ಕನಕಗಿರಿ: ಸಮಾಜದಲ್ಲಿ ಬೇರೂರಿದ್ದ ಕೀಳರಿಮೆ, ಮೌಢ್ಯ, ಜಾತಿ ಬೇಧ ಸೇರಿದಂತೆ ನಾನಾ ಪಿಡುಗುಗಳ ನಿರ್ನಾಮಕ್ಕೆ ಪಣತೊಟ್ಟು ಕ್ರಾಂತಿಕಾರಿಯಾಗಿ ಕಾಯಕ ಮಾಡಿದ ಜಗಜ್ಯೋತಿ ಬಸವೇಶ್ವರರ ಕೊಡುಗೆ ಅವಿಸ್ಮರಣೀಯ ಎಂದು ತಹಸೀಲ್ದಾರ್‌ ವಿಶ್ವನಾಥ ಮುರುಡಿ ಹೇಳಿದರು. ಸೋಮವಾರ ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯುತ್ಸವದ ನಿಮಿತ್ತ ಕೊಪ್ಪಳ ರಸ್ತೆಯಲ್ಲಿರುವ ಬಸವೇಶ್ವರರ ವೃತ್ತಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ವಿಶ್ವ ಸಾಂಸ್ಕೃತಿಕ ನಾಯಕ, ಕ್ರಾಂತಿಕಾರಿ ಸಮಾಜ ಸುಧಾರಕ ಬಸವಣ್ಣನವರು ಕನ್ನಡ ಸಾಹಿತ್ಯಕ್ಕೆ ಹಾಗೂ ವಚನಗಳ ಮೂಲಕ ಸಮಾಜದಲ್ಲಿ ಸಮಾನತೆ ಸಾರಿದ ಧೀಮಂತರಾಗಿದ್ದಾರೆ. ಪ್ರಜಾಪ್ರಭುತ್ವದ ಮೂಲ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ ಮುಂದಿಟ್ಟುಕೊಂಡು ಅನುಭವ ಮಂಟಪವನ್ನು ರಚಿಸಿ, ತನ್ಮೂಲಕ ಎಲ್ಲ ವರ್ಗದ ಶರಣರ ತತ್ವಗಳನ್ನು ಅವಲೋಕಿಸಿ ಅವುಗಳನ್ನು ಮುನ್ನೆಲೆಗೆ ತರಲಾಗುತ್ತಿತ್ತು. ಶರಣರ ಚರ್ಚಿತ ತತ್ವಗಳು ಸಮಾಜಕ್ಕೆ ಸ್ಫೂರ್ತಿಯಾಗುತ್ತಿದ್ದವು. ಸಮಾನತೆ ಸಾರುವ ನಿಟ್ಟಿನಲ್ಲಿ ಅನುಭವ ಮಂಟಪ ಕಾರ್ಯ ಮಹತ್ವವಾಗಿದೆ ಎಂದರು.

ಇದಕ್ಕೂ ಮೊದಲು ಮುಖಂಡ ಗಂಗಾಧರಸ್ವಾಮಿ ಮಾತನಾಡಿ, ಸಮಾಜ ಸುಧಾರಣೆಗಾಗಿ ನೀಡಿರುವ ವಚನ ಸಾಹಿತ್ಯದ ಸಂದೇಶಗಳು ವಿಶ್ವವ್ಯಾಪಿಯಾಗಿದ್ದು, ಅವರ ಕನ್ನಡ ವಚನ ಸಾಹಿತ್ಯ ಜಗತ್ತಿನ ಅನೇಕ ಭಾಷೆಗಳಲ್ಲಿ ಭಾಷಾಂತರವಾಗಿವೆ. ಪ್ರಪಂಚದ ಅನೇಕ ಸಂವಿಧಾನಗಳ ರಚನೆಗೆ, ಪರಿಕಲ್ಪನೆ ನೀಡಿದ ಅವರ ಸಂದೇಶಗಳು ಇಂದಿಗೂ ನಮ್ಮೆಲ್ಲರ ಬದುಕಿಗೆ ಬೆಳಕಾಗಿವೆ ಎಂದರು.

ತಾಪಂ ಇಒ ರಾಜಶೇಖರ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್ಣ ಕಟ್ಟಿಮನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಿ, ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಅನಿಲ ಬಿಜ್ಜಳ, ಸಂಗಪ್ಪ ಸಜ್ಜನ, ಶೇಷಪ್ಪ ಪೂಜಾರ, ಸುರೇಶ ಗುಗ್ಗಳಶೆಟ್ರ, ಪ್ರಮುಖರಾದ ವೀರೇಶ ಸಮಗಂಡಿ, ಮಹಾಂತೇಶ ಸಜ್ಜನ, ವಾಗೀಶ ಹಿರೇಮಠ, ಸಣ್ಣ ಕನಕಪ್ಪ, ಪ್ರಶಾಂತ ಪ್ರಭುಶೆಟ್ಟರ, ಸಿಂಧು ಬಲ್ಲಾಳ, ವೀರಭದ್ರಪ್ಪ ಗುಗ್ಗಳಶೆಟ್ರ, ಹರೀಶ ಪೂಜಾರ, ಬಸವರಾಜ ಕೋರಿ, ವಿರೂಪಾಕ್ಷ ಆಂಧ್ರ ಸೇರಿದಂತೆ ಇನ್ನಿತರರು ಇದ್ದರು. ಶಾಸಕರು, ಜಿಲ್ಲಾಧಿಕಾರಿಗಳಿಂದ ಪುಷ್ಪನಮನ

ಕೊಪ್ಪಳ: ಜಗಜ್ಯೋತಿ ಶ್ರೀ ಬಸವೇಶ್ವರರ 893ನೇ ಜಯಂತ್ಯುತ್ಸವ ನಿಮಿತ್ತ ಮಹಾನ್ ಮಾನವತಾವಾದಿ ಶ್ರೀ ಬಸವೇಶ್ವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಸಿದ್ಧಿ, ಜಿಲ್ಲಾ ಪಂಚಾಯತ್ ಸಿಇಒ ವರ್ಣಿತ್ ನೇಗಿ ಹಾಗೂ ಇನ್ನಿತರ ಗಣ್ಯರು ಸೋಮವಾರ ಬೆಳಗ್ಗೆ ಶಿವಶಾಂತವೀರ ನಗರದ ನಿಜಶರಣ ಅಂಬಿಗರ ಚೌಡಯ್ಯ ಉದ್ಯಾನ ವನಕ್ಕೆ ಆಗಮಿಸಿ ಜಗಜ್ಯೋತಿ ಶ್ರೀ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ತಹಸೀಲ್ದಾರ್ ಬಸವರಾಜ ತನ್ನಳ್ಳಿ, ಜಿಪಂ ಉಪ ಕಾರ್ಯದರ್ಶಿ ಟಿ. ಕೃಷ್ಣಮೂರ್ತಿ, ತಾಪಂ ಕಾರ್ಯನಿರ್ವಹಣಾಧಿಕಾರಿ ದುಂಡಪ್ಪ ತುರಾದಿ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ, ಮುಖಂಡರಾದ ಮುತ್ತು ಕುಷ್ಟಗಿ, ಮಂಜುನಾಥ ಸೊರಟೂರ, ಡಾ. ಮಹಾಂತೇಶ ನೆಲಾಗಣಿ, ಬಸವಶ್ರೀ ಸೋಮನಾಳ, ಬಸವರಾಜ ಬಳ್ಳೊಳ್ಳಿ, ರಾಜಶೇಖರ ಶಶಿಮಠ, ಶಿವಕುಮಾರ ಕುಕನೂರ, ಗವಿಸಿದ್ದಪ್ಪ ಯಕ್ಲಾಸಪೂರ, ಹನುಮಂತಪ್ಪ ಪೊಲೀಸ್ ಪಾಟೀಲ, ಗಾಳೆಪ್ಪ ಹೊಸಮನಿ ಸೇರಿದಂತೆ ಬಸವಪರ ಸಂಘಟಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.