ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಅಧಿಕಾರಿಗಳು ಕರ್ತವ್ಯ ನಿರ್ವಹಣೆ ವೇಳೆ ಶಿಸ್ತು, ತಾಳ್ಮೆ, ಬದ್ಧತೆ ಜೊತೆ ಪ್ರಾಮಾಣಿಕತೆ ಎಂಬುದು ಅತಿಮುಖ್ಯ. ಅಧಿಕಾರಿಗಳು, ಸಿಬ್ಬಂದಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಹಾದಿಯಲ್ಲಿ ಪ್ರಾಮಾಣಿಕವಾಗಿ ಸಾಗಿ ಅರಣ್ಯ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಚಾಮರಾಜನಗರ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಹೇಳಿದರು.ಕೊಳ್ಳೇಗಾಲ ಪಟ್ಟಣ ಅರಣ್ಯ ಇಲಾಖೆಯ ಕಾವೇರಿ ಸಭಾಂಗಣದಲ್ಲಿ ಕಾವೇರಿ ವನ್ಯಜೀವಿ ವಿಭಾಗದ ವತಿಯಿಂದ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು, ಪ್ರಥಮ ದರ್ಜೆ ಸಹಾಯಕರಾದ ಸೋಮಶೇಖರಪ್ಪ, ಅವರಿಗೆ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ಸಂರಕ್ಷಣೆ ಹೊಣೆ ಅರಿಯುವ ಜೊತೆಗೆ ವನ್ಯಜೀವಿಗಳಿಗೆ, ವನ್ಯ ಸಂಪತ್ತಿಗೆ ಧಕ್ಕೆಯಾಗದಂತೆ ಕರ್ತವ್ಯ ನಿರ್ವಹಿಸಿ ಎಂದರು. ಮಲೆ ಮಹದೇಶ್ವರಬೆಟ್ಟ ವನ್ಯಧಾಮದ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಮಾತನಾಡಿ, ಅರಣ್ಯ ಇಲಾಖೆಯಲ್ಲಿ ಕರ್ತವ್ಯ ಮಾಡುವ ಅಧಿಕಾರಿಗಳು ತಮ್ಮ ಅವಧಿಯಲ್ಲಿ ಮಾಡುವ ಕಾರ್ಯ ಬಗ್ಗೆ ದಾಖಲೀಕರಣ ಆಗುವಂತಾಗಬೇಕು, ನೆನಪಿನಲ್ಲಿ ಉಳಿಯುವ ಸಾರ್ಥಕ ಕೆಲಸದಲ್ಲಿ ತಲ್ಲೀನರಾಗಬೇಕು. ಅರಣ್ಯ ಸಂಪತ್ತು ಸಂರಕ್ಷಣೆ, ಅಭಿವೃದ್ಧಿ ಹಾಗೂ ಇನ್ನಿತರ ಉಪಯುಕ್ತ ಕಾರ್ಯಗಳಿಗೆ ಒತ್ತು ನೀಡಿ ಇಲಾಖೆಗೆ ಕೀರ್ತಿ ಬರುವಂತೆ ಶ್ರಮಿಸಬೇಕು ಎಂದರು. ಈ ವೇಳೆ ಅಂಕರಾಜು ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಎಸಿಎಫ್ ನಾಗೇಂದ್ರ, ನಿವೃತ್ತ ಡಿಸಿಎಫ್ ಆರ್.ಉದಯಕುಮಾರ್, ಡಿಸಿಎಫ್ ಎಂ.ಸಿ ಸುರೇಂದ್ರ, ವನ್ಯಜೀವಿ ಪರಿಪಾಲಕ ಮಲ್ಲೇಶಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದಗೋಪಾಲ್, ಹನೂರು ಪಶು ವೈದ್ಯಾಧಿಕಾರಿ ಸಿದ್ದರಾಜು, ವನೋದಯ ಸ್ವಯಂ ಸೇವಕರ ತಂಡ ಅನ್ವಿನ್ ಕುಮಾರ್, ಮಹೇಶ್ ಇನ್ನಿತರರಿದ್ದರು.