2027ಕ್ಕೆ ಉಪನಗರ ರೈಲು ಲೋಕಾರ್ಪಣೆ - 287 ಕಿ.ಮೀ. ವರ್ತುಲ ರೈಲ್ವೆಗೆ ಡಿಪಿಆರ್: ಸೋಮಣ್ಣ

| N/A | Published : Feb 15 2025, 10:17 AM IST

Cancer Special Train

ಸಾರಾಂಶ

 ದೇವನಹಳ್ಳಿ, ದೊಡ್ಡಬಳ್ಳಾಪುರ, ಹೀಳಲಿಗೆ ಸೇರಿದಂತೆ ಇನ್ನಿತರ ಪ್ರದೇಶವನ್ನು ಸಂಪರ್ಕಿಸುವ 287 ಕಿ.ಮೀ ಉದ್ದದ ವರ್ತುಲ ರೈಲು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.

 ಬೆಂಗಳೂರು : ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೇರಿಸಲು ಸಾರಿಗೆ ವ್ಯವಸ್ಥೆಯನ್ನು ಉತ್ತಮಗೊಳಿಸಬೇಕಿದ್ದು, ದೇವನಹಳ್ಳಿ, ದೊಡ್ಡಬಳ್ಳಾಪುರ, ಹೀಳಲಿಗೆ ಸೇರಿದಂತೆ ಇನ್ನಿತರ ಪ್ರದೇಶವನ್ನು ಸಂಪರ್ಕಿಸುವ 287 ಕಿ.ಮೀ ಉದ್ದದ ವರ್ತುಲ ರೈಲು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.

ಬೆಂಗಳೂರು ಅರಮನೆಯಲ್ಲಿ ಶುಕ್ರವಾರ ಇನ್ವೆಸ್ಟ್ ಕರ್ನಾಟಕದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಯೋಜನೆಗಾಗಿ ವಿವರ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲಿ ಅದನ್ನು ಪೂರ್ಣಗೊಳಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಉಪನಗರ ರೈಲು ಯೋಜನೆ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, 2027ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು. ಯಾವುದೇ ಉದ್ಯಮಕ್ಕಾದರೂ ಹೂಡಿಕೆಗೆ ಕರ್ನಾಟಕ ಪ್ರಾಶಸ್ತ್ಯ ತಾಣವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರವು ಕೈಗಾರಿಕಾ ಸ್ನೇಹಿಯಾಗಿ ಕೆಲಸ ಮಾಡುತ್ತಿದ್ದು, ಕರ್ನಾಟಕ ಅಭಿವೃದ್ಧಿಯಿಂದಾಗಿ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಗ್ರೀಸ್ ದೇಶದ ಮಾಜಿ ಪ್ರಧಾನಿ ಜಾರ್ಜ್ ಪಾಪೆಂಡ್ರೋ, ಸಂಸದ ಶಶಿ ತರೂರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎಚ್.ಕೆ. ಪಾಟಿಲ್, ಈಶ್ವರ್ ಖಂಡ್ರೆ, ಡಾ.ಎಂ.ಸಿ.ಸುಧಾಕರ್, ಶಿವರಾಜ ತಂಗಡಗಿ, ಪ್ರಿಯಾಂಕ್ ಖರ್ಗೆ ಇದ್ದರು.