ಸಿಎಂ ವಿಶೇಷ ಅನುದಾನದ ನೆಪದಲ್ಲಿ 50 ಲಕ್ಷ ಧೋಖಾ!

| N/A | Published : Nov 17 2025, 07:19 AM IST

Money

ಸಾರಾಂಶ

ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಐದು ಕೋಟಿ ರು. ಮಂಜೂರು ಮಾಡಿಸುತ್ತೇನೆ ಎಂದು ವ್ಯಕ್ತಿಯೊಬ್ಬರನ್ನು ನಂಬಿಸಿ, ಮುಂಗಡವಾಗಿ ಕಮಿಷನ್ 50 ಲಕ್ಷ ರು. ಪಡೆದು ವಂಚಿಸಿದ ಆರೋಪದಡಿ ಅನ್ನಪೂಣೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

 ಬೆಂಗಳೂರು :  ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಐದು ಕೋಟಿ ರು. ಮಂಜೂರು ಮಾಡಿಸುತ್ತೇನೆ ಎಂದು ವ್ಯಕ್ತಿಯೊಬ್ಬರನ್ನು ನಂಬಿಸಿ, ಮುಂಗಡವಾಗಿ ಕಮಿಷನ್ 50 ಲಕ್ಷ ರು. ಪಡೆದು ವಂಚಿಸಿದ ಆರೋಪದಡಿ ಅನ್ನಪೂಣೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

ಹರೀಶ್ ಹಾಗೂ ಸಂದೀಪ್ ಎಂಬುವರ ವಿರುದ್ಧ ಪ್ರಕರಣ

ನಾಗರಬಾವಿ ನಿವಾಸಿ ವೆಂಕಟೇಶ್ ಬಾಬು ಎಂಬುವರು ನೀಡಿದ ದೂರಿನನ್ವಯ ಹರೀಶ್ ಹಾಗೂ ಸಂದೀಪ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. 2024ರ ಅಕ್ಟೋಬರ್‌ನಲ್ಲಿ ದೂರುದಾರನ ಮನೆಗೆ ಹೋಗಿದ್ದ ಆರೋಪಿ ಹರೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಆಪ್ತ ಸಂದೀಪ್ ಎಂಬಾತನ ಪರಿಚಯವಿದೆ. ಎಂಎಲ್‌ಎ ಲೇಟರ್ ಹೆಡ್ ಮೇಲೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಐದು ಕೋಟಿ ರು. ಬಿಡುಗಡೆ ಮಾಡಿಸಿ ಕೊಡುತ್ತೇನೆ ಎಂದು ನಂಬಿಸಿದ್ದ. ಇದಕ್ಕೆ ಶೇ.10 ರಂತೆ 50 ಲಕ್ಷ ರು.ಗೆ ಬೇಡಿಕೆ ಇಟ್ಟಿದ್ದ. ಅದಕ್ಕೆ ಒಪ್ಪಿದ್ದ ವೆಂಕಟೇಶ್‌ಬಾಬು ವಂಚಕ ಹರೀಶ್‌ಗೆ 2024ರ ನವೆಂಬರ್‌ನಲ್ಲಿ 25 ಲಕ್ಷ ರು. ನೀಡಿದ್ದರು. 2025ರ ಮಾರ್ಚ್‌ನಲ್ಲಿ ಪತ್ರ ಬಿಡುಗಡೆ ಮಾಡುವುದಾಗಿ ಬಾಕಿ ಇದ್ದ 25 ಲಕ್ಷ ರು. ಗಳನ್ನು ಮತ್ತೊಬ್ಬ ಆರೋಪಿ ಸಂದೀಪ್‌ಗೆ ನೀಡಿದ್ದರು.

ಹಣ ಬಿಡುಗಡೆ ಮಾಡಿಸಿರಲಿಲ್ಲ

ಬಳಿಕ ಕಳೆದ ಆರು ತಿಂಗಳಿಂದ 2-3 ಬಾರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೇರಿದ ಪತ್ರಗಳನ್ನು ಆರೋಪಿಗಳು ನೀಡಿದ್ದರು. ಆದರೆ, ಹಣ ಬಿಡುಗಡೆ ಮಾಡಿಸಿರಲಿಲ್ಲ. ಹೀಗೆ ಪ್ರತಿ ಬಾರಿಯೂ ಇಲ್ಲ ಸಲ್ಲದ ಸಬೂಬು ಹೇಳುತ್ತಿದ್ದರು. ಅದರಿಂದ ಬೇಸತ್ತು ಕಳೆದ ಸೆ.19 ರಂದು ವೆಂಕಟೇಶ್ ಬಾಬು ಆರ್‌ಡಿಪಿಆರ್ ಕಚೇರಿಗೆ ಹೋಗಿ ವಿಚಾರಿಸಿದಾಗ ಇದು ನಕಲಿ ಪತ್ರ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಹರೀಶ್‌ಗೆ ಕರೆ ಮಾಡಿದಾಗ ಆತನ ಮೊಬೈಲ್‌ ನಂಬರ್ ಸ್ವಿಚ್ಡ್ ಆಫ್‌ ಆಗಿತ್ತು. ನಂತರ ಸಂದೀಪ್ ಮತ್ತು ಹರೀಶ್‌ ವಿರುದ್ಧ ದೂರು ನೀಡಿದ್ದಾರೆ.

ವಂಚನೆಗೆ ಸಂಬಂಧಿಸಿದಂತೆ ವೆಂಕಟೇಶ್‌ ಬಾಬು ನೀಡಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲು। 5 ಕೋಟಿ ಕೊಡಿಸುತ್ತೇನೆಂದು ನಂಬಿಸಿ ಶೇ.10 ರಂತೆ 50 ಲಕ್ಷ ಕಮಿಷನ್‌ಗೆ ಗಾಳ।

-ನಾಗರಬಾವಿ ನಿವಾಸಿ ವೆಂಕಟೇಶ್ ಬಾಬು ಎಂಬುವರು ನೀಡಿದ ದೂರಿನನ್ವಯ ಹರೀಶ್, ಸಂದೀಪ್ ಎಂಬುವರ ವಿರುದ್ಧ ಪ್ರಕರಣ

- ಎಂಎಲ್‌ಎ ಲೇಟರ್ ಹೆಡ್ ಮೇಲೆ ಸಿಎಂ ವಿಶೇಷ ಅನುದಾನದಲ್ಲಿ 5 ಕೋಟಿ ಬಿಡುಗಡೆ ಮಾಡಿಸುತ್ತೇನೆ ಎಂದು ನಂಬಿಸಿದ್ದರು.

-ಇದಕ್ಕೆ ಶೇ.10 ರಂತೆ 50 ಲಕ್ಷ ರು.ಗೆ ಬೇಡಿಕೆ ಇಟ್ಟಿದ್ದರು. ಅದಕ್ಕೆ ಒಪ್ಪಿದ್ದ ವೆಂಕಟೇಶ್‌ಬಾಬು ವಂಚಕ ಹರೀಶ್‌ಗೆ 25 ಲಕ್ಷ ನೀಡಿದ್ದರು

- ನಂತರ 2025ರ ಮಾರ್ಚ್‌ನಲ್ಲಿ ಪತ್ರ ಬಿಡುಗಡೆ ಮಾಡುವುದಾಗಿ ಬಾಕಿ ಇದ್ದ 25 ಲಕ್ಷ ರು.ನ್ನು ಮತ್ತೊಬ್ಬ ಆರೋಪಿ ಸಂದೀಪ್‌ಗೆ ನೀಡಿದ್ದರು

- ಆದರೂ ಹಣ ಬಿಡುಗಡೆ ಮಾಡಿಸಿರಲಿಲ್ಲ. ಕೇಳಿದಾಗ ಸುಳ್ಳು ಹೇಳುತ್ತಿದ್ದರು. ಬೇಸತ್ತ ವೆಂಕಟೇಶ್ ಆರ್‌ಡಿಪಿಆರ್ ಕಚೇರಿ ವಿಚಾರಿಸಿದಾಗ ನಕಲಿ ಪತ್ರ ಪತ್ತೆ

Read more Articles on