ಬೆಳಗು ವಿವಾದಿತ ಪಠ್ಯ ಪ್ರಕರಣ, ಅರಿವೇ ಗುರು ಪ್ರಶಸ್ತಿ ಮುಂದೂಡಿಕೆ!

| Published : Jan 30 2025, 12:31 AM IST

ಬೆಳಗು ವಿವಾದಿತ ಪಠ್ಯ ಪ್ರಕರಣ, ಅರಿವೇ ಗುರು ಪ್ರಶಸ್ತಿ ಮುಂದೂಡಿಕೆ!
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕ್ಷುಲ್ಲಕ ಕಾರಣಕ್ಕೋಸ್ಕರ ಪ್ರತಿಷ್ಠಿತ ಅರಿವೇ ಗುರು ಪ್ರಶಸ್ತಿ ಕಾರ್ಯಕ್ರಮ ಮುಂದೂಡಿದ್ದಲ್ಲದೇ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಸೇರಿದಂತೆ ಮೂವರು ಪ್ರಶಸ್ತಿ ಪುರಸ್ಕೃತರಿಗೆ ಅಗೌರವ ತೋರಿರುವ ಘಟನೆ ನಡೆದಿದೆ.

ಧಾರವಾಡ:

ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕ್ಷುಲ್ಲಕ ಕಾರಣಕ್ಕೋಸ್ಕರ ಪ್ರತಿಷ್ಠಿತ ಅರಿವೇ ಗುರು ಪ್ರಶಸ್ತಿ ಕಾರ್ಯಕ್ರಮ ಮುಂದೂಡಿದ್ದಲ್ಲದೇ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಸೇರಿದಂತೆ ಮೂವರು ಪ್ರಶಸ್ತಿ ಪುರಸ್ಕೃತರಿಗೆ ಅಗೌರವ ತೋರಿರುವ ಘಟನೆ ನಡೆದಿದೆ.

ಸಾಕಷ್ಟು ಸಂದರ್ಭದಲ್ಲಿ ಪ್ರಶಸ್ತಿ ಕಾರ್ಯಕ್ರಮಗಳನ್ನು ಮುಂದೂಡುವುದು ಸಾಮಾನ್ಯ. ಆದರೆ, ವಿವಾದಿತ ಬೆಳಗು ಪಠ್ಯದ ಲೇಖನವನ್ನು ಕರ್ನಾಟಕ ವಿವಿ ಇತ್ತೀಚೆಗೆ ಕೈ ಬಿಟ್ಟಿದ್ದರೂ ಕವಿವಿ ಕೆಲ ಸಂಶೋಧನಾ ವಿದ್ಯಾರ್ಥಿಗಳ ಹಾಗೂ ವಿವಿ ಕೆಲ ಸಂಘಟನೆಗಳ ಒಣ ಪ್ರತಿಷ್ಠೆಯಿಂದಾಗಿ ಬುಧವಾರ ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ನಿಗದಿಯಾಗಿದ್ದ ಅರಿವೇ ಗುರು ಪ್ರಶಸ್ತಿ ಸಮಾರಂಭ ಮುಂದೂಡಬೇಕಾಯಿತು.

ಅನವಶ್ಯಕ ಗೊಂದಲ:

ಕವಿವಿ ಕೊಡಮಾಡುವ ಅರಿವೇ ಗುರು 2024ನೇ ಸಾಲಿನ ಪ್ರಶಸ್ತಿಯನ್ನು ಕಲಾ ಕ್ಷೇತ್ರದಿಂದ ಡಾ. ಚಂದ್ರಶೇಖರ ಕಂಬಾರ, ವಿಜ್ಞಾನ ಕ್ಷೇತ್ರದಿಂದ ಡಾ. ವಿ.ಜಿ. ತಳವಾರ ಹಾಗೂ ಕವಿವಿ ಎಮರಿಟೀಸ್ ಪ್ರಾಧ್ಯಾಪಕ ಪ್ರೊ. ಎನ್.ಎಂ. ಬುಜುರ್ಕೆ ಅವರನ್ನು ಆಯ್ಕೆ ಮಾಡಲಾಗಿತ್ತು. ನಿಗದಿಯಂತೆ ಪ್ರಶಸ್ತಿ ಪುರಸ್ಕೃತರು ಸಹ ವಿವಿ ಆವರಣಕ್ಕೆ ಬಂದಿದ್ದರು. ಅವರನ್ನು ಮೆರವಣಿಗೆ ಮೂಲಕ ಸುವರ್ಣ ಮಹೋತ್ಸವ ಭವನಕ್ಕೆ ಕರೆದೊಯ್ಯಲು ಎಲ್ಲ ರೀತಿಯ ಸಿದ್ಧತೆಯೂ ಆಗಿತ್ತು. ಆದರೆ, ವಿವಾದಿತ ಪಠ್ಯದ ಅಭ್ಯಾಸ ಮಂಡಳಿಯ ಅಧ್ಯಕ್ಷರು ಹಾಗೂ ಕನ್ನಡ ವಿಭಾಗದ ಅಧ್ಯಕ್ಷ ಡಾ. ಕೃಷ್ಣಾ ನಾಯಕ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಗೊಂದಲ ಉಂಟಾಗಲಿದೆ ಎಂದು ಮಂಗಳವಾರ ಸಂಜೆ ಕುಲಸಚಿವರಿಗೆ ಕವಿವಿ ಸಂಶೋಧನಾ ವಿದ್ಯಾರ್ಥಿಗಳ ಸಂಘವು ಪತ್ರದ ಮೂಲಕ ಮನವಿ ಸಲ್ಲಿಸಿದ್ದೇ ದೊಡ್ಡ ಅವಾಂತರಕ್ಕೆ ಕಾರಣವಾಯಿತು.

ಹಠಕ್ಕೆ ಬಿದ್ದ ಕೆಲವರು:

ಈ ಪತ್ರದ ಹಿನ್ನೆಲೆಯಲ್ಲಿ ಉಪ ನಗರ ಪೊಲೀಸರಿಗೆ ಮಾಹಿತಿ ನೀಡಿದ ಕುಲಸಚಿವರು ಗೊಂದಲ ಆಗದಂತೆ ಬಂದೋಬಸ್ತ್‌ ಕೇಳಿದ್ದರು. ಪೊಲೀಸರು ಸೂಕ್ತ ಬಂದೋಬಸ್ತ್‌ ಸಹ ವಹಿಸಿದ್ದರು. ಇನ್ನೇನು ಕಾರ್ಯಕ್ರಮ ಶುರು ಆಗಬೇಕು ಎನ್ನುವಷ್ಟರಲ್ಲಿ ಪ್ರೊ. ಕೃಷ್ಣಾ ನಾಯಕ ಅವರು ಭಾಗವಹಿಸಬೇಕು ಎಂದು ಕೆಲ ವಿದ್ಯಾರ್ಥಿಗಳು ವಾದ ಮಂಡಿಸಿದರೆ, ಇನ್ನು ಕೆಲವರು ಬೇಡ ಎನ್ನುವ ಹಠದಿಂದ ವಿಶ್ವವಿದ್ಯಾಲಯವು ಸಿಂಡಿಕೇಟ್‌ ಸಭೆ ಮಾಡಿತಾದರೂ ಸರಿಯಾಗಿ ನಿರ್ಣಯ ತೆಗೆದುಕೊಳ್ಳದೇ ಅರಿವೇ ಗುರು ಪ್ರಶಸ್ತಿ ಪ್ರದಾನ ಸಮಾರಂಭವನ್ನೇ ಮುಂದೂಡಿತು.

ಕುಲಪತಿಗಳ ಸ್ಪಷ್ಟನೆ:

ಬೆಳಗು ಪಠ್ಯ ವಿವಾದಕ್ಕೆ ಕಾರಣರಾದರು ಎನ್ನಲಾದ ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿರುವ ಕಾರಣಕ್ಕೆ ಕೆಲ ವಿದ್ಯಾರ್ಥಿಗಳು ಕಾರ್ಯಕ್ರಮ ಬಹಿಷ್ಕಾರ ಮಾಡುವುದಾಗಿ ಹೇಳಿದ್ದರಿಂದ ಅರಿವೇ ಗುರು ಪ್ರಶಸ್ತಿ ಪ್ರದಾನವನ್ನು ಮುಂದೂಡಲಾಗಿದೆ. ಮುಂದೂಡಿಕೆ ದಿನಾಂಕ ಇನ್ನೂ ನಿಗದಿ ಮಾಡಿಲ್ಲ. ಯಾವುದೇ ಸಮಸ್ಯೆ ಇಲ್ಲದೆ ಕಾರ್ಯಕ್ರಮ ನಡೆಸಬೇಕು ಎಂದು ಹಲವು ಗಂಟೆಗಳ ಕಾಲ ಚರ್ಚೆ ನಡೆಸಿದೆವು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಇರುವ ಸಮಾರಂಭದಲ್ಲಿ ಗೊಂದಲ ಸೃಷ್ಟಿಯಾದರೆ, ಕವಿವಿ ಘನತೆಗೆ ಧಕ್ಕೆ ಬರಲಿದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದೇವೆ. ಪ್ರಶಸ್ತಿ ಪುರಸ್ಕೃತರನ್ನು ವಾಪಸ್‌ ಕಳುಹಿಸಿದ್ದಕ್ಕೆ ನಮಗೂ ಬೇಸರವಿದೆ ಎಂದು ಕವಿವಿ ಪ್ರಭಾರ ಕುಲಪತಿ ಡಾ. ಜಯಶ್ರೀ ಎಸ್. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಕಾಯ್ದು ಹೊರ ನಡೆದ ಕಂಬಾರ

ಪ್ರತಿಷ್ಠಿತ ಕರ್ನಾಟಕ ವಿವಿ ಅರಿವೇ ಗುರು ಪ್ರಶಸ್ತಿ ಸ್ವೀಕರಿಸಲು ನಗು ಮುಖದಿಂದ ಬಂದಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಹಾಗೂ ಗಣ್ಯರಾದ ಡಾ. ವಿ.ಜಿ. ತಳವಾರ ಮತ್ತು ಪ್ರೊ. ಎನ್.ಎಂ. ಬುಜುರ್ಕೆ ವಿಶ್ವವಿದ್ಯಾಲಯದ ಆಂತರಿಕ ಗೊಂದಲ, ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕಿದ ವಿವಿ ನಿಲುವಿನಿಂದ ಬೇಸರದಿಂದ ಹೊರ ನಡೆದರು. ಬೆಳಗ್ಗೆ 11ಕ್ಕೆ ವಿವಿ ಆವರಣಕ್ಕೆ ಆಗಮಿಸಿದ್ದ ಪ್ರಶಸ್ತಿ ಪುರಸ್ಕೃತರು ಮಧ್ಯಾಹ್ನ 12.30ರ ವರೆಗೂ ಕುಲಪತಿಗಳ ಕಚೇರಿಯಲ್ಲಿ ಕಾಯ್ದು ಕಾಯ್ದು ಸುಸ್ತಾಗಿದ್ದರು. ಕಾರ್ಯಕ್ರಮ ಮುಂದೂಡಿದ್ದೇವೆ ಎಂದು ಕುಲಪತಿಗಳು ಕಂಬಾರರಿಗೆ ತಿಳಿಸಿದಾಗ, ಪದೇ ಪದೇ ಬರಲು ನಮಗೇನು ಕೆಲಸವಿಲ್ಲವೇ ಎಂದು ಬೇಸರ ನುಡಿ ಹೇಳುತ್ತಲೇ ಹೊರ ನಡೆದರು. ಈ ಮಧ್ಯೆ ಕಂಬಾರಗೆ ಆರೋಗ್ಯ ಸಮಸ್ಯೆ ಇದೆ. ವೈದ್ಯರ ಬಳಿ ಕರೆದುಕೊಂಡು ಹೋಗಲಾಗುತ್ತಿದೆ ಎಂಬ ಸುದ್ದಿ ಹರಡಿದ್ದರಿಂದ, ಕಂಬಾರರ ಆಪ್ತರು ಆರೋಗ್ಯ ವಿಚಾರಣೆಗೆ ದೂರವಾಣಿ ಕರೆ ಮಾಡಿದ್ದು ಕಂಬಾರರಿಗೆ ಬೇಸರ ತರಿಸಿತು.