಜಾಗ ಉದ್ಯಾನಕ್ಕೆ ಕಾಯ್ದಿರಿಸಿದ್ದು ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಸಿ.ಎ. ಸೈಟ್ನಲ್ಲಿ ಕನಕಭವನ, ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಕನಕ ಗುರುಪೀಠದ ಹೆಸರಿಗೆ ಮಂಜೂರು ಮಾಡುವಂತೆ, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಅನುಮೋದನೆ ನೀಡಲು ಸರ್ಕಾರದ ಸದನ ಸಮಿತಿಗೆ ಪ್ರಸ್ತಾವನೆ ಸಲ್ಲಿಸಲು ಪುರಸಭೆ ಅಂದಿನ ಆಡಳಿತಾಧಿಕಾರಿ 2024ರ ಫೆಬ್ರವರಿ 16ರಂದೇ ಸಭಾ ನಡಾವಳಿ ಮಾಡಿದ್ದರು ಎಂದು ತಿಳಿಸಿದರುಆದರೆ ಇದೀಗ ಅದೇ ಜಾಗದಲ್ಲಿ ಏಕಾಎಕಿಯಾಗಿ ಹಾಲಿ ಶಾಸಕರ ಪುತ್ರರೊಂದಿಗೆ ಸೇರಿ ಬಸವಣ್ಣನವರ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿರುವುದರ ಉದ್ದೇಶವೇನು? ಎಂದು ಪ್ರಶ್ನಿಸಿದರು
2022ರಲ್ಲಿ ಪಟ್ಟಣದಲ್ಲಿ ಜರುಗಿದ ಕನಕಜಯಂತಿ ಕಾರ್ಯಕ್ರಮದಲ್ಲಿ.ಭಾಗವಹಿಸಿದ್ದ ಅಂದಿನ ಸಚಿವ ಎಂ.ಟಿ.ಬಿ.ನಾಗರಾಜ್ ಕನಕಭವನಕ್ಕೆ 25 ಲಕ್ಷ ರು. ದೇಣಿಗೆ ನೀಡುವುದಾಗಿ ಹೇಳಿದ್ದರು, ಕನಕ ಭವನದ ವಿಷಯ. ಸರ್ಕಾರದ ಹಂತದಲ್ಲಿದ್ದರೂ ಕೂಡ ಮಾಜಿ ಸಚಿವ ರೇಣುಕಾಚಾರ್ಯ, ಶಾಸಕರ ಪುತ್ರ ಸುರೇಂದ್ರಗೌಡ ಬಸವಣ್ಣನ ಪುತ್ಥಳಿ ನಿರ್ಮಾಣಕ್ಕೆ ಇದೇ ಜಾಗ ಬಳಸಿಕೊಂಡಿರುವ ಉದ್ದೇಶವೇನು ಎಂದರು.
ಬಯಲುಸೀಮೆ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಈ ಹಿಂದೆ ಶಾಸಕ ಡಿ.ಜಿ.ಶಾಂತನಗೌಡರೇ ಪ್ರಸ್ತಾಪಿಸಿರುವಂತೆ ಗೊಲ್ಲರಹಳ್ಳಿ ವೃತ್ತ ಅಥವಾ, ತಾಲೂಕು ಕಚೇರಿ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪ ಬಸವಣ್ಣನ ಪುತ್ಥಳಿ ನಿರ್ಮಿಸಲಿ ಇದಕ್ಕೆ ನಾವೂ ಕೂಡ ಕೈ ಜೋಡಿಸುತ್ತೇವೆ ಎಂದರು.
ನಿವೇಶನ ಪಡೆಯುವ ಪಡೆಯುವ ಪ್ರಕ್ರಿಯೇ ಇನ್ನೂ ಪ್ರಗತಿಯಲ್ಲಿದೆ. ಇದೆಲ್ಲಾ ತಿಳಿದಿದ್ದರೂ ಶಾಸಕ ಡಿ.ಜಿ.ಶಾಂತನಗೌಡರು ಈ ವಿಚಾರದಲ್ಲಿ ಮೌನವಹಿಸಿರುವುದು ಸರಿಯಲ್ಲ ಎಂದರು.ಸಮಾಜದ ಕಾರ್ಯಾಧ್ಯಕ್ಷ ಆರುಂಡಿ ಪ್ರಕಾಶ್, ಉಪಾಧ್ಯಕ್ಷ ಕೆ.ಪುಟ್ಟಪ್ಪ,ಬೆನಕಪ್ಪ,ಮೂಲಿ ರೇವಣಸಿದ್ದಪ್ಪ, ಖಜಾಂಚಿ ನರಸಿಂಹಪ್ಪ,ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ, ಗ್ಯಾರಂಟಿ ಸಮಿತಿ ಸದಸ್ಯ ಮಂಜುನಾಥ ಮಾಳಕ್ಕಿ,ಅಶೋಕ್, ಸತ್ತಿಗೆ ರಾಜಪ್ಪ,ಎಚ್.ಬಿ.ಅಣ್ಣಪ್ಪ ಇತರರು ಇದ್ದರು.