ಸಾರಾಂಶ
ಅತಿಥಿ ಶಿಕ್ಷಕರಿಗೆ ನಾವು ಕೊಡುವುದೇ ಕಡಿಮೆ ಸಂಬಳ. ತಾಂತ್ರಿಕ ಸಮಸ್ಯೆಯಿಂದಾಗಿ ಕೆಲ ತಿಂಗಳದಿಂದ ಅವರಿಗೆ ಸಂಬಳ ಆಗಿರಲಿಲ್ಲ. ಈಗ ಎಲ್ಲಾ ಅತಿಥಿ ಶಿಕ್ಷಕರಿಗೂ ಬಾಕಿ ಇರುವ ವೇತನ ಬಿಡುಗಡೆ ಮಾಡುತ್ತೇವೆ. ಸಂಬಳ ನಿಲ್ಲಿಸುವ ಪ್ರಶ್ನೆ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ : ಅತಿಥಿ ಶಿಕ್ಷಕರಿಗೆ ನಾವು ಕೊಡುವುದೇ ಕಡಿಮೆ ಸಂಬಳ. ತಾಂತ್ರಿಕ ಸಮಸ್ಯೆಯಿಂದಾಗಿ ಕೆಲ ತಿಂಗಳದಿಂದ ಅವರಿಗೆ ಸಂಬಳ ಆಗಿರಲಿಲ್ಲ. ಈಗ ಎಲ್ಲಾ ಅತಿಥಿ ಶಿಕ್ಷಕರಿಗೂ ಬಾಕಿ ಇರುವ ವೇತನ ಬಿಡುಗಡೆ ಮಾಡುತ್ತೇವೆ. ಸಂಬಳ ನಿಲ್ಲಿಸುವ ಪ್ರಶ್ನೆ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಕ್ಕಳಿಗೆ ಕೌಶಲ್ಯ ಭರಿತ ಶಿಕ್ಷಣ ನೀಡಲು ಒತ್ತು ನೀಡುತ್ತಿದ್ದೇವೆ. ಕಲಿಕೆಗೆ ಪೂರಕವಾದ ಹೊಸ ವಿಧಾನಗಳನ್ನು ಕೂಡ ಅಳವಡಿಸಿ ಮಕ್ಕಳಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತಿದ್ದೇವೆ ಎಂದರು.
ಬಜೆಟ್ನಲ್ಲಿ ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ಕೇಳಿದ್ದೇನೆ. ಪ್ರಮುಖವಾಗಿ ನೂತನ ಕ್ಲಾಸ್ ರೂಮ್ಗಳು ಮತ್ತು ಶಿಕ್ಷಕರ ನೇಮಕಾತಿಯ ಅಗತ್ಯವಿದೆ. ಈ ಬಗ್ಗೆಯೂ ಮುಖ್ಯಮಂತ್ರಿಗಳಿಗೆ ಬೇಡಿಕೆ ಇಟ್ಟಿದ್ದೇನೆ ಕಲ್ಯಾಣ ಕರ್ನಾಟಕದ ನೇಮಕಾತಿಯಲ್ಲಿ ಶೇ.80ರಷ್ಟು ನೇಮಕ ಮಾಡಲು ಅನುಮತಿ ಸಿಕ್ಕಿದೆ. ಕಳೆದ ಸಾಲಿನಲ್ಲಿ ಸುಮಾರು ₹1500 ಕೋಟಿ ಶಿಕ್ಷಣ ಇಲಾಖೆಗೆ ಅನುದಾನ ಬಂದಿದೆ ಎಂದರು.
ಗ್ರೇಸ್ ಮಾರ್ಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ 2023ರ ಪಾಲಿಸಿಯನ್ನೇ ಅನುಸರಿಸಲಾಗುವುದು. ಶಾಲೆಯಲ್ಲಿ ಮೊಟ್ಟೆ ತಿನ್ನದ ಮಕ್ಕಳಿಗೆ ಚಿಕ್ಕಿ ಬದಲು ಬಾಳೆಹಣ್ಣು ನೀಡಲು ತೀರ್ಮಾನಿಸಲಾಗಿದೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಸರ್ಕಾರ ಅನುಮತಿ ನೀಡುವ ವಿಚಾರ ಕೋರ್ಟ್ನಲ್ಲಿದೆ. ಈ ಬಗ್ಗೆ ನಾನೇನು ಹೇಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅತಿಥಿ ಶಿಕ್ಷಕರಿಗೆ ಮತ್ತು ಅಡಿಗೆಯವರಿಗೆ ಕೂಡ ಸಂಬಳ ಹೆಚ್ಚಳಕ್ಕೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದು ಹೇಳಿದರು.