ಸಾರಾಂಶ
ಪಂಚಮಸಾಲಿ ಸಮಾಜದ ನಾಯಕ ಬಸವರಾಜ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿ ಉಚ್ಛಾಟನೆ ಮಾಡಿರುವುದು ಸರಿಯಲ್ಲ. ಬಿಜೆಪಿಯ ಈ ನಿಲುವನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಸಮಾಜಕ್ಕೆ ಕರೆ ನೀಡಲಾಗುವುದು ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಖಂಡಿಸಿದರು.
ಧಾರವಾಡ: ಪಂಚಮಸಾಲಿ ಸಮಾಜದ ನಾಯಕ ಬಸವರಾಜ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿ ಉಚ್ಛಾಟನೆ ಮಾಡಿರುವುದು ಸರಿಯಲ್ಲ. ಬಿಜೆಪಿಯ ಈ ನಿಲುವನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಸಮಾಜಕ್ಕೆ ಕರೆ ನೀಡಲಾಗುವುದು ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಖಂಡಿಸಿದರು.
ಬುಧವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಯತ್ನಾಳ ಉತ್ತರ ಕರ್ನಾಟಕದ ಹುಲಿ. ಯತ್ನಾಳ್ ಬಿಜೆಪಿ ಬಗ್ಗೆ ತಪ್ಪು ಹೇಳಿಕೆ ಕೊಟ್ಟಿಲ್ಲ. ಪಕ್ಷದ ವಿರುದ್ಧವೂ ನಡೆದುಕೊಂಡಿಲ್ಲ. ಅವರ ಉಚ್ಛಾಟನೆ ಸಲ್ಲ ಎಂದರು.ಬಸವರಾಜ ಯತ್ನಾಳ್ ಅವರ ಉಚ್ಛಾಟನೆ ಅವರ ಬೆಳವಣಿಗೆ ಕುಗ್ಗಿಸಲಿದೆ. ಕುಟುಂಬ ರಾಜಕಾರಣ ಪ್ರಸ್ತಾಪಿಸುವ ಬಿಜೆಪಿ, ಅದೇ ಪಕ್ಷದ ಭ್ರಷ್ಟರ ವಿರುದ್ಧ, ಕುಟುಂಬದ ರಾಜಕಾರಣದ ವಿರುದ್ಧ ಸಾಪ್ಟ ಕಾರ್ನರ್ ಏಕೆ ಎಂದು ಪ್ರಶ್ನಿಸಿದರು.
ಯತ್ನಾಳ್ ಅವರು ಇನ್ನೂ ಮೂರು ವರ್ಷ ಪಕ್ಷೇತರ ಶಾಸಕರಾಗಿರಲಿದ್ದು, ಬಿಜೆಪಿ ದುಷ್ಟಶಕ್ತಿ ಅವರನ್ನು ಉಚ್ಚಾಟಿಸುವಂತೆ ಮಾಡಿವೆ. ಇದು ಬಿಜೆಪಿಯ ಮೂರ್ಖತನದ ಪರಮಾವಧಿ. ಉಚ್ಛಾಟನೆ ಆದೇಶ ಹಿಂಪಡೆಯಬೇಕು ಎಂದು ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಆಗ್ರಹಿಸಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಲಿಲ್ಲ. ಹೀಗಾಗಿ, ಇದರ ವಿರುದ್ಧ ಹೋರಾಟಕ್ಕಿಳಿದ ಬಸವರಾಜ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ 66 ಸ್ಥಾನ ಗೆದ್ದಿದೆ. ಭವಿಷ್ಯದಲ್ಲಿ 33 ಸ್ಥಾನಗಳು ಗೆಲ್ಲಲು ಹೆಣಗಾಡುವ ಸ್ಥಿತಿ ಬರಲಿದೆ. ಪಂಚಮಸಾಲಿ ಸಮಾಜ ಯತ್ನಾಳ್ ಅವರ ಪರ ಇರಲಿದೆ ಎಂದರು.ಯತ್ನಾಳ ಉಚ್ಚಾಟನೆ ದುಃಖವಾಗ್ತಿದೆ: ಬೆಲ್ಲದಹುಬ್ಬಳ್ಳಿ:
ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದು ದುಃಖವನ್ನುಂಟು ಮಾಡಿದೆ. ಆದರೆ ಪಕ್ಷದ ನಿರ್ಧಾರವನ್ನು ವಿಶ್ಲೇಷಣೆ ಮಾಡುವಷ್ಟು ದೊಡ್ಡವನು ನಾನಲ್ಲ. ಮುಂದೆ ಎಲ್ಲವೂ ಸರಿಹೋಗುತ್ತದೆ ಎಂದು ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ಒಬ್ಬ ಹಿರಿಯ ಹಾಗೂ ಜನಪ್ರಿಯ ನಾಯಕರು. ಅನೇಕ ಹುದ್ದೆ ಅಲಂಕರಿಸಿದವರು. ನೇರ ನಡೆ, ನೇರ ನುಡಿಯಿಂದ ಪ್ರಸಿದ್ಧಿ ಪಡೆದ ವ್ಯಕ್ತಿ. ಇಂದು ಅವರು ಪಕ್ಷದಿಂದ ದೂರವಾಗಿರುವುದು ಬಹಳ ದುಃಖವಾಗಿದೆ. ಸಾಕಷ್ಟು ನೋವನ್ನುಂಟು ಮಾಡಿದೆ. ಪಕ್ಷದ ಯಾವುದೇ ಕಾರ್ಯಕರ್ತ ಪಕ್ಷದಿಂದ ದೂರ ಹೋದಾಗ ನೋವುಂಟಾಗುತ್ತದೆ. ಹೈಕಮಾಂಡ್ ಈ ಕುರಿತು ನಿರ್ಧಾರ ತೆಗೆದುಕೊಂಡಿದೆ. ಮುಂಬರುವ ದಿನಗಳಲ್ಲಿ ಪಕ್ಷದಲ್ಲಿ ಎಲ್ಲವೂ ಸರಿಯಾಗುವ ಭರವಸೆ ಇದೆ ಎಂದು ಬೆಲ್ಲದ ಆಶಾಭಾವನೆ ವ್ಯಕ್ತಪಡಿಸಿದರು.