ಸಾರಾಂಶ
ಯಲಬುರ್ಗಾ:
ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಿರುವುದು ದೇಶದಲ್ಲಿಯೇ ಮೊದಲ ಗ್ಯಾರಂಟಿಯಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಧೀರ ಕೊರ್ಲಹಳ್ಳಿ ಹೇಳಿದರು.ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಪ್ರಯಾಣ ಸಂಖ್ಯೆ ೫೦೦ ಕೋಟಿ ದಾಟಿದ ಸಂಭ್ರಮಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ೫೦೦ ಮಹಿಳೆಯರು ಹಾಗೂ ಯಲಬುರ್ಗಾ ಕ್ಷೇತ್ರದಲ್ಲಿ ಒಟ್ಟು ೧.೩೨ ಕೋಟಿ ಮಹಿಳೆಯರಿಗೆ ಶಕ್ತಿ ಯೋಜನೆ ಪ್ರಯೋಜನವಾಗಿರುವುದು ಹೆಮ್ಮೆಯ ಸಂಗತಿ. ಈ ಯೋಜನೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸಹಾಯವಾಗಿದೆ. ಶಿಕ್ಷಣ ಮತ್ತು ಇತರ ಅಗತ್ಯ ಚಟುವಟಿಕೆಗಳಿಗೆ ಸುಲಭವಾಗಿ ಮತ್ತು ವೆಚ್ಚವಿಲ್ಲದೆ ಪ್ರಯಾಣಿಸಲು ಸಾಧ್ಯವಾಗಿದ್ದು, ಕಾಂಗ್ರೆಸ್ ಸರ್ಕಾರ ಈ ವರೆಗೂ ಶಕ್ತಿ ಯೋಜನೆ ಮುಂದುವರಿಯಲಿದೆ ಎಂದರು.
ಪಪಂ ಸದಸ್ಯೆ ಡಾ. ನಂದಿತಾ ದಾನಾರಡ್ಡಿ ಮಾತನಾಡಿ, ಶಕ್ತಿ ಯೋಜನೆಯ ಯಶಸ್ಸನ್ನು ಆಚರಿಸಲು ಸರ್ಕಾರ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಸಂಭ್ರಮಿಸಲಾಗುತ್ತಿದೆ. ತಾಲೂಕಿನಲ್ಲಿ ಶಕ್ತಿ ಯೋಜನೆ ಶೇ. ೯೯ರಷ್ಟು ಸಾಧನೆಯಾಗಿದೆ. ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಯೋಜನೆಯನ್ನು ಎಲ್ಲರಿಗೂ ತಲುಪಿಸುವಲ್ಲಿ ಶ್ರಮವಹಿಸಿದ್ದಾರೆ ಎಂದರು.ಇದೇ ವೇಳೆ ಬಸ್ಗೆ ಪೂಜೆ ಸಲ್ಲಿಸಿ, ಪ್ರಯಾಣಿಕರಿಗೆ ಸಿಹಿ ಹಂಚಲಾಯಿತು. ಈ ವೇಳೆ ತಾಪಂ ಇಒ ಸಂತೋಷ ಪಾಟೀಲ್, ಘಟಕ ವ್ಯವಸ್ಥಾಪಕ ಸಣ್ಣಕುಂಟೆಪ್ಪ ಆಲೂರ, ಪ್ರಮುಖರಾದ ಶರಣಪ್ಪ ಗಾಂಜಿ, ಶಿವನಗೌಡ ದಾನರಡ್ಡಿ, ಕೆರಿಬಸಪ್ಪ ನಿಡಗುಂದಿ, ಶರಣಗೌಡ ಬಸಾಪುರ, ಪುನೀತ ಕೊಪ್ಪಳ, ಹುಲಗಪ್ಪ ಬಂಡಿವಡ್ಡರ್, ಬೀರಪ್ಪ ಗಾಣಧಾಳ ಸೇರಿದಂತೆ ಮತ್ತಿತರರು ಇದ್ದರು.