ಸಾರಾಂಶ
ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವ ಪ್ರಕರಣಗಳು ಹೆಚ್ಚುತ್ತಿದ್ದು, ಭಾನುವಾರ ಮತ್ತೆ ನಾಲ್ವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವ ಪ್ರಕರಣಗಳು ಹೆಚ್ಚುತ್ತಿದ್ದು, ಭಾನುವಾರ ಮತ್ತೆ ನಾಲ್ವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಭಾರೀಬೈಲು ಗ್ರಾಮದ ಯುವತಿ ಮೀನಾಕ್ಷಿ (27) ಹಾಗೂ ಬಿ.ಹೊಸಹಳ್ಳಿಯ ಸುಮಿತ್ರೇಗೌಡ (75) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸುಮಿತ್ರೇಗೌಡ ಮನೆಯಲ್ಲಿಯೇ ಕುಸಿದು ಬಿದ್ದು ಅಸುನೀಗಿದರು.
ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಹೃದಯಾಘಾತವಾಗಿ ಬೆಂಗಳೂರಿನ ಜಯನಗರದ ನಿವಾಸಿ ರಂಗನಾಥ್ (57) ಅಸುನೀಗಿದ್ದಾರೆ. ಪತ್ನಿ, ಪುತ್ರಿ ಜೊತೆ ಅವರು ಮಂಗಳೂರಿಗೆ ಪ್ರವಾಸಕ್ಕೆ ತೆರಳಿದ್ದರು. ಟ್ರಿಪ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಬರುತ್ತಿದ್ದಾಗ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕೊಂಗಲಬೀಡಿನ ನಿವಾಸಿ ಆನಂದ್ (44) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಭಾನುವಾರ ಮುಂಜಾನೆ 4ರ ಸುಮಾರಿಗೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತು.
ಯಾದಗಿರಿ ಜಿಲ್ಲೆಯ ಶೆಟ್ಟಿಕೇರಾ ಗ್ರಾಮದಲ್ಲಿ ಮೊಹರಂ ಆಚರಣೆ ವೇಳೆ ಅಗ್ನಿಕುಂಡ ತುಳಿದ ಕೆಲ ಗಂಟೆಗಳಲ್ಲೇ ಹಳ್ಳೆಪ್ಪ ಪೂಜಾರಿ (44) ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಗ್ನಿಕುಂಡ ತುಳಿದ ನಂತರ ದೇಗುಲ ಪಕ್ಕದ ಕೊಠಡಿಯಲ್ಲಿ ಕುಳಿತು ನೀರು ಕುಡಿಯುವಷ್ಟರಲ್ಲಿ ಕುಸಿದು ಬಿದ್ದಿದ್ದಾರೆ. ಚಾಮರಾಜನಗರದಲ್ಲಿ 52 ವರ್ಷದ ಶಿವಕುಮಾರ್ ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದು, ಅಲ್ಲಿಯೇ ಅಸುನೀಗಿದರು.