ಸಾರಾಂಶ
ದಿ ಆರ್ಟ್ ಆಫ್ ಲಿವ್ಹಿಂಗ್ ಅಂತಾರಾಷ್ಟ್ರೀಯ ಕೇಂದ್ರವು ಸುವರ್ಣಮುಖಿ ನದಿ ಪುನರುಜ್ಜೀವನದ ಉದ್ದೇಶದಿಂದ ಆಯೋಜಿಸಿದ್ದ ಜಾಗೃತಿ ಕಾರ್ಯಾಗಾರವು ಯಶಸ್ವಿಯಾಗಿ ನೆರವೇರಿತು. ರವಿಶಂಕರ್ ಗುರೂಜಿ ನೇತೃತ್ವದಲ್ಲಿ ದಿ ಆರ್ಟ್ ಆಫ್ ಲಿವಿಂಗ್, ಕರ್ನಾಟಕ ಸರ್ಕಾರ ಮತ್ತು ಐಐಎಂ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಾಗಾರ
ಬೆಂಗಳೂರು : ದಿ ಆರ್ಟ್ ಆಫ್ ಲಿವ್ಹಿಂಗ್ ಅಂತಾರಾಷ್ಟ್ರೀಯ ಕೇಂದ್ರವು ಸುವರ್ಣಮುಖಿ ನದಿ ಪುನರುಜ್ಜೀವನದ ಉದ್ದೇಶದಿಂದ ಆಯೋಜಿಸಿದ್ದ ಜಾಗೃತಿ ಕಾರ್ಯಾಗಾರವು ಯಶಸ್ವಿಯಾಗಿ ನೆರವೇರಿತು. ಗುರುದೇವ್ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ದಿ ಆರ್ಟ್ ಆಫ್ ಲಿವಿಂಗ್, ಕರ್ನಾಟಕ ಸರ್ಕಾರ ಮತ್ತು ಐಐಎಂ ಬೆಂಗಳೂರು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಸರ್ಕಾರದ ಪ್ರತಿನಿಧಿಗಳು, ವಿಜ್ಞಾನಿಗಳು, ಪರಿಸರ ಪ್ರೇಮಿಗಳು, ಸಾರ್ವಜನಿಕರು ಪಾಲ್ಗೊಂಡು ನದಿ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ತಮ್ಮ ಸಲಹೆ, ಅಭಿಪ್ರಾಯ, ಕಾರ್ಯಸಾಧ್ಯತಾ ಕ್ರಮಗಳನ್ನು ಮಂಡಿಸಿದರು.
ಕಾರ್ಯಾಗಾರ ಉದ್ಘಾಟಿಸಿದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ಆರ್ಥಿಕ ಬೆಳವಣಿಗೆಗೆ ತ್ವರಿತ ನಗರ ವಿಸ್ತರಣೆ ಅಗತ್ಯ, ಆದರೆ ಇದು ಅಂತರ್ಜಲ ಮಟ್ಟವನ್ನು ಕಡಿಮೆ ಮಾಡಿದೆ. 65 ಮಿಲಿಯನ್ ಘನ ಅಡಿ ಸಂಗ್ರಹ ಸಾಮರ್ಥ್ಯದೊಂದಿಗೆ 216 ಚದರ ಕಿಲೋಮೀಟರ್ ಪೆರಿ-ಅರ್ಬನ್ ಪ್ರದೇಶವನ್ನು ಒಳಗೊಂಡಿರುವ ಈ ಜಲಾಶಯ ಮತ್ತು ಅದರ 110 ಸಂಬಂಧಿತ ಜಲಮೂಲಗಳು ಮತ್ತು 332 ಹೊಳೆಗಳು ಅಂತರ್ಜಲವನ್ನು ಪುನಃಸ್ಥಾಪಿಸಬಹುದು, ಮಳೆನೀರನ್ನು ಸಂಗ್ರಹಿಸಬಹುದು. ಸುತ್ತಮುತ್ತಲಿನ 69 ಹಳ್ಳಿಗಳಿಗೆ ಸುಸ್ಥಿರ ನೀರಿನ ಮೂಲವಾಗಬಹುದು. ಈ ಯೋಜನೆಯು ಕರ್ನಾಟಕಕ್ಕೆ ಮಾತ್ರವಲ್ಲದೆ ಭಾರತದಾದ್ಯಂತ ಇತರ ರಾಜ್ಯಗಳಿಗೂ ಮಾದರಿಯಾಗಿದೆ ಎಂದರು. ಜಲಜೀವನ್ ಮಿಷನ್ನ ಪ್ರೊ.ಗೋಪಾಲ್ನಾಯಕ್, ಈ ಯೋಜನೆಯನ್ನು ಯಶಸ್ವಿಗೊಳಿಸಲು ವರ್ತನೆಯಲ್ಲಿ ಬದಲಾವಣೆ ತರುವುದು ಅಗತ್ಯ. ಮತ್ತು ಮನಸ್ಥಿತಿಯಲ್ಲಿನ ಈ ಬದಲಾವಣೆಯನ್ನು ಮುನ್ನಡೆಸಲು ಆರ್ಟ್ ಆಫ್ ಲಿವಿಂಗ್ ಅತ್ಯುತ್ತಮ ಸ್ಥಳವಾಗಿದೆ ಎಂದು ಹೇಳಿದರು.
ಪಂಜಾಬ್ನ ಜಲ ಸಂರಕ್ಷಣಾವಾದಿ ಡಾ. ಜಗಜೀತ್ ಸಿಂಗ್ ಕೊಚಾರ್, ಭಾಗೀರಥ್ ಎನ್ಜಿಒ ಅಧ್ಯಕ್ಷ ಡಾ. ಪ್ರಕಾಶ್ ಕುಲಕರ್ಣಿ ಮತ್ತು ಪೃಥ್ವಿ ಇಕೋ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ನ ಎಂ.ಡಿ. ಶ್ರೀ ಕ್ರಿಸ್ ಮಧುಸೂದನ್, ಜಲ ಮಾಲಿನ್ಯವನ್ನು ತಗ್ಗಿಸಲು ನವೀನ ಪ್ರಕೃತಿ ಆಧಾರಿತ ವಿಧಾನಗಳ ಕುರಿತು ಮಾಹಿತಿ ನೀಡಿದರು. ಸುವರ್ಣಮುಖಿ ನದಿ ಪುನರುಜ್ಜೀವನ ಯೋಜನೆಯು ದಿ ಆರ್ಟ್ ಆಫ್ ಲಿವಿಂಗ್ನ, ನದಿಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಅಂತರ್ಜಲವನ್ನು ಪುನಃಸ್ಥಾಪಿಸುವ ವ್ಯಾಪಕ ರಾಷ್ಟ್ರೀಯ ಆಂದೋಲನದ ಭಾಗವಾಗಿದೆ. 2013 ರಿಂದ, ಈ ಸಂಸ್ಥೆಯು ಭಾರತದಾದ್ಯಂತ 70 ಕ್ಕೂ ಹೆಚ್ಚು ನದಿಗಳು ಮತ್ತು ಹೊಳೆಗಳ ಪುನರುಜ್ಜೀವನಕ್ಕೆ ನೇತೃತ್ವ ವಹಿಸಿದ್ದು, ಇದು 34.5 ದಶಲಕ್ಷಕ್ಕೂ ಹೆಚ್ಚು ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಬೆಂಗಳೂರು ಉಪಕ್ರಮವೊಂದೇ 216 ಚದರ ಕಿಲೋಮೀಟರ್ಗಳ ಜಲಾನಯನ ಪ್ರದೇಶದಾದ್ಯಂತ 110 ಜಲಮೂಲಗಳನ್ನು ಪುನರುಜ್ಜೀವನಗೊಳಿಸಲು ಸಜ್ಜಾಗಿದ್ದು, 69 ಹಳ್ಳಿಗಳ 9.3 ಲಕ್ಷ ಜನರು ಇದರ ಲಾಭ ಪಡೆಯಲಿದ್ದಾರೆ ಎಂದು ಆರ್ಟ್ ಆಫ್ ಲಿವ್ಹಿಂಗ್ ಮಾಹಿತಿ ನೀಡಿದೆ.