ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಆಲಮಟ್ಟಿ ಅಣೆಕಟ್ಟಿನ ಜಾಕ್ವೆಲ್ ಇರುವ ಸ್ಥಳಕ್ಕೆ ಹಾಗೂ ಕಮತಗಿಯಲ್ಲಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಪುರಸಭೆ ಸದಸ್ಯರೊಂದಿಗೆ ಬುಧವಾರ ಭೇಟಿ ನೀಡಿ ವೀಕ್ಷಿಸಿದರು.ಗುಳೇದಗುಡ್ಡ ಭಾಗದ ಜನರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ಅನಾನುಕೂಲವಾಗದಂತೆ ಕ್ರಮವಹಿಸಲು, ಜಾಕ್ವೆಲ್ ಸದ್ಯದ ಕಂಡಿಷನ್ ಬಗ್ಗೆ ಮತ್ತು ದುರಸ್ತಿ ಇರುವ ಯಂತ್ರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮುಂದಿನ ದಿನಮಾನಗಳಲ್ಲಿ ಕುಡಿಯುವ ನೀರಿಗೆ ಅಭಾವವಾಗದಂತೆ ಮುಂಜಾಗ್ರತೆ ವಹಿಸಿಕೊಳ್ಳಬೇಕು. ಜಾಕ್ವೆಲ್ ತಾಂತ್ರಿಕ ದೋಷದಿಂದ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ಕಾರಣಕ್ಕೆ ತೊಂದರೆ ಬರಬಾರದು. ಹಾಗೇನಾದರೂ ಯಂತ್ರಗಳು ದುರಸ್ತಿ ಬಂದರೆ ಮುಂಜಾಗ್ರತಾ ಕ್ರಮವಾಗಿ ಒಂದು ಹೆಚ್ಚುವರಿಯಾಗಿ ಯಂತ್ರದ ಸೆಟ್ನ್ನು ತಯಾರಿಯಲ್ಲಿ ಇಟ್ಟುಕೊಂಡಿರಬೇಕು. ದುರಸ್ತಿಗೆ ಬಂದಿರುವ ಮಶೀನ್ಗಳನ್ನು ದುರಸ್ತಿ ಮಾಡಿಸಿಕೊಳ್ಳಿ. ಸದ್ಯ ಯಾವುದು ಕೆಲಸ ಮಾಡಬೇಕಿದೆ ಅದರ ಬಗ್ಗೆ ಕ್ರಿಯಾ ಯೋಜನೆ ತಯಾರಿಸಿ ನನ್ನ ಶಿಫಾರಸ್ಸು ಪತ್ರ ಅದಕ್ಕೆ ಲಗತ್ತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಯೋಜನೆಗೆ ಬೇಕಾದಂತಹ ಅನುದಾನ ಪಡೆಯಬೇಕು. ತಮ್ಮ ವರದಿ ಸಲ್ಲಿಕೆಯಾದ ತಕ್ಷಣ ನಾನು ಅನುದಾನ ಬಿಡುಗಡೆ ಮಾಡಿಸುತ್ತೇನೆ ಎಂದು ಅಧಿಕಾರಿಗಳಿಗೆ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕಮತಗಿಯಲ್ಲಿರುವ ಕುಡಿಯುವ ನೀರು ಶುದ್ಧೀಕರಣ ಘಟಕಕ್ಕೂ ಭೇಟಿ ನೀಡಿ ಅದನ್ನೂ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ಪುರಸಭೆ ಮುಖ್ಯಾಧಿಕಾರಿ ಎ.ಎಚ್.ಮುಜಾವರ, ಅಭಿಯಂತರ ಎಂ.ಜಿ.ಕಿತ್ತಲಿ, ಮಾಜಿ ಅಧ್ಯಕ್ಷ ವೈ.ಆರ್.ಹೆಬ್ಬಳ್ಳಿ, ಪುರಸಭೆ ಸದಸ್ಯರಾದ ಹನಮಂತ ಗೌಡರ, ವಿಠ್ಠಲ ಕಾವಡೆ, ರಫೀಕ್ ಕಲಬುರ್ಗಿ, ಲಕ್ಕುಂಡಿ, ಅಮರೇಶ ಕವಡಿಮಟ್ಟಿ, ರಾಜು ಹೆಬ್ಬಳ್ಳಿ, ಪ್ರಕಾಶ ಮುರಗೋಡ ಸೇರಿದಂತೆ ಜಾಕ್ವೆಲ್ ನಿರ್ವಹಣೆಯ ಅಧಿಕಾರಿಗಳು ಹಾಜರಿದ್ದರು.