ಎಕ್ಸ್‌ಪ್ರೆಸ್ ಕೆನಾಲ್ ಹೋರಾಟ : ಗೃಹ ಸಚಿವ ಜಿ. ಪರಮೇಶ್ವರ್‌ ಮನೆಗೆ ಮುತ್ತಿಗೆ ಯತ್ನ

| Published : Dec 09 2024, 09:46 AM IST

Dr G parameshwar

ಸಾರಾಂಶ

ಅವೈಜ್ಞಾನಿಕ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಕೈಬಿಡಬೇಕಂದು ಆಗ್ರಹಿಸಿ ನಮ್ಮ ನೀರು-ನಮ್ಮ ಹಕ್ಕು ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್‌ ಹೋರಾಟ ತೀವ್ರವಾಗಿದ್ದು, ಭಾನುವಾರ ಗೃಹ ಸಚಿವ ಜಿ. ಪರಮೇಶ್ವರ್‌ ಮನೆಗೆ ಮುತ್ತಿಗೆ ಯತ್ನ ನಡೆಸಲಾಗಿದೆ.

ತುಮಕೂರು: ಅವೈಜ್ಞಾನಿಕ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಕೈಬಿಡಬೇಕಂದು ಆಗ್ರಹಿಸಿ ನಮ್ಮ ನೀರು-ನಮ್ಮ ಹಕ್ಕು ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್‌ ಹೋರಾಟ ತೀವ್ರವಾಗಿದ್ದು, ಭಾನುವಾರ ಗೃಹ ಸಚಿವ ಜಿ. ಪರಮೇಶ್ವರ್‌ ಮನೆಗೆ ಮುತ್ತಿಗೆ ಯತ್ನ ನಡೆಸಲಾಗಿದೆ.

ಗುಬ್ಬಿ ತಾಲೂಕು ಸಾಗರನಹಳ್ಳಿ ಗೇಟ್‌ನಿಂದ ಆರಂಭಗೊಂಡು ಎರಡು ದಿನ ಪಾದಯಾತ್ರೆ ನಡಸಿ ತುಮಕೂರು ತಲುಪಿದ್ದು, ಇದೇ ವೇಳೆ ಹೆಗ್ಗೆರೆ ಬಳಿ ಇರುವ ಜಿ.ಪರಮೇಶ್ವರ್‌ರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದರು.

ತುಮಕೂರಲ್ಲಿ ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ಯಾವುದೇ ಕಾರಣಕ್ಕೂ ಪೈಪ್‌ಲೈನ್ ಮೂಲಕ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ರಕ್ತಪಾತ, ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಗುಡುಗಿದರು. ಸೋಮವಾರದಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭವಾಗಲಿದೆ.

ಏನಿದು ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ?

ಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನದಿ ನೀರನ್ನು ಗುಬ್ಬಿ ತಾಲೂಕಿನ ಡಿ. ರಾಂಪುರದಿಂದ ಕುಣಿಗಲ್ ಮಾರ್ಗವಾಗಿ ಮಾಗಡಿಗೆ ಪೈಪ್‌ಲೈನ್ ಮೂಲಕ ಕೊಂಡೊಯ್ಯುವ ಯೋಜನೆ ಇದಾಗಿದೆ. ಈ ಯೋಜನೆ ಜಾರಿಯಾದರೆ ಗುಬ್ಬಿ, ತುರುವೇಕೆರೆ, ಸಂಪಿಗೆ, ನಿಟ್ಟೂರು, ತುಮಕೂರು ನಗರ, ಗ್ರಾಮಾಂತರ, ಮಧುಗಿರಿ, ಶಿರಾ, ಕೊರಟಗೆರೆಯ 100 ಕಿ.ಮೀ. ವ್ಯಾಪ್ತಿಯಲ್ಲಿ ನೀರಿಗೆ ತೀವ್ರ ಅಭಾವ ಉಂಟಾಗುತ್ತದೆ ಎಂಬ ಆತಂಕವಿದೆ.