ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈದಿಗಳ ಸನ್ನಡತೆ ಆಧಾರದ ಮೇಲೆ ಬಿಡುಗಡೆ, ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ 1 ಸಾವಿರ ರು. ಪ್ರೋತ್ಸಾಹಧನ ವಿತರಣೆ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈದಿಗಳ ಸನ್ನಡತೆ ಆಧಾರದ ಮೇಲೆ ಬಿಡುಗಡೆ, ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ 1 ಸಾವಿರ ರು. ಪ್ರೋತ್ಸಾಹಧನ ವಿತರಣೆ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
- ಏನೇನು ನಿರ್ಧಾರ?
*ರಾಜ್ಯದ ವಿವಿಧ ಕೇಂದ್ರ ಕಾರಾಗೃಹದಲ್ಲಿರುವ 48 ಜೀವಾವಧಿ ಬಂದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ತೀರ್ಮಾನ
*ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿಯಾಗಿ ಒಂದು ಸಾವಿರ ರುಪಾಯಿ ಪ್ರೋತ್ಸಾಹದನ ನೀಡಲು ನಿರ್ಧಾರ
*ಬೆಳಗಾವಿ ಜಿಲ್ಲೆಯ ಬೆನಕನಹಳ್ಳಿ ಗ್ರಾಪಂ, ಹಿಂಡಲಂಗಾ ಗ್ರಾಪಂ ಹಾಗೂ ಹಿರೇಬಾಗೇವಾಡಿ ಗ್ರಾಪಂಗಳು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೆ
*ಕೇಂದ್ರದ 15ನೇ ಹಣಕಾಸು ಆಯೋಗದಡಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಆಧುನೀಕರಣಕ್ಕೆ 329 ಕೋಟಿ ರು. (ಕೇಂದ್ರದಿಂದ 247.42 ಕೋಟಿ, ರಾಜ್ಯದಿಂದ 82.47 ಕೊಟಿ ರು.) ನೀಡಲು ಒಪ್ಪಿಗೆ. ಮೊದಲ ಹಂತದಲ್ಲಿ 11 ಹೊಸ ಅಗ್ನಿಶಾಮಕ ಠಾಣೆ ಸ್ಥಾಪಿಸಲು, ವಾಹನಗಳು, ರಕ್ಷಣಾ ಉಪಕರಣಕ್ಕಾಗಿ 98.97 ಕೋಟಿ ರು. ಅನುಮೋದನೆ.
- ರಾಮನಗರ ಜಿಲ್ಲೆಯ ಗನಾಳು ಬಳಿಯ ಅರ್ಕಾವತಿ ನದಿಯಿಂದ ನೀರು ಎತ್ತಿ ರಾಮನಗರ ಮತ್ತು ಕನಕಪುರ ತಾಲೂಕಿನ 46 ಕೆರೆಗಳನ್ನು ತುಂಬಿಸುವ 110 ಕೋಟಿ ರು. ಯೋಜನೆಗೆ ಅನುಮೋದನೆ
- ಚನ್ನಪಟ್ಟಣ ತಾಲೂಕಿನಲ್ಲಿ ಸರಗೂರಿನಿಂದ ಹೊಸಪುರಕ್ಕೆ ಸೇತುವೆ ನಿರ್ಮಾಣ ಕಾಮಗಾರಿಗೆ 15 ಕೋಟಿ ರು. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಒಪ್ಪಿಗೆ
- ಮಾಗಡಿ, ರಾಮನಗರ, ಕುಣಿಗಲ್ ತಾಲೂಕುಗಳಿಗೆ ನೀರು ಪೂರೈಸಲು 90 ಕೋಟಿ ರು. ಮೊತ್ತದ ಸತ್ತೇಗಾಲ ಕುಡಿಯುವ ನೀರು ಯೋಜನೆಗೆ ಅನುಮೋದನೆ.
- ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಭವನದ ಕಟ್ಟಡ ನಿರ್ಮಾಣ ಉದ್ದೇಶಕ್ಕಾಗಿ ಅಣಕನೂರು ಗ್ರಾಮದ ಅನುಮೋದಿತ ಬಡಾವಣೆಯಲ್ಲಿ 3404 ಚ.ಮೀ. ವಿಸ್ತೀರ್ಣದ ನಿವೇಶನವನ್ನು ಉಚಿತವಾಗಿ ಮಂಜೂರು ಮಾಡಲು ನಿರ್ಣಯ.