ರಾಜ್ಯದ 16 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಶೀತ ಅಲೆ ಭೀತಿ ಎದುರಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಇದೀಗ ದಕ್ಷಿಣ ಒಳನಾಡು ಹಾಗೂ ಮಲೆನಾಡು ಜಿಲ್ಲೆಗಳಿಗೆ ಶೀತ ಅಲೆಯ ಭೀತಿ ಎದುರಾಗಿದೆ

 ಬೆಂಗಳೂರು : ರಾಜ್ಯದ 16 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಶೀತ ಅಲೆ ಭೀತಿ ಎದುರಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಇದೀಗ ದಕ್ಷಿಣ ಒಳನಾಡು ಹಾಗೂ ಮಲೆನಾಡು ಜಿಲ್ಲೆಗಳಿಗೆ ಶೀತ ಅಲೆಯ ಭೀತಿ ಎದುರಾಗಿದ್ದು, ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರಗಿ, ರಾಯಚೂರು, ಯಾದಗಿರಿ, ಧಾರಾವಾಡ, ಗದಗ, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಶೀತ ಅಲೆ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಶುಭ್ರಾಕಾಶ ಇರುವುದರಿಂದ ಬೆಳಗಿನ ಜಾವದಲ್ಲಿ ದಟ್ಟ ಮಂಜು ಬೀಳುವ ಸಾಧ್ಯತೆ ಇದೆ. ಬೀದರ್‌, ಬೆಳಗಾವಿ, ವಿಜಯಪುರ, ಧಾರಾವಾಡ, ರಾಯಚೂರು, ಗದಗ, ಹಾಸನ, ಚಿಂತಾಮಣಿಯಲ್ಲಿ ಕನಿಷ್ಠ ಉಷ್ಣಾಂಶ 7 ರಿಂದ 10.4 ಡಿಗ್ರಿ ಸೆಲ್ಸಿಯಸ್‌, ಹಾವೇರಿ, ಕಲಬುರಗಿ ಹಾಗೂ ಕೊಪ್ಪಳದಲ್ಲಿ 10.5 ರಿಂದ 12 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಬೀದರಲ್ಲಿ 7.4 ಡಿಗ್ರಿ ಸೆಲ್ಸಿಯಸ್‌ ದಾಖಲು:

ಬೀದರ್‌ನಲ್ಲಿ ಕಳೆದ ಎರಡು ದಿನಗಳಿಂದ ಕನಿಷ್ಠ ಉಷ್ಣಾಂಶ 9 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿತ್ತು. ಶುಕ್ರವಾರ ಇನ್ನೂ ಕಡಿಮೆಯಾಗಿದ್ದು, 7.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಇದು ವಾಡಿಕೆ ಪ್ರಮಾಣಕ್ಕಿಂತ ಬರೊಬ್ಬರಿ 7.9 ಡಿಗ್ರಿ ಸೆಲ್ಸಿಯಸ್‌ ಕಡಿಮೆ. ಗರಿಷ್ಠ ಉಷ್ಣಾಂಶದಲ್ಲಿಯೂ ಬದಲಾವಣೆಯಾಗಿದ್ದು, ಶುಕ್ರವಾರ 27.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಇದು ವಾಡಿಕೆ ಪ್ರಮಾಣಕ್ಕಿಂತ 1.4 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಶುಕ್ರವಾರ ಪ್ರಮುಖ ನಗರದ ಕನಿಷ್ಠ ಉಷ್ಣಾಂಶ ವಿವರ (ಡಿಗ್ರಿ ಸೆಲ್ಸಿಯಸ್‌)

ಜಿಲ್ಲೆ ದಾಖಲಾದ ಕನಿಷ್ಠ ಉಷ್ಣಾಂಶ ಇಳಿಕೆ ಪ್ರಮಾಣ

ಬೀದರ್ 7.4 7.9

ಬೆಳಗಾವಿ 8.2 6.7

ಧಾರಾವಾಡ 8.5 6.1

ವಿಜಯಪುರ 8.4 6.9

ರಾಯಚೂರು 9.0 7.7

ಗದಗ 9.8 6.4

ಹಾಸನ 9.6 5.1

ಬೆಂಗಳೂರು 15 1.4