ಸಾರಾಂಶ
ರಾಸಾಯನಿಕ ಮುಕ್ತ ಸ್ನಾನ ಮಾಡಲು ಜಾಗೃತಿ ಮೂಡಿಸ್ತೇವೆ ಎಂದ ವರದಶ್ರೀ ಫೌಂಡೇಶನ್ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನದಿ, ಕೆರೆ, ಸಮುದ್ರ, ಬಾವಿಗಳಲ್ಲಿ ಸ್ನಾನ ಮಾಡುವಾಗ ಮಲೀನಗೊಂಡರೆ ಜಲಚರ ಜೀವಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ ಎಂದು ವರದಶ್ರೀ ಫೌಂಡೇಶನ್ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಣ್ಯಕ್ಷೇತ್ರಗಳ ನದಿಯಲ್ಲಿ ಸ್ನಾನ ಮಾಡುವಾಗ ಟೂಥ್ಪೇಸ್ಟ್, ಸಾಬೂನು, ಶಾಂಪೂ ಇತ್ಯಾದಿಗಳನ್ನು ಬಳಸಿದರೆ ಅವುಗಳ ರಾಸಾಯನಿಕಗಳು ಮೀನು, ಮೊಸಳೆಯಂತಹ ಜಲಚರ ಜೀವಿಗಳಿಗೆ ಅಪಾಯಕಾರಿಯಾಗುತ್ತದೆ ಎಂದರು.
ರಾಸಾಯನಿಕ ನೀರನ್ನು ಬಳಕೆ ಮಾಡುವುದರಿಂದ ಕುಡಿಯಲು, ಪೂಜೆ ಮಾಡಲು ಮತ್ತಿತರ ಕೆಲಸ ಕಾರ್ಯಗಳಿಗೆ ಬಳಸುತ್ತವೆ. ಅಲ್ಲದೇ ಶಾಂಪೂ ಕವರ್ಗಳನ್ನು ಬಿಸಾಡುವುದರಿಂದಲೂ ನದಿಗಳು ಮಲೀನಗೊಳ್ಳುತ್ತದೆ ಎಂದು ಹೇಳಿದರು.ಕೂಡಲಸಂಗಮದಲ್ಲಿ ಸಂಕ್ರಾಂತಿ ಹಬ್ಬದಂಗವಾಗಿ ನಡೆಯುವ ಪುಣ್ಯಸ್ನಾನದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ಅಲ್ಲಿ ನಮ್ಮ ಫೌಂಡೇಶನ್ನಿಂದ ಜಾಗೃತಿ ಮೂಡಿಸಲಾಗುತ್ತದೆ. ರಾಸಾಯನಿಕ ಮಿಶ್ರಿತ ಸಾಬೂನು, ಶಾಂಪೂ ಬಳಸದೆ ಅರಿಷಿಣ, ಎಳ್ಳು, ಕಡಲೆಹಿಟ್ಟು, ಬೇವಿನ ಎಲೆ, ಲಿಂಬೆ ಸಿಪ್ಪೆಯಿಂದ ಸ್ನಾನ ಮಾಡಬೇಕು ಎಂದು ಅಲ್ಲಿಯ ಭಕ್ತಾದಿಗಳಿಗೆ ಅರಿವು ಮೂಡಿಸುತ್ತೇವೆ. ಅದಕ್ಕಾಗಿ ನಮ್ಮ ಫೌಂಡೇಶನ್ನಿಂದ ಭಕ್ತಾದಿಗಳಿಗೆ ಉಚಿತವಾಗಿ 1 ಲಕ್ಷಕ್ಕಿಂತ ಹೆಚ್ಚು ಕಡಲೆಹಿಟ್ಟಿನ ಚೀಟನ್ನು ಹಂಚಲಾಗುವುದು. ತಕ್ಕಮಟ್ಟಿಗಾದರೂ ವಿಷಮುಕ್ತ ಮಾಡುವ ಸಂಕಲ್ಪ ಹೊಂದಿದ್ದೇವೆ. ಇಂತಹ ಅಭಿಯಾನಕ್ಕೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ನಮ್ಮ ಫೌಂಡೇಶನ್ ಹುಬ್ಬಳ್ಳಿಯಲ್ಲಿ ಸ್ಥಾಪನೆಯಾಗಿದ್ದು ಅನೇಕ ಉತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ವಿಷ ಸ್ನಾನ ಬಿಡಿ ಪುಣ್ಯ ಸ್ನಾನ ಮಾಡಿ ಎನ್ನುವ ಜಾಗೃತಿ ಅಭಿಯಾನ ಆರಂಭಿಸಿದ್ದೇವೆ ಎಂದ ಅವರು, ಸಂಕ್ರಾಂತಿ ದಿನ ಮಾತ್ರವಲ್ಲದೇ ಶ್ರಾವಣ ಮಾಸ, ಕುಂಭ ಮೇಳದಂತಹ ಸಂದರ್ಭಗಳಲ್ಲಿಯೂ ರಾಸಾಯನಿಕ ಮುಕ್ತ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಜಯಶಂಕರ ಹುನ್ನೂರ, ಕರಿಸಿದ್ದಪ್ಪ ಶಿರಸಂಗಿ ಇದ್ದರು.