ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್, ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಸಾಂದೀಪಿನಿ ಹೈಟೆಕ್ ಶಾಲೆಯ ಸಹಯೋಗದಲ್ಲಿ ನಗರದ ನಾಗದೇವನಹಳ್ಳಿಯಲ್ಲಿರುವ ಸಾಂದೀಪಿನಿ ಹೈಟೆಕ್ ಶಾಲೆಯಲ್ಲಿ ಶನಿವಾರ ಬೆಂಗಳೂರು ನಗರ ದಕ್ಷಿಣ ವಲಯ ಮಟ್ಟದ ಚಿತ್ರಕಲಾ ಸ್ಪರ್ಧೆ ಜರುಗಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್, ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಸಾಂದೀಪಿನಿ ಹೈಟೆಕ್ ಶಾಲೆಯ ಸಹಯೋಗದಲ್ಲಿ ನಗರದ ನಾಗದೇವನಹಳ್ಳಿಯಲ್ಲಿರುವ ಸಾಂದೀಪಿನಿ ಹೈಟೆಕ್ ಶಾಲೆಯಲ್ಲಿ ಶನಿವಾರ ಬೆಂಗಳೂರು ನಗರ ದಕ್ಷಿಣ ವಲಯ ಮಟ್ಟದ ಚಿತ್ರಕಲಾ ಸ್ಪರ್ಧೆ ಜರುಗಿತು.‘ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ’ ವಿಷಯದ ಮೇಲೆ ನಡೆದ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿ ಚೆಂದದ ಚಿತ್ರಗಳನ್ನು ಬಿಡಿಸಿ ಖುಷಿಪಟ್ಟರು. ಮಕ್ಕಳೊಂದಿಗೆ ಅವರ ಪಾಲಕರು ಕೂಡ ಶಾಲೆಗೆ ಆಗಮಿಸಿ, ಪ್ರಶಸ್ತಿ ಪ್ರದಾನ ಸಮಾರಂಭವನ್ನು ವೀಕ್ಷಿಸಿದರು.
ಅತ್ಯುತ್ತಮ ಚಿತ್ರ ಬಿಡಿಸಿದ ಐವರು ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ 22,000 ರು. ನಗದು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು.ಶಾಲಾ ಹಂತದಲ್ಲೇ ಪರಿಸರ ಕಾಳಜಿ: ಕಾರ್ಯಕ್ರಮದಲ್ಲಿ ಮಾತನಾಡಿದ ಸಾಂದೀಪಿನಿ ಹೈಟೆಕ್ ಶಾಲೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಅನೇಕ ವರ್ಷಗಳ ಬಳಿಕ ನಮ್ಮ ಶಾಲೆಯಲ್ಲಿ ದೊಡ್ಡ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದಕ್ಕೆ ಕಾರಣವಾದ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ಗೆ ಅಭಿನಂದನೆಗಳು. ಶಾಲಾ ಹಂತದಲ್ಲೇ ಮಕ್ಕಳಲ್ಲಿ ಅರಣ್ಯ, ವನ್ಯಜೀವಿ ಸಂರಕ್ಷಣೆ ಕುರಿತು ಜ್ಞಾನ, ಕಾಳಜಿ, ಜಾಗೃತಿ ಮೂಡಿಸುವುದರಿಂದ ನಮ್ಮ ಸುತ್ತಲಿನ ಪರಿಸರ ಮತ್ತು ದೇಶದ ಭವಿಷ್ಯ ಉತ್ತಮಗೊಳ್ಳುತ್ತದೆ ಎಂದರು.
ಮಕ್ಕಳು ಚಿತ್ರ ಬಿಡಿಸುವುದು ಕೇವಲ ಸ್ಪರ್ಧೆಗಾಗಿ ಮಾತ್ರವಲ್ಲ. ಜೀವನ ಪರ್ಯಂತ ಗಿಡ-ಮರಗಳನ್ನು ಬೆಳೆಸುವುದು, ವನ್ಯಜೀವಿಗಳ ಬಗ್ಗೆ ಕಾಳಜಿ, ಅರಣ್ಯ ಸಂರಕ್ಷಣೆಯ ಪರಿಸರ ಪ್ರೇಮ ಮೂಡಲು ಕಾರಣವಾಗುತ್ತದೆ. ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಇಂತಹ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ. ಇಂತಹ ಒಳ್ಳೆಯ ಪ್ರಯತ್ನಕ್ಕೆ ಅರಣ್ಯ ಇಲಾಖೆಯಿಂದ ಅವಕಾಶ ಮಾಡಿಕೊಟ್ಟಿರುವುದು ಅಭಿನಂದನಾರ್ಹ ಎಂದು ಲೊಕೇಶ್ ತಾಳಿಕಟ್ಟೆ ಹೇಳಿದರು.ನೈಜ ಅನುಭವದಿಂದ ಚಿತ್ರಕಲೆಗೆ ಜೀವ: ಅರಣ್ಯ ಇಲಾಖೆಯ ಬೆಂಗಳೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ಮಾತನಾಡಿ, ರಾಜ್ಯದ ಒಟ್ಟಾರೆ ಭೂಭಾಗದಲ್ಲಿ ಶೇ. 20 ಅರಣ್ಯ ಪ್ರದೇಶವಿದೆ. ಎಲ್ಲೋ ಮರ ಕಡಿದರೆ, ಅದರ ಪರಿಣಾಮ ಬೇರೆಲ್ಲೋ ಇರುವವರ ಮೇಲೆ ಬೀರುತ್ತದೆ. ಹೀಗಾಗಿ, ಮಕ್ಕಳಲ್ಲಿ ಅರಣ್ಯ, ವನ್ಯಜೀವಿಗಳ ಕುರಿತು ಕಾಳಜಿ ಮೂಡಿಸಲು ಆಯೋಜಿಸಿರುವ ಈ ಸ್ಪರ್ಧೆಯು ಒಳ್ಳೆಯ ಕಲ್ಪನೆಯಾಗಿದೆ. ನೈಜ ಅನುಭವದಿಂದ ಚಿತ್ರಕಲೆಗೆ ಜೀವ ನೀಡಲು ಸಾಧ್ಯ. ಪರಿಸರದಿಂದಲೇ ಪರಿಸರದ ಬಗ್ಗೆ ನಾವು ಅತ್ಯುತ್ತಮ ಅನುಭವ ಪಡೆಯಲು ಸಾಧ್ಯ ಎಂದರು. ಇಂದಿನ ಎಐ ಯುಗದಲ್ಲಿ ಕ್ಷಣಾರ್ಧದಲ್ಲಿ ನಮಗೆ ಬೇಕಾದ ಚಿತ್ರಗಳನ್ನು ಮೊಬೈಲ್ನಲ್ಲಿ ಪಡೆಯಬಹುದು. ಆದರೆ, ಸ್ವಂತ ಮೆದುಳಿಗೆ ಕೆಲಸ ಕೊಟ್ಟು ನಮ್ಮ ಭಾವನೆಗಳ ಮೂಲಕ ಕಲೆ ವ್ಯಕ್ತವಾಗಬೇಕು. ಇದರಿಂದ ಸಹಜತೆಯ ಜೊತೆ ಮಕ್ಕಳಲ್ಲಿ ಬೌದ್ಧಿಕ ಮಟ್ಟ ಉತ್ತಮಗೊಳ್ಳುತ್ತದೆ ಎಂದು ಗಣೇಶ್ ಹೇಳಿದರು.
ಚಿತ್ರಕಲೆ ಬರಹಕ್ಕಿಂತ ಪರಿಣಾಮಕಾರಿ: ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್ ಮಾತನಾಡಿ, ಚಿತ್ರಕಲೆ ಎನ್ನುವುದು ಮನಸಿನ ಮಾತುಗಳನ್ನು ಬಣ್ಣಗಳ ಮೂಲಕ ಹಾಳೆಗಳ ಮೇಲೆ ಇಳಿಸಿದಂತೆ. ನಮ್ಮ ಭಾವನೆಗಳನ್ನು ರೇಖೆಗಳಲ್ಲಿ ವ್ಯಕ್ತಪಡಿಸಿದಂತೆ. ಚಿತ್ರಕಲೆಯು ಮಕ್ಕಳಲ್ಲಿ ಕ್ರಿಯಾಶೀಲತೆ, ಕ್ರಿಯಾತ್ಮಕತೆಯನ್ನು ಹೊರ ತೆಗೆಯುತ್ತದೆ. ಚಿತ್ರಕಲೆಯು ಬರಹಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ಹೇಳಿದರು.ಕನ್ನಡಪ್ರಭ-ಸುವರ್ಣ ನ್ಯೂಸ್ನಿಂದ ಆಯೋಜಿಸಿರುವ ಸ್ಪರ್ಧೆಯಲ್ಲಿ ಲಕ್ಷಾಂತರ ಮಕ್ಕಳು ಭಾಗವಹಿಸುತ್ತಿದ್ದಾರೆ. ಇದು ಕರ್ನಾಟಕದ ಅತಿ ದೊಡ್ಡ ಚಿತ್ರಕಲಾ ಸ್ಪರ್ಧೆಯಾಗಿದೆ. ಸ್ಪರ್ಧೆಯಲ್ಲಿ ಸೋಲುವುದು ಅಥವಾ ಗೆಲ್ಲುವುದು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಚಿತ್ರಕಲೆಗೆ ವಿಶೇಷವಾದ ಗೌರವವಿದೆ. ವೃತ್ತಿಪರ ಕಲಾವಿದರ ಪೇಂಟಿಂಗ್ಗಳಿಗೆ ಕೋಟಿ ರು.ವರೆಗೂ ಬೆಲೆಯಿದೆ. ಚಿತ್ರಕಲಾ ಪರಿಷತ್ತು ಆಯೋಜಿಸುವ ಚಿತ್ರಸಂತೆಗೆ ಲಕ್ಷಾಂತರ ಜನ ಬರುತ್ತಾರೆ. ಚಿತ್ರಕಲೆಗೆ ಅಷ್ಟರ ಮಟ್ಟಿಗೆ ಗೌರವ ಇದೆ ಎಂದು ಗಿರೀಶ್ ರಾವ್ ಹೇಳಿದರು.ಕಾರ್ಯಕ್ರಮದಲ್ಲಿ ಸಾಂದೀಪಿನಿ ಹೈಟೆಕ್ ಶಾಲೆಯ ಕಾರ್ಯದರ್ಶಿ ಚಂದ್ರಕಲಾ, ಕನ್ನಡಪ್ರಭ ಮಾರುಕಟ್ಟೆ ವಿಭಾಗದ ಸಹ ಉಪಾಧ್ಯಕ್ಷ ಬಿ.ಸಿ. ರಾಘವೇಂದ್ರ, ಸಾಂದೀಪಿನಿ ಹೈಟೆಕ್ ಶಾಲೆಯ ಪ್ರಾಂಶುಪಾಲೆ ಇಶ್ರತ್ ಜಬೀನ್ ಉಪಸ್ಥಿತರಿದ್ದರು.
ಬಾಕ್ಸ್...1ಚಿತ್ರಕಲಾ ಪರಿಷತ್ತಿನ ತಂಡದಿಂದ ಆಯ್ಕೆಚಿತ್ರಕಲಾ ಪರಿಷತ್ತಿನ ಚಿತ್ರಕಲೆ ಶಿಕ್ಷಕರಾದ ಸುಷ್ಮಿತಾ ಮಾನ್, ದಾನಿಶ್ ಮುಸ್ತಫಾ ಮತ್ತು ಪ್ರಸಾದ್ ಮೇಸ್ತ್ರೀಯವರ ತಂಡವು, ಎಲ್ಲಾ ವಿದ್ಯಾರ್ಥಿಗಳು ಬಿಡಿಸಿದ ಎಲ್ಲಾ ಚಿತ್ರಗಳನ್ನು ಪರಿಶೀಲಿಸಿ ಅಂತಿಮವಾಗಿ ಅತ್ಯುತ್ತಮ ಐದು ಚಿತ್ರಗಳನ್ನು ಆಯ್ಕೆ ಮಾಡಿ ಪ್ರಶಸ್ತಿಯನ್ನು ಘೋಷಿಸಿತು.
ಬಾಕ್ಸ್....2ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳುಮೊದಲ ಬಹುಮಾನ- ಆರ್.ಜನನಿ, ಅರಬಿಂದೋ ವಿದ್ಯಾ ಮಂದಿರ
ಎರಡನೇ ಬಹುಮಾನ- ಎಂ. ಸಮೃದ್ಧಿ, ಎಸ್ಜೆಆರ್ ಪಬ್ಲಿಕ್ ಸ್ಕೂಲ್ಮೂರನೇ ಬಹುಮಾನ- ಕೆ. ಹರ್ಷಿತ್, ಸಾಂದೀಪಿನಿ ಹೈಟೆಕ್ ಸ್ಕೂಲ್
ಬಾಕ್ಸ್....3ಸಮಾಧಾನಕರ ಬಹುಮಾನಗಳು
ಆರ್.ರಾಕೇಶ್- ಎಸ್ಜೆಆರ್ ಪಬ್ಲಿಕ್ ಸ್ಕೂಲ್ಎಸ್. ಕಲ್ಯಾಣಿ - ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್
ಬಾಕ್ಸ್....410,000 ರು. ನಗದು ಬಹುಮಾನಸ್ಪರ್ಧೆಯಲ್ಲಿ ವಿಜೇತರಾದ ಮೂವರು ವಿದ್ಯಾರ್ಥಿಗಳಿಗೆ ಕ್ರಮವಾಗಿ 10,000 ರು. 5,000 ರು., 3,000 ರು. ಹಾಗೂ ಸಮಾಧಾನಕರ ಬಹುಮಾನವಾಗಿ ಇಬ್ಬರಿಗೆ ತಲಾ 2,000 ರು. ಜೊತೆಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಬಾಕ್ಸ್...5ಮೂವರು ರಾಜ್ಯ ಸ್ಪರ್ಧೆಗೆ ಆಯ್ಕೆ
ಮೊದಲ ಮೂರು ಸ್ಥಾನ ಪಡೆದ ಮೂವರು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಆಯೋಜಿಸಲಾಗುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.---------ಫೋಟೋ...
ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್, ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಸಾಂದೀಪಿನಿ ಹೈಟೆಕ್ ಶಾಲೆಯ ಸಹಯೋಗದಲ್ಲಿ ನಗರದ ನಾಗದೇವನಹಳ್ಳಿಯ ಸಾಂದೀಪಿನಿ ಹೈಟೆಕ್ ಶಾಲೆಯಲ್ಲಿ ಶನಿವಾರ ನಡೆದ ಬೆಂಗಳೂರು ನಗರ ದಕ್ಷಿಣ ವಲಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಶಾಲೆಯ ಅಧ್ಯಕ್ಷ ಲೊಕೇಶ್ ತಾಳಿಕಟ್ಟೆ, ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ಉದ್ಘಾಟಿಸಿದರು. ಕನ್ನಡಪ್ರಭ ಮಾರುಕಟ್ಟೆ ವಿಭಾಗದ ಸಹ ಉಪಾಧ್ಯಕ್ಷ ಬಿ.ಸಿ. ರಾಘವೇಂದ್ರ ಮತ್ತಿತರರು ಇದ್ದರು.ಫೋಟೋ ...
ಬೆಂಗಳೂರು ನಗರ ದಕ್ಷಿಣ ವಲಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ, ಪ್ರಮಾಣಪತ್ರವನ್ನು ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್ ವಿತರಿಸಿದರು. ಶಾಲೆಯ ಅಧ್ಯಕ್ಷ ಲೊಕೇಶ್ ತಾಳಿಕಟ್ಟೆ, ಕನ್ನಡಪ್ರಭ ಮಾರುಕಟ್ಟೆ ವಿಭಾಗದ ಸಹ ಉಪಾಧ್ಯಕ್ಷ ಬಿ.ಸಿ. ರಾಘವೇಂದ್ರ, ಪ್ರಾಂಶುಪಾಲೆ ಇಶ್ರತ್ ಜಬೀನ್, ಚಿತ್ರಕಲಾ ಪರಿಷತ್ತಿನ ಶಿಕ್ಷಕಿ ಸುಷ್ಮಿತಾ ಮಾನ್ ಮತ್ತಿತರರು ಇದ್ದರು---------ಫೋಟೋ...
ಸ್ಪರ್ಧೆಯಲ್ಲಿ ಚಿತ್ರ ಬಿಡಿಸುತ್ತಿರುವ ಉತ್ಸಾಹಿ ವಿದ್ಯಾರ್ಥಿಗಳು.