ಸಾರಾಂಶ
ಶಾಲಾ ವಾಹನಗಳ ಚಾಲನೆ ವೇಳೆ ಪಾನಮತ್ತ ಚಾಲಕರು ಪತ್ತೆಯಾದ ಬೆನ್ನಲ್ಲೇ ಮಕ್ಕಳ ಸುರಕ್ಷತೆ ವಿಚಾರದಲ್ಲಿ ಲಘುವಾಗಿ ವರ್ತಿಸಿದರೆ ಆಡಳಿತ ಮಂಡಳಿಗಳು ಹೊಣೆಯಾಗಬೇಕಾಗುತ್ತದೆ ಎಂದು ಪೊಲೀಸ್ ಆಯುಕ್ತ ಸೀಮತ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು : ಶಾಲಾ ವಾಹನಗಳ ಚಾಲನೆ ವೇಳೆ ಪಾನಮತ್ತ ಚಾಲಕರು ಪತ್ತೆಯಾದ ಬೆನ್ನಲ್ಲೇ ಮಕ್ಕಳ ಸುರಕ್ಷತೆ ವಿಚಾರದಲ್ಲಿ ಲಘುವಾಗಿ ವರ್ತಿಸಿದರೆ ಆಡಳಿತ ಮಂಡಳಿಗಳು ಹೊಣೆಯಾಗಬೇಕಾಗುತ್ತದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ವಾಹನಗಳ ಪಾನಮತ್ತ ಚಾಲಕರ ಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.
ಶಾಲಾ ವಾಹನಗಳ ವಿರುದ್ಧ ಸಂಚಾರ ಪೊಲೀಸರು ಸೋಮವಾರ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಪಾನಮತ್ತ ಚಾಲಕರು ಪತ್ತೆಯಾಗಿದ್ದಾರೆ. ಈ ಹಿಂದಿನ ಕಾರ್ಯಾಚರಣೆಯಲ್ಲಿ 10-20 ಚಾಲಕರು ಪತ್ತೆಯಾಗುತ್ತಿದ್ದರು. ಆದರೆ ಈ ಬಾರಿ 58 ಚಾಲಕರು ಸಿಕ್ಕಿಬಿದ್ದಿದ್ದಾರೆ. ಇದೊಂದು ಆತಂಕ ಮೂಡಿಸುವ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈಗಾಗಲೇ ಪಾನಮತ್ತ ಚಾಲಕರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಇವರ ಕುರಿತು ಸಾರಿಗೆ ಇಲಾಖೆ ಹಾಗೂ ಶಾಲಾ ಆಡಳಿತ ಮಂಡಗಳಿಗಳಿಗೆ ಪತ್ರ ಬರೆಯುತ್ತೇವೆ. ಈ ಪಾನಮತ್ತ ಚಾಲಕರ ಪೈಕಿ ನಗರದ ಪ್ರತಿಷ್ಠಿತ ಶಾಲೆಗಳ ಚಾಲಕರು ಸೇರಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ ಎಂದು ಬೇಸರದಿಂದ ನುಡಿದರು.
ಶಾಲಾ ವಾಹನಗಳ ಚಾಲಕರ ಕುರಿತು ಪೂರ್ವಾಪರ ಮಾಹಿತಿ ಸಂಗ್ರಹಿಸಲಾಗುತ್ತದೆ. ಕೆಲ ಸಾರಿಗೆಗೆ ಶಾಲಾ ಆಡಳಿತ ಮಂಡಳಿಗಳು ಗುತ್ತಿಗೆ ನೀಡಿರುತ್ತವೆ. ಆದರೆ ಪಾನಮತ್ತ ಚಾಲಕರ ಬಗ್ಗೆ ಆಡಳಿತ ಮಂಡಳಿಗಳು ಸಹ ನಿಗಾವಹಿಸಬೇಕು. ಮಕ್ಕಳ ಸುರಕ್ಷತೆ ವಿಚಾರದಲ್ಲಿ ಅವರು ಲಘುವಾಗಿ ವರ್ತಿಸಬಾರದು. ಮುಂದೆ ಮದ್ಯ ಸೇವಿಸಿ ಚಾಲಕರು ಪತ್ತೆಯಾದರೆ ಆಯಾ ಆಡಳಿತ ಮಂಡಳಿಗಳನ್ನು ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.