ಸಾರಾಂಶ
ಮೈಕ್ರೋ ಫೈನಾನ್ಸ್ ದಾದಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಅವಟಿಗಲ್ಲಿಯ ಮನೆಯೊಂದಕ್ಕೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಆಗಮಿಸಿ ಸಾಲ ತುಂಬುವಂತೆ ಒತ್ತಾಯಿಸಿದ ಪ್ರಕರಣ ನಡೆದಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಮೈಕ್ರೋ ಫೈನಾನ್ಸ್ ದಾದಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಅವಟಿಗಲ್ಲಿಯ ಮನೆಯೊಂದಕ್ಕೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಆಗಮಿಸಿ ಸಾಲ ತುಂಬುವಂತೆ ಒತ್ತಾಯಿಸಿದ ಪ್ರಕರಣ ಶನಿವಾರ ನಡೆದಿದೆ.ಮನೆಯಲ್ಲಿ ಗಂಡಸರು ಇಲ್ಲದ ಸಮಯದಲ್ಲಿ ಸಾಲ ವಸೂಲಾತಿಗೆ ಸಿಬ್ಬಂದಿ ಬಂದಿರುವುದನ್ನು ಕಂಡು ಜನರು ಜಮಾಯಿಸಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಮುಖಂಡ ರಫೀಕ್ ಬಾರಿಗಡ್ಡಿಯವರು ಸಾಲ ವಸೂಲಿಗೆ ದಬ್ಬಾಳಿಕೆ ಮಾಡಬೇಡಿ, ಕಾನೂನು ರೀತ್ಯಾ ಪ್ರಕರಣ ದಾಖಲಿಸಿ ಎಂದರು ಸಿಬ್ಬಂದಿ ಕೇಳಲಿಲ್ಲ. ಫೈನಾನ್ಸ್ ಮ್ಯಾನೇಜರ್ ಜೊತೆ ಫೋನ್ನಲ್ಲಿನ ಮಾತನಾಡುವಂತೆ ಮುಖಂಡರಿಗೆ ತಿಳಿಸಿದ್ದಾರೆ. ನಂತರ ಮ್ಯಾನೇಜರ್ ಮುಖಂಡರ ಮಾತಿಗೂ ಗೌರವ ನೀಡದೇ ಸಂಭಾಷಣೆಯಲ್ಲಿ ತೊಡಗಿದಾಗ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸ್ಥಳಕ್ಕೆ ನಗರಠಾಣೆ ಸಿಬ್ಬಂದಿ ಬಂದಿರುವುದನ್ನು ನೋಡಿದ ತಕ್ಷಣ ಮ್ಯಾನೇಜರ್ ತನ್ನ ಮಾತಿನ ವರಸೆ ಬದಲಿಸಿದ್ದು ಕ್ಷಮೆಕೋರಿ ಪ್ರಕರಣ ದಾಖಲಿಸದಂತೆ ಮನವಿ ಮಾಡಿದ ಘಟನೆ ಕೂಡ ನಡೆದಿದೆ.ಅವಟಿಗಲ್ಲಿಯ ನಿವಾಸಿ ಅಯೂಬ ಕಂಕಣವಾಡಿ ಎಂಬುವರ ಮನೆಗೆ ಸಾಲ ವಸೂಲಿಗೆ ಬಂದಿದ್ದ ಸಿಬ್ಬಂದಿ, ಸಾರ್ವಜನಿಕರು ಹಾಗೂ ಮುಖಂಡರಿಂದ ಸಮಜಾಯಿಸಿ ಪಡೆದ ನಂತರ ಜಾಗಾ ಖಾಲಿ ಮಾಡಿದ್ದಾರೆ ಎಂದು ಸೈಯದ್ ಬಾಷಾ ತಿಳಿಸಿದ್ದಾರೆ.
ಫೈನಾನ್ಸ್ ಸಿಬ್ಬಂದಿ ವಿರುದ್ಧ ದೂರು ದಾಖಲಿಸುವುದಾಗಿ ತಿಳಸಿದ ನಂತರ ಮ್ಯಾನೇಜರ್ ಕ್ಷಮೆ ಯಾಚಿಸಿದ್ದಾರೆ. ನಗರದಲ್ಲಿ ಹಲವಾರು ಮಹಿಳೆಯರು ಮೈಕ್ರೋ ಫೈನಾನ್ಸ್ನಿಂದ ಸಾಲಪಡೆದಿದ್ದು ಸಾಕಷ್ಟುಬಾರಿ ಕಿರುಕುಳ ಅನುಭವಿಸಿದ್ದಾರೆ. ಕಳೆದ ತಿಂಗಳು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಪೊಲೀಸ್ ಹಾಗೂ ಉಸ್ತುವಾರಿ ಸಚಿವ ತಿಮ್ಮಾಪೂರ, ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡರಿಗೆ ಮನವಿಗಳನ್ನು ಸಲ್ಲಿಸಿದ್ದು ಆಗಿದೆ. ಆದರೂ ಮೈಕ್ರೋಫೈನಾನ್ಸಗಳ ಕಿರುಕುಳ ತಪ್ಪಿಲ್ಲ. ಜಮಖಂಡಿಯ ಅವಟಿಗಲ್ಲಿಯಲ್ಲಿ ಮೈಕ್ರೋಫೈನಾನ್ಸನ ಸಿಬ್ಬಂದಿ ಕಿರುಕುಳ ತಪ್ಪಿಸುವಂತೆ ಮನವಿ ಮಾಡಿದ ಮಹಿಳೆಯರು. ಕಾಂಗ್ರೆಸ್ ಮುಖಂಡ ರಫೀಕ್ ಬಾರಿಗಡ್ಡಿ, ಪೊಲೀಸರೊಂದಿಗೆ ಸ್ಥಳಕ್ಕೆ ದೌಢಾಯಿಸಿ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು.