ಖ್ಯಾತ ನಟಿ, ನಿರೂಪಕಿ ಅಪರ್ಣಾ ವಿಧಿವಶ

| Published : Jul 12 2024, 08:53 AM IST

aparna vastarey

ಸಾರಾಂಶ

ಗುರುವಾರ ರಾತ್ರಿ ಕನ್ನಡಿಗರ ಪಾಲಿಗೆ ಆಘಾತಕಾರಿ ಸುದ್ದಿಯೊಂದು ಬಂದಿದೆ. ತಮ್ಮ ಕಂಚಿನ ಕಂಠದಿಂದ ಮನೆಮಾತಾಗಿದ್ದ ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣಾ (58) ಇಹಲೋಕ ತ್ಯಜಿಸಿದ್ದಾರೆ.

ಬೆಂಗಳೂರು :  ಗುರುವಾರ ರಾತ್ರಿ ಕನ್ನಡಿಗರ ಪಾಲಿಗೆ ಆಘಾತಕಾರಿ ಸುದ್ದಿಯೊಂದು ಬಂದಿದೆ. ತಮ್ಮ ಕಂಚಿನ ಕಂಠದಿಂದ ಮನೆಮಾತಾಗಿದ್ದ ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣಾ (58) ಇಹಲೋಕ ತ್ಯಜಿಸಿದ್ದಾರೆ.

ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.

ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಗಣ್ಯರು, ಚಿತ್ರರಂಗ ಹಾಗೂ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಬನಿ ಮಿಡಿದಿದ್ದಾರೆ.

ನಟನೆ, ನಿರೂಪಣೆ ಮೂಲಕ ಖ್ಯಾತಿ:

1984ರಲ್ಲಿ ತೆರೆಕಂಡ ಮಸಣದ ಹೂವು ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ್ದ ಅಪರ್ಣಾ ಅವರು, 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಕಾರ್ಯಕ್ರಮಗಳ ನಿರೂಪಣೆ, ನಂತರದಲ್ಲಿಯು ರೇಡಿಯೋ ಮತ್ತು ಅನೇಕ ಖಾಸಗಿ ಟಿವಿ ಕಾರ್ಯಕ್ರಮಗಳ ನಿರೂಪಣೆಯನ್ನು ನಡೆಸಿಕೊಟ್ಟಿದ್ದರು. ಸಿನಿಮಾ, ಧಾರವಾಹಿಗಳಲ್ಲಿ ನಟನೆ, ಸಂಗೀತ, ನೃತ್ಯ ಸೇರಿದಂತೆ ವಿವಿಧ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು, ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಿದ್ದ ಅಪರ್ಣಾ ಅವರ ಸೌಮ್ಯವಾದ ಧ್ವನಿಯೇ ಆಕರ್ಷಣೆಯಾಗಿತ್ತು.

ಬೆಂಗಳೂರು ಮೆಟ್ರೋ ರೈಲಿನಲ್ಲಿ ಘೋಷಣೆಗಳಿಗೆ ಹಾಗೂ ಹಲವಾರು ಬಸ್‌ ನಿಲ್ದಾಣಗಳಲ್ಲಿನ ಘೋಷಣೆಗಳಿಗೆ ಅಪರ್ಣಾ ಅವರು ಧ್ವನಿ ನೀಡಿದ್ದಾರೆ. ಕನ್ನಡದ ಕೆಲವು ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. ಕಿರುತೆರೆಗಳಲ್ಲಿ ಮೂಡಲಮನೆ, ಮುಕ್ತ ಧಾರವಾಹಿಗಳಲ್ಲಿ ನಟಿಸಿ ರಾಜ್ಯದ ಮನೆ ಮಾತಾಗಿದ್ದರು. 1998ರಲ್ಲಿ ದೀಪಾವಳಿ ಕಾರ್ಯಕ್ರಮವೊಂದನ್ನು ಸತತವಾಗಿ 8 ತಾಸುಗಳ ಕಾಲ ನಿರೂಪಣೆ ಮಾಡುವ ಮೂಲಕ ವಿಶಿಷ್ಟ ದಾಖಲೆಯನ್ನು ಅಪರ್ಣಾ ನಿರ್ಮಿಸಿದ್ದರು.