ಸಾರಾಂಶ
ಕಳೆದ ಆರೇಳು ತಿಂಗಳಿನಿಂದ ತಾತ್ಕಾಲಿಕವಾಗಿ ನಿಷೇಧಿಸಲಾಗಿದ್ದ ಚಾರಣ ಪ್ರಕ್ರಿಯೆಗೆ ಅರಣ್ಯ ಇಲಾಖೆ ಶುಕ್ರವಾರದಿಂದ ಮತ್ತೆ ಚಾಲನೆ ನೀಡುತ್ತಿದೆ.
ಬೆಂಗಳೂರು : ಕಳೆದ ಆರೇಳು ತಿಂಗಳಿನಿಂದ ತಾತ್ಕಾಲಿಕವಾಗಿ ನಿಷೇಧಿಸಲಾಗಿದ್ದ ಚಾರಣ ಪ್ರಕ್ರಿಯೆಗೆ ಅರಣ್ಯ ಇಲಾಖೆ ಶುಕ್ರವಾರದಿಂದ ಮತ್ತೆ ಚಾಲನೆ ನೀಡುತ್ತಿದೆ.
ಜನವರಿ 26 ಮತ್ತು 27ರಂದು ಕುಮಾರಪರ್ವತ ಚಾರಣ ಪಥಕ್ಕೆ ಸಾವಿರಾರು ಜನರು ಆಗಮಿಸಿದ ಕಾರಣದಿಂದಾಗಿ ಅರಣ್ಯ ಪ್ರದೇಶದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಹೀಗೆ ಸಾವಿರಾರು ಜನರು ಅರಣ್ಯ ಪ್ರದೇಶಕ್ಕೆ ಬರುವುದನ್ನು ತಡೆದು ನಿರ್ಧಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರವೇ ಅವಕಾಶ ಕಲ್ಪಿಸಲು ರಾಜ್ಯದಲ್ಲಿ ತಾತ್ಕಾಲಿಕವಾಗಿ ಚಾರಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು.
ಇದೀಗ ಚಾರಣ ಪಥಗಳಿಗೆ ತೆರಳುವವರಿಗೆ ಅನುಮತಿ ನೀಡುವುದು ಹಾಗೂ ಚಾರಣ ಪಥದ ಪ್ರವೇಶಕ್ಕೆ ಶುಲ್ಕ ವಿಧಿಸಲು ಅರಣ್ಯ ಇಲಾಖೆ ಹೊಸ ವೆಬ್ಸೈಟ್ ಸಿದ್ಧಪಡಿಸಿದೆ. ಗುರುವಾರ ಆ ವೆಬ್ಸೈಟ್ನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಲಿದ್ದು, ನೂತನ ವೆಬ್ಸೈಟ್ನಿಂದ ಚಾರಣಿಗರು ಟಿಕೆಟ್ ಖರೀದಿಸಿ ಶುಕ್ರವಾರದಿಂದ ಚಾರಣಕ್ಕೆ ತೆರಳಲು ಅವಕಾಶ ಕಲ್ಪಿಸಲಾಗುತ್ತಿದೆ.