ಬೆಳ್ತಂಗಡಿ: ಭಾರತ ದೇಶದ ರಕ್ಷಣಾ ವಿಭಾಗದ ಭೂ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಬೆಳಾಲು ಗ್ರಾಮದ ಕಾಡಂಡ ನಿವಾಸಿ ವೀರ ಯೋಧ ಎಸಿಪಿ ನಾಯಕ ಸುಬೇದಾರ್ ಮೋಹನ ಗೌಡ ಅವರಿಗೆ ಬೆಳಾಲು ಗ್ರಾಮದ ಸಂಘ ಸಂಸ್ಥೆಗಳು, ಊರವರ ಸಹಕಾರದಲ್ಲಿ ಅಭಿನಂದನಾ ಸಮಿತಿ ವತಿಯಿಂದ ಭಾನುವಾರ ಹುಟ್ಟೂರ ಅಭಿನಂದನಾ ಸಮಾರಂಭ ಬೆಳಾಲು ಎಸ್ ಡಿಎಂ ಪ್ರೌಢಶಾಲೆಯಲ್ಲಿ ನಡೆಯಿತು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವಠಾರದಿಂದ ಸ್ವಾಗತ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.ಸ್ವಾಗತ ಮೆರವಣಿಗೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಉದ್ಘಾಟಿಸಿದರು. ಸಾಮರಸ್ಯದ ಬದುಕಿಗೆ ಮೂಲಕ ಕಾರಣ ಯೋಧರು. 24 ವರ್ಷ ಕರ್ತವ್ಯ ನಿರ್ವಹಿಸಿದ ಮೋಹನ ಗೌಡರ ಸ್ವಾಗತ ಮೆರವಣಿಗೆ, ಅಭಿನಂದನೆ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಭಾರತ ಭೂಮಿಯ ಸೇವೆ ಮಾಡಲು ಕಾರಣಕರ್ತರಾದ ಅವರ ಕುಟುಂಬದವರಿಗೆ ಅಭಿನಂದನೆಗಳು ಎಂದರು.ಬೆಳಾಲಿನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಮಾತನಾಡಿ, ದೇಶದ ಜನತೆ ನೆಮ್ಮದಿಯ ಜೀವನ ನಡೆಸಲು ದೇಶದ ಸೈನಿಕರು ಕಾರಣ. ಇವರು ತಮ್ಮ ಶಿಸ್ತು, ನಿಷ್ಠೆ, ತ್ಯಾಗದ ಮೂಲಕ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.ಶಾಸಕ ಹರೀಶ್ ಪೂಂಜ ಮಾತನಾಡಿ, ಈ ಅಭಿನಂದನಾ ಕಾರ್ಯಕ್ರಮ ದೇಶ ಭಕ್ತಿಯ ಹುಟ್ಟೂರ ಸನ್ಮಾನ ಆಗಿದೆ. ಈ ಕಾರ್ಯಕ್ರಮದ ಮೂಲಕ ಯುವ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ನಿವೃತ್ತ ಯೋಧ ಅತ್ಯುತ್ತಮ ಸೇನಾನಿ ಪ್ರಶಸ್ತಿ ಪುರಸ್ಕೃತ ಡಾ. ಗೋಪಾಲಕೃಷ್ಣ ಕಾಂಚೋಡು, ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಎನ್.ಪಿ. ತಂಗಚ್ಚನ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಅಭಿನಂದನಾ ಸಮಿತಿ ಅಧ್ಯಕ್ಷ ಎಚ್. ಪದ್ಮ ಗೌಡ ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧ ಮೋಹನ ಗೌಡ ಸೇನೆಯ ಅನುಭವ ಹಂಚಿಕೊಂಡರು. ಅಭಿನಂದನಾ ಸಮಿತಿಯ ಸಂಚಾಲಕ ದಾಮೋದರ ಗೌಡ ಸುರುಳಿ, ಕೋಶಾಧಿಕಾರಿ ಸುರೇಂದ್ರ ಗೌಡ ಇದ್ದರು.ಯೋಧರ ತಂದೆ ಮೋನಪ್ಪ ಗೌಡ, ತಾಯಿ ಬೂದಮ್ಮ, ಪತ್ನಿ ಜಯಶ್ರೀ, ಮಕ್ಕಳಾದ ವಂಶಿ, ದಿಯಾನ್ ಅವರನ್ನು ಬೆಳಾಲಿನ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರವರು, ಮಾಜಿ ಸೈನಿಕರು, ಅಭಿಮಾನಿಗಳು, ಮೋಹನ ಗೌಡರ ಕುಟುಂಬ ವರ್ಗದವರು ಹಾಜರಿದ್ದು ಸನ್ಮಾನಿಸಿದರು.ಅಭಿನಂದನಾ ಕಾರ್ಯದರ್ಶಿ ಧರ್ಮೇಂದ್ರ ಕುಮಾರ್ ಸ್ವಾಗತಿಸಿದರು. ಶಿಕ್ಷಕ ಮಹೇಶ್ ಪುಳಿತ್ತಡಿ ಮತ್ತು ಉಪನ್ಯಾಸಕ ಬೆಳಿಯಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಸದಸ್ಯ ಸುಲೈಮಾನ್ ಭೀಮಂಡೆ ವಂದಿಸಿದರು. ಉಮೇಶ್ ಮಂಜೊತ್ತು ಸನ್ಮಾನ ಪತ್ರ ವಾಚಿಸಿದರು.